Wednesday, April 11, 2012

ಈ ಸಂಜೆಯ ತೀರದಲ್ಲಿ....


            ಸಂಜೆತೀರವೆಂಬುದು ಎಷ್ಟೊಂದು ಆಪ್ತ! ಗೊತ್ತಲ್ಲ! ವಾಕಿಂಗ್ ಅನ್ನೋದು ಪೇಟೆಜನರ ಫ್ಯಾಷನ್ ಆದರೂ ಆರೋಗ್ಯವೂ ಅದರ ಅಷ್ಟೇ ಪ್ರಮುಖ ಉದ್ದೇಶ.
 ಈ ವಾಕಿಂಗ್ ಶಬ್ಧಕ್ಕಿಂತ ಸಂಜೆಯ ತೀರದ ನಡಿಗೆ ಎಂಬುದು ಒಂದಿಷ್ಟು ಆಪ್ತ ಎಂಬುದು ಸುಳ್ಳಲ್ಲ.. ಅದೂ ನದೀತೀರದ
ಅಥವಾ ಸಮುದ್ರತೀರದ ಸಂಜೆಯ ನಡಿಗೆ ಸುಮ್ಮನೇ ಮನುಷ್ಯ ಮನಸಿನ ಒಳಗೆಲ್ಲ ಭಾವದ ರಸವ ಪುಟ್ಟ ತೆರೆಗಳಾಗಿ ಹೊಮ್ಮಿಸುತ್ತವೆ ಎಂಬುದು ಸುಳ್ಳಲ್ಲ.
 ಶುಭ ಸಂಜೆ ಹಾಗೂ ಶುಭ ಮುಂಜಾವುಗಳಲ್ಲಿ ಮೆಲ್ಲನೇ ಗಾಳಿಯಲ್ಲಿ ನಡೆಯುತ್ತಿದ್ದರೆ ಪಕ್ಕದಲ್ಲಿ ಯಾರಿಲ್ಲದಿದ್ದರೂ ನಲ್ಲನಂತೆ ತೋರುವ ನೆರಳಿರುತ್ತದಲ್ಲ. ಅದೇ ಆಪ್ತವೆನ್ನಿಸುತ್ತದೆ. ಸುಮ್ಮನೇ ಮನಸ್ಸು ಉಲ್ಲಸಿತನಿಸುತ್ತದೆ. ನಾನು ಹೇಳೋಕೆ ಹೊರಟಿರೋದು ಒಂದಿಷ್ಟು ನದೀ ತೀರದ ಇಂತದ್ದೇ ಮಾತುಗಳನ್ನಾದರೂ ಹೇಳ್ತಾ ಇರೋದರ ಹಿನ್ನಲೆ ಇನ್ನೊಂದಿಷ್ಟು ವಿಸ್ಮಯವಾದುದು.. ಕೇಳೋದಕ್ಕೆ ಬೋರಾದರೂ ಹಾಗೆಂದು ಹೇಳಬೇಡ.
ನನಗೆ ನೋವಾಗುತ್ತದೆ. ಕೇಳಿಸ್ಕೋ ನನಗಾಗಿ..


       ನಿಂಗೆ ಗೊತ್ತಾ? ಈ ಮುಸ್ಸಂಜೆಯ ಹೊತ್ತಲ್ಲಿ ತುಂಬಾ ಶಾಂತವಾದ ಮುದಿಮುದಿ ಜೋಡಿಗಳು ಕೈಕೈ ಹಿಡಿಯದಿದ್ದರೂ ಒಂದೇ ಹೆಜ್ಜೆಯ ಅಂತರದಲ್ಲಿ ಸಂಚರಿಸುವುದು ನೋಡಿದಾಗ ನನಗೆಲ್ಲೋ ಒಳಗೊಳಗೆ ತಂಪುತಂಪೆನಿಸುತ್ತದೆ. ಅವರನ್ನ ನೋಡುತ್ತಿದ್ದಂತೆ ನಾನು ಅರಿವಿಲ್ಲದೇ ನನ್ನ ಮುದಿತನಕ್ಕೆ ಧಾವಿಸುತ್ತೇನೆ!ಇಷ್ಟು ಶಾಂತ ಮುಸ್ಸಂಜೆಗಳು ನಮ್ಮ ಬದುಕಿಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮಂತೆ ದಿನದಿನದ ಹೋರಾಟದ ಬದುಕನ್ನು ಬದುಕಿಯೇ ಅವರು ಬಂದಿದ್ದಾರೆಂಬುದು ನನ್ನ ನಂಬಿಕೆ. ಪ್ರತೀ ಮನುಷ್ಯರ ಬದುಕಲ್ಲೂ ಏಳು ಬೀಳುಗಳು, ನೋವು ನಲಿವುಗಳು ಇದ್ದೇ ಇವೆ. ಏನೇನೋ ಕಾರಣಗಳಿಂದ ಮುನಿಸು, ಧಾವಂತ. ಅಸಹನೆ. ಅಪ್ರಬುದ್ಧತೆಯ ದೋಷಗಳು ಎಲ್ಲರ ಬದುಕನ್ನು ಕಾಡಿವೆ. ಸರಿತಪ್ಪುಗಳ ನಡುವೆ ಗೆರೆ ಎಳೆದಂತೆ ನಾವ್ಯಾರೂ ಬದುಕಿಲ್ಲ. ಬದುಕಲಾರೆವು. ಹಾಗೆಂದೇ ಅನುಭವಗಳ ಸಾರ ಹೊತ್ತು
ನಡೆವ ನಡಿಗೆ ತುಂಬ ಭಾರವಾಗಿಬಿಡಬಹುದೆಂದು ನನಗನ್ನಿಸುತ್ತದೆ. ಉಹೂಂ ವಿಸ್ಮಯವೆಂದರೆ ಇದೇ.... ವಯಸ್ಸಿನ ಉಡುಗೆತೊಡಿಗೆಯಂತೆ ಈ ಬದುಕಿನ ಎಲ್ಲ ಅನುಭವಗಳೂ ಒಂದು ತೆಳುವಾದ ಪರದೆ ನಿಮರ್ಿಸಿವೆಯೇನೋ ಎಂಬಂತೆ ಮನುಷ್ಯನ ಒಳಗೂ ಹೊರಗೂ ಒಂದು ಬಿಳಿಯ ಶುಭ್ರ ತೆರೆಯ ನಿಮರ್ಿತಿ ತೋರಿಬರುತ್ತದೆ. ಇಳಿ ವಯಸ್ಸಿನ
ಅಗತ್ಯಗಳೇನೋ ಎಂಬಂತೆ ಒಬ್ಬರಿಗೊಬ್ಬರು ಆಧಾರವಾಗಿ ಊರುಗೋಲಿನಂತೆ ಇರುವ ಈ ಬದುಕುಗಳಲ್ಲೂ ಒಂದು ದಿನ ಎಷ್ಟೆಲ್ಲ ಭೋರ್ಗರೆತಗೆಳಿದ್ದಿರಬಹುದು!
 ಹೋರಾಟಗಳಿದ್ದಿರಬಹುದು! ಹೀಗೆಲ್ಲ ಯೋಚಿಸುವಾಗ ತೀರದೊಳಗಿನ ಈ ನಡಿಗೆ ಮತ್ತಷ್ಟು ಗಂಭೀರವೂ ಮತ್ತಷ್ಟು ಬೆಲೆಯುಳ್ಳದ್ದೂ ಅನ್ನಿಸುತ್ತದೆ.

           ಹಾಗೇ ಖೇದವೆನಿಸುವ ಇನ್ನೊಂದಿಷ್ಟು ಅನಿಸಿಕೆಗಳನ್ನೂ ಹೇಳಿಬಿಡುತ್ತೇನೆ. ನೀನು ಅಂತಲ್ಲ. ನಾವೇ ನಾವು... ನಾವೆಲ್ಲರೂ ಬದುಕುವ ಇವತ್ತನ್ನು, ಬದುಕಿದ ನಿನ್ನೆಗಳನ್ನು ಬದುಕಬಹುದಾದ  ನಾಳೆಗಳನ್ನು  ಮನುಷ್ಯಮಿತಿಗಿಂತ ಚಿಕ್ಕದಾಗಿಸಿಕೊಂಡಿದ್ದೇವೆೆ ಯಾಕೆ ಹಾಗೆ!!  ಸಂಭ್ರಮಿಸಬಹುದಾದ ಎಷ್ಟೊಂದು ಕ್ಷಣಗಳನ್ನು ಕೇವಲ ನಮ್ಮ ಅಹಮಿನ
ಕಾರಣಕ್ಕೆ ಕಳೆದುಕೊಂಡಿದ್ದೇವೆ! ಪ್ರಪಂಚದ ತುಂಬೆಲ್ಲ ಪ್ರಕೃತಿಯಂತ ಚೆಲುವು ಇನ್ಯಾವುದು ಇದೆಯೋ ನನಗಂತೂ ಹೋಲಿಕೆಗೆ ಇನ್ನೇನು ತೋರುವುದಿಲ್ಲ. ಆದರೆ ಅಹಮಿನ ಕಾರಣಕ್ಕೆ ಸೌಂದರ್ಯವೆಂಬುದು ನೋಡಲಾರದ, ಅನುಭವಿಸಲಾರದ, ಕೇಳಲಾರದ, ವ್ಯಕ್ತಪಡಿಸಲಾರದ ಗಟ್ಟಿ ಗೋಡೆಯ ನಡುವೆ ಬಂಧಿಸಿಕೊಂಡಿದ್ದೇವೆ. ಪ್ರೀತಿಯನ್ನು ವ್ಯಕ್ತಪಡಿಸುವುದು ಒಂದು ಕಲೆ ನಿಜ.ಹಾಗೇ ಸೌಂದರ್ಯವನ್ನು  ಆರಾಧಿಸಿವುದೂ ಒಂದು ಕಲೆಯೇ...  ಪ್ರೇಮವೆಂಬುದು ನಿರರ್ಗಳವಾಗಿ ಹರಿಸಿಕೊಂಡ ಪತಿ ಪತ್ನಿಯರ ನಡುವೆಯೇ ಮತ್ತೊಂದು ದಿನ ಪ್ರೇಮವನ್ನು ವ್ಯಕ್ತಪಡಿಸಿ ಸಂಭ್ರಮಿಸಿಕೊಳ್ಳುವ ಮನಸ್ಥಿತಿಯೇ ಉಳಿಯದೇ ಹೋಗುವುದೂ ಈ ಮನಸುಗಳ ದುರಂತ! ಪ್ರೇಮಕ್ಕೆ ಸಂಭ್ರಮಕ್ಕೆ, ಆನಂದಕ್ಕೆ ಬೇಕಾದದ್ದು
ಗಂಭೀರತೆ ಪ್ರೌಢತೆಯ ಮುಖವಾಡಗಳಲ್ಲ. ವ್ಯಕ್ತಪಡಿಸಬಹುದಾದ ಉತ್ಕೃಷ್ಟ ಮಾರ್ಗವೆಂದರೆ  ತನ್ನ ಸಂಭ್ರಮವನ್ನು ಹಂಚಿಕೊಳ್ಳುವುದು. ನಮ್ಮವರ ಸಂಭ್ರಮವನ್ನು ಹೆಚ್ಚಿಸುವುದು.
                  ಬಹುಶಃ ಪ್ರೇಮಕ್ಕೆ ಇಂತಹ ಕೊಡುಗೆಗಳಿಗಿಂತ ಹೆಚ್ಚಿನ ನಿರೀಕ್ಷೆಯಿರುವುದಿಲ್ಲ.  ಒಬ್ಬೊಬ್ಬರ ಸಂಭ್ರಮ ಒಂದೊಂದರಲ್ಲಿರಬಹುದು. ಇಲ್ಲವೆನ್ನಲಾರೆ. ಆದರೆ ಮಾಮೂಲಿಯಾಗಿ ಎಲ್ಲರ ಸಂಭ್ರವೂ ಪ್ರೇಮವನ್ನು ಹಂಚಿಕೊಳ್ಳುವುದರಲ್ಲೇ ಇದೆ ಎಂಬುದು ನನ್ನ ಅನಿಸಿಕೆ.
    ಯಾವತ್ತೋ ಒಂದಿನ ಎಲ್ಲೋ ಕೇಳಿದ ವಿಷಯ. ಪ್ರೇಮವೆಂಬುದು ಪತಿ ಪತ್ನಿಯರದ್ದಷ್ಟೇ ಅಲ್ಲ. ಎಲ್ಲ ಸಂಬಂಧಗಳೂ ಪ್ರೀತಿ ಹಂಚಿಕೊಳ್ಳುವುದರಲ್ಲೇ ತಮ್ಮ ಸಂಬಂಧದ ಸಾರ್ಥಕತೆಯನ್ನು ಉಳಿಸಿಕೊಳ್ಳುತ್ತವೆ. ತಾಯಿ ಮಗುವನ್ನೆಷ್ಟೇ ಪ್ರೀತಿಸಿಕೊಳ್ಳುತ್ತಾಳೆ ಎಂದರೂ ಆ ಪ್ರೀತಿ ಕ್ರಿಯೆಯ ರೂಪದಲ್ಲೋ ಅಗತ್ಯಗಳ ಪೂರೈಕೆ ರೂಪದಲ್ಲೋ,
ಅವಳ ಸ್ಪರ್ಷದ ರೂಪದಲ್ಲೋ ಅವಳ ಮಾತಿನ ರೂಪದಲ್ಲೋ ವ್ಯಕ್ತವಾಗದುಳಿದರೆ ಆ  ತಾಯಿ ಮಗುವಿನ ನಡುವೆ ಒಂದು ಆನಂದದ ರಸೋಲಹರಿ ಯಾವತ್ತೂ ಹರಿಯಲಾರದಲ್ವ? ಹೊಕ್ಕಳು ಬಳ್ಳಿಯ ಆ ಸಂಬಂಧ ಎದೆಹಾಲಿನ ಧಾರೆಯಾಗಿ ತಾಯಿ ಮನಸ್ಸಿನ ಆನಂದಕ್ಕೆ ಕಾರಣವಾಗುವುದೂ ಒಂದು ಅಸದೃಶ ದೃಶ್ಯಕಾವ್ಯವೆನಿಸುವುದೂ  ನಡುವಿನ ವ್ಯಕ್ತತೆಯ ಕಾರಣಕ್ಕೆ.  ಇಲ್ಲಿ ಅವ್ಯಕ್ತವೆಂಬುದು ಪ್ರೀತಿಯಲ್ಲ ಎಂದು ನಾನು ಹೇಳುತ್ತಿಲ್ಲ. ನಿನಗೆ ಅರ್ಥವಾದೀತಾ? ವ್ಯಕ್ತತೆ ಮಾತ್ರ ಹೆಚ್ಚು ಸಂಭ್ರಮಿಸುವ  ಅವಕಾಶವನ್ನು ಕಟ್ಟಿಕೊಡುತ್ತದೆ. ಅದೇ ಕಾರಣಕ್ಕೆ ಪ್ರೀತಿ ಅತ್ಯದ್ಧುತ ಆನಂದವನ್ನು ಹಂಚುವ ರಾಯಭಾರಿಯೆಂದು ನನಗನ್ನಿಸುತ್ತದೆ.
             ಇಳಿವಯಸ್ಸಿನ ಈ ಯುವಕರು ತಮ್ಮ  ಸಾಲುಸಾಲು ಅದೆಷ್ಟೋ ವರ್ಷಗಳನ್ನ ರಮ್ಯವಾಗಿಸಿಕೊಂಡು ಬಂದಿರಬಹುದು!ಆದರೆ ಹೆಚ್ಚು ಜನ ತಮ್ಮ ಸಾಲುಸಾಲು ವರ್ಷಗಳನ್ನ
ಕೆಲಸ, ಕಾರ್ಯ, ದುಡಿತಾಯ, ಪ್ರೆಸ್ಟೀಜ್ ನ ನಿರ್ವಹಣೆಗಳಲ್ಲಿ ಕಳೆದವರೇ ಇದ್ದಾರೆ. ಇಪ್ಪೊತ್ತೊಂದರೆ ಹರಯದ ಕನಸುಗಳೆಲ್ಲ ಕೈಗೂಡಿ ಕೆಲಸ, ಮದುವೆ, ಮಗು ಆಗುವಷ್ಟರಲ್ಲಿ ಕಳೆದುಹೋಗುವ ಈ ಜೋಡಿಗಳು ಆ ಮೇಲೆ ಅರವತ್ತರ ಗಡಿ ದಾಟುವವರೆಗೂ ತಮ್ಮ ಸಂಭ್ರಮವನ್ನು ತಮ್ಮವರ ಸಂಭ್ರಮವನ್ನೂ ಅಗತ್ಯಗಳ ಪೂರೈಕೆಯ ಹೊಣೆ ಹೊತ್ತ
ಗಾಣದೆತ್ತಿನಂತೆ ದುಡಿಯುವುದರಲ್ಲಿ ಕಳೆಯುತ್ತಾರೆ!  ದಣಿವನ್ನು ಆರಿಸಿಕೊಳ್ಳುವ ಪ್ರೀತಿಯನ್ನು, ಉತ್ಸಾಹ ತುಂಬಿಕೊಳ್ಳುವ ಆನಂದವನ್ನು  ದಿನದಿನಕ್ಕೆ ಹಿಡಿದಿಟ್ಟುಕೊಳ್ಳುವುದು ಕೆಲವೇ ಜನರು. ಅಂತವರ ಬದುಕು ಅರವತ್ತರಲ್ಲೂ ಸಂಭ್ರಮ! ಹದಿನಾರರ ಹುಮ್ಮಸ್ಸಿನ ಯೌವ್ವನ.ಅವರನ್ನು ನೋಡುತ್ತಿದ್ದರೆ ಎಂತವರ
 ಬದುಕಿನಲ್ಲೂ ಉತ್ಸಾಹ ಚಿಮ್ಮುತ್ತದೆ. ಪ್ರತೀ ಬೆಳಗನ್ನು  ಆಹಾ! ಬೆಳಗಾಯಿತು! ಎಂದು ಸಂಭ್ರಮಿಸುವ ಬದುಕು ನಮ್ಮದಾದರೆ ನಿಜಕ್ಕೂ ಎಷ್ಟು ಚೆಂದ! ನಮ್ಮೆಲ್ಲರಿಗೂ ಬೆಳಗಾಗೋದು ಇದ್ದೇ ಇದೆ. ಅದರಲ್ಲೇನು ಅಂತ ಸಿಡಿದುಕೊಂಡೇ ಎದ್ದರೆ ಯಾವ ಬೆಳಗುಗಳೂ ಹಿತನೀಡುವುದಿಲ್ಲ. ಅಷ್ಟೇ ಅಲ್ಲ. ಎಲ್ಲರಿಗೂ ಒಂದೇ ಬೆಳಗು. ಒಂದೇ ವಿಷಯ ಅಂದುಕೊಂಡರೆ
ಅಲ್ಲಿ ಯಾವ ಸಂಭ್ರಮವೂ ಇಲ್ಲ. ಪ್ರತೀ ಬೆಳಗು ಸಂಜೆಗಳು ಶುಭವೇ ಆಗಿರಬೇಕೆಂದಿಲ್ಲ. ಆದರೆ ನಾವು ವ್ಯಕ್ತಪಡಿಸುವ ಶುಭ...ಗಳು ನಮ್ಮವರ ಮುಗುಳ್ನಗುವನ್ನೂ ನಮ್ಮೊಳಗೆ ಒಂದು ಪುಟ್ಟ ಕಿರುನಗೆಯನ್ನೂ ಹಾಯಿಸುತ್ತದೆ ಅಂತಾದರೆ ಪ್ರೀತಿಗೆ ಇದಕ್ಕಿಂತ ಹೆಚ್ಚಿನದೇನು ಕೊಡಬಹುದು?ಬಹುಶಃ ಪ್ರೀತಿ ಬಯಸುವುದು ಇಷ್ಟನ್ನೇ...

   ಮುಸ್ಸಂಜೆಯ ನದೀತೀರದ ಈ ವೃದ್ಧಜೋಡಿಗಳ ಜೊತೆ ನನ್ನ ಮಾತು ಎಲ್ಲೆಲ್ಲಿಗೋ ಹೋಯಿತಲ್ಲ. ಭಾವಲಹರಿಯ ಈ ಮನಸಿಗೆ ಕೊನೆಯೆಂಬುದಿಲ್ಲ. ಅದು ಹೀಗೆ..
ಸುತ್ತಿಬಳಸಿ ಹರಿಯುವ ನದಿಗಳಂತೆ...ಮತ್ತೆ ಸಿಗುವಾ ಮತ್ತೊಂದು ಕ್ಷಣದಲ್ಲಿ.........





Wednesday, April 4, 2012

ತೀರದೊಳಗೆ ನಿಂತು.....

ಮಳೆಯೊಂದಿಗೆ  ಮನ......

    ಇವತ್ತು  ಈ ವರ್ಷದ ಮೊದಲ ಮಳೆ ಬಂತು.. ಮಳೆಯೊಂದಿಗೆ ನಿನ್ನ ನೆನಪಾಯಿತು ಅನ್ನೋದು ವಿಶೇಷವಲ್ಲ.
 ನಿನ್ನ ನೆನಪಾಗದಿದ್ದರೆ ಅದು ವಿಶೇಷ. ಹಾಂ  ಮಳೆಯ ಈ ತಂಪುಗಾಳಿಯೊಂದಿಗೆ ಒಂದಿಷ್ಟು ಗುಡುಗೂ ಮಿಂಚೂ
ಈ ಮಳೆಯೊಂದಿಗೆ  ವಾತಾವರಣವನ್ನಾಕ್ರಮಿಸಿಕೊಂಡದ್ದೂ   ವಿಶೇಷವಲ್ಲ. ಆದರೆ ಮಳೆ ತಂದ ಮಣ್ಣಿನ ಸುವಾಸನೆಯಿದೆಯಲ್ಲ!!
 ಅದೊಂತರಾ ಬೆವರಿನ ಕಂಪು ಕೊಡುವ ಸುಖವಿದ್ದಂತೆ.ಈ ಮಣ್ಣಲ್ಲಿ ಅದೆಷ್ಟು ರಸವಿದೆಯೇನೋ ಎಂಬಂತೆ ಭೂಮಿಯನ್ನಾವರಿಸಿಕೊಂಡ
 ತಂಪಿನ ಕಂಪಿದೆಯಲ್ಲ ಅದು ಮೂಗಿನ ಹೊಳ್ಳೆಗಳನ್ನು ಸೇರಿ ಉಸಿರು ತುಂಬಿಕೊಂಡ ಜೀವದಲ್ಲೆಲ್ಲ
ಒಂದು ನವಿರಾದ ಕಂಪನವನ್ನು ಹುಟ್ಟಿಸಿದ್ದು ಸುಳ್ಳಲ್ಲ. ಅದಕ್ಕೆಂದೇ ವರ್ಷ ವರ್ಷ ನಾನು ಈ ಮಳೆಗಾಗಿ
ಕಾಯುವುದೂ  ಸುಳ್ಳಲ್ಲ. ನೀನಿರದ ಎಷ್ಟೋ ವರ್ಷಗಳಲ್ಲಿ ಈ ಕಂಪು  ನನ್ನ ಜೀವಂತವಾಗಿಸಿಟ್ಟ
ಸಂಜೀವಿನಿ ತಾನೆ? ನನ್ನಂತೆ ಅದೆಷ್ಟೋ ಜೀವಗಳ ಒಳಹೊರಗೆ ಈ ಮಣ್ಣ ಕಂಪಿನ ಹಸಿಯಿದೆ
ಎಂದು ನಾ ಬಲ್ಲೆ. ಅಂತವರ ಮನಸೆಲ್ಲ ಒಮ್ಮೆ ಹಸಿಯಾಗಲೆಂದೇ ಈ ನೆನಪು.. ಈ ಬರಹ..

     ಈ ಭಾವಗಳ ಪ್ರಪಂಚದಲ್ಲಿ ಅಚಾನಕ್  ಒಂದು ದಿನ, ಒಂದು ಕ್ಷಣ, ತುಂಬ ಆಪರೂಪದ
 ಕ್ಷಣವೊಂದರಲ್ಲಿ ಅವಳ ಪರಿಚಯವಾಯಿತು. ಅವಳೇ ಮಾನವೀಯ ಮೌಲ್ಯ.  ಅವಳ ಕುರಿತು
ಯಾರ್ಯಾರು ಎಷ್ಟೆಷ್ಟು ದೊಡ್ಡ ದೊಡ್ಡ ಮಾತು ಹೇಳಿದ್ದಾರೆ ಅದೆಲ್ಲ ಇಲ್ಲಿ ಹೇಳಹೊರಟರೆ ಅದು
ಶಾಲಾ ಮೇಷ್ಟ್ರು ಒಬ್ಬರ ಭಾಷಣವಾದೀತು. ಆದರೆ ಆ ಸಖೀಯ ಪರಿಚಯ ನನಗಾದುದು ನನ್ನ
ಸೌಭಾಗ್ಯವೆಂದೇ ಹೇಳಬೇಕು  ಎಲ್ಲೆಲ್ಲೋ ಅಲ್ಲ. ನನ್ನ ಒಡನಾಡಿಯಾಗಿ ನನ್ನ ಸುತ್ತಮುತ್ತಲ
ಬದುಕಿನೊಂದಿಗೆ ಸಹನೆಯಿಂದ, ಪ್ರೀತಿಯಿಂದ  ಬದುಕಲು ಕಲಿಸಿದ್ದೇ ಆ ಮಾನವೀಯತೆ ಯೆಂಬ
ಆಪ್ತ ಸಖೀ. ಬದುಕಿನ ವಾಸ್ತವದಲ್ಲಿರುವ ಸಾವಿರ ಸಂಕಷ್ಟಗಳನ್ನು ನೋಡಲು ಮತ್ತದನ್ನು
ಅನುಭವಿಸಲು  ಆ  ನೋವನ್ನು  ಸಂತೈಸಲು  ಕಣ್ಣುತುಂಬಾ  ನೀರು ತುಂಬಿಕೊಂಡು
ನೊಂದವರ ಬದುಕಿನ ಸಾಂತ್ವನವಾಗಲು ಹೇಳಿಕೊಟ್ಟ ಅವಳನ್ನು ನಾನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಸಾವಿರ ಜನರಿಗೆ ಆಧಾರವಾಗೋ ಶಕ್ತಿ ನನ್ನಲ್ಲಿ ಇಲ್ಲದಿರಬಹುದು.
ಪಕ್ಕದಲ್ಲಿರುವ  ನನ್ನ ಗೆಳತಿಯ ಕೈಗೆ ಕೈನೀಡೋ ಶಕ್ತಿಯಿದ್ದರೆ ಅದಷ್ಟನ್ನಾದರೂ ಮಾಡುವ ಮನಸ್ಸು ಕೊಟ್ಟದ್ದು ಈ ಮಾನವೀಯತೆಯೇ............
   ನನ್ನದೇ ತಪ್ಪುಒಪ್ಪುಗಳ ಬದುಕಲ್ಲಿ ನೋವುಗಳನ್ನು ಬದುಕಲು ಕಲಿಸಿದ್ದು ನೋಯುವ ರೋಗವಲ್ಲ
 ಎಂಬುದು  ನಿನಗೆ ಅರ್ಥವಾಗಿಸಲಾರೆ ನಾನು. ನೋವನ್ನು ನೋವು ಅಂತ ಒಪ್ಪಿಕೊಂಡರೆ
ಸಾಕು, ಅರ್ಧ ನೋವಿನ ಭಾರ ಕಮ್ಮಿಯಾಗುತ್ತದೆಯೆಂಬ ಸತ್ಯ ಗೊತ್ತಿರೋದ್ರಿಂದಲೇ ಇನ್ನೊಬ್ಬರ
ನೋವನ್ನೂ ಒಪ್ಪಿಕೊಳ್ಳುತ್ತ ಅನುಭವಿಸುತ್ತೇನೆ ನಾನು. ಪ್ರಪಂಚದ ತುಂಬಾ ನೋವು ಮಾತ್ರವಲ್ಲ.
ನಲಿವೂ ಇದೆ ಬೇಕಾದಷ್ಟು. ನನಗೇನೋ ನೋವನ್ನು ಹಂಚಿಕೊಳ್ಳಲಾರದ ಒಪ್ಪಿಕೊಳ್ಳಲಾರದವರೊಂದಿಗೆ 
ನಲಿವನ್ನು  ಹಂಚಿಕೊಳ್ಳೆಲೆಂಬುದು ಒಂದು ಅರ್ಧ ಸತ್ಯದಂತೆ ತೋರುತ್ತದೆ. ನಲಿವನ್ನು ಹಂಚುವುದೂ ಸಹ ಒಂದು
 ಸುಂದರ ಕಲೆಯೇ..... ಮನುಷ್ಯ ತನ್ನೆಲ್ಲ ನೋವುಗಳನ್ನು.   ಕಷ್ಟ ಸುಖಗಳನ್ನು ಅನುಭವಿಸುವುದು ಮತ್ತದನ್ನ ಹೇಳಿಕೊಳ್ಳುವುದೂ
 ಸಾಮಾನ್ಯ ವಿಷಯ. ಇನ್ನೊಬ್ಬರ ಬದುಕನ್ನ ಸಂಭ್ರಮದಿಂದ ಇಟ್ಟುಕೊಳ್ಳೋದಕ್ಕಾಗಿ, ನಮ್ಮ ನಮ್ಮ
ಕಷ್ಟ ಮರೆತು  ನಗುವನ್ನು ನಲ್ಮೆಯನ್ನು ಹಂಚುವವರಿರುತ್ತಾರಲ್ಲ.ಅವರನ್ನು ನೋಡಿ ನಾನು ತುಂಬ
ಕಲಿಯುತ್ತೇನೆ. ಮತ್ತವರ ಪ್ರೌಢತೆಗೆ ಬೆರಗಾಗುತ್ತೇನೆ.
       ಉದಾಹರಣೆಗೆ  ಪುಟ್ಟ ಪುಟ್ಟ ಗುಬ್ಬಚ್ಚಿಗಳು...  ನಮ್ಮ  ಮನೆಯ ನಾಯಿ ಮರಿಗಳು..
ನೀರಲೆಯ ಮೇಲಿನ ಮಳೆ ಹನಿಗಳು.....ಏನನ್ನೂ ಕೇಳದ ತಾಯಂದಿರು...ಪೃಕೃತಿಯ
ತುಂಬಾ ಇಂಥ  ನೂರು ಉದಾಹರಣೆಗಳಿವೆ ........ಸ್ವಾರ್ಥವೇ ಪ್ರಪಂಚದ ದೃಷ್ಟಿಕೋನವಾದರೆ
ಯಾವುದೂ ಒಳಗಣ್ಣ ತೆರೆದು ಕಾಣಲಾಗದು. .  ಭಾವಗಳೆಂಬುದು ಬರೀ ಭ್ರಮೆಯಾದರೆ
ಜೀವಂತಿಕೆ ಎಂಬುದಕ್ಕೆ ಅರ್ಥವಿರದೇ ಹೋಗುತ್ತದೆ.. ಮನುಷ್ಯ ನಂಬಿಕೆಗಳೆಂದರೆ ಭಾವಗಳ
ಜೀವಗಳ ಒಂದು ಸಮ್ಮೇಳನ. ಮಾನವೀಯ ಮೌಲ್ಯವೆಂಬುದು ಈ ಎಲ್ಲ ಜೀವಂತಿಕೆಯ
ಒಡನಾಡಿ. ಎಲ್ಲ ಪ್ರೀತಿಗಳೂ ಮನಸಿನ ವ್ಯಾಪಾರಗಳೆಂಬುದನ್ನೇ ಒಪ್ಪುವುದಾದರೆ 'ಕೊಡುವುದೇನು
ಕೊಂಬುದೇನು?'  ಬೇಡಿಕೆಗಳೇನು ಅಂಥ ಗೊತ್ತಿರದೇ ವ್ಯಾಪಾರ ಮಾಡಲಾರೆ. ಬೇಡಿಕೆಗಳ ಪೂರೈಸದೇ
ನಿನ್ನ ವ್ಯಾಪಾರ ಪೂರ್ಣವಾಗದಲ್ಲ!  ನಿನ್ನ ಅಗತ್ಯಗಳನ್ನು ಎದುರಿಗಿಟ್ಟು, ಅವರ ಅಗತ್ಯಗಳ
ಅರಿವಾಗಿಸಿಕೊಂಡಾಗಲ್ಲವೇ ವ್ಯಾಪಾರ ಪೂರ್ಣವಾಗೋದು!ಎಲ್ಲಿಯ ವರೆಗೆ ಎದುರಿನವರ
ಅಗತ್ಯ ನಮಗೆ ಅರಿವಾಗದೋ ಅಲ್ಲಿಯವರೆಗೂ ನಾವು ಪೂರ್ಣ ಪ್ರಮಾಣದ ವ್ಯಾಪಾರಿಗಳಾಗಲು
ಸಾಧ್ಯವಿಲ್ಲವಲ್ಲ. ಕೇವಲ ನಮ್ಮ ಅಗತ್ಯಗಳೊಂದೇ  ಈ ಬದುಕಿನ ವ್ಯಾಪಾರ ಮುಗಿಸುವುದಿಲ್ಲ.
ನೋವು ನಲಿವುಗಳು ಸಂಬಂಧಗಳಿಗೆ ರಾಯಭಾರಿಗಳಿದ್ದಂತೆ..  ಮಾನವೀಯತೆ, ಖಾಳಜಿ ಅವುಗಳ
ಜೊತೆಗೆ ಇರುವ ಕೊಂಡಿಗಳು. ಎಲ್ಲವೂ ಸೇರಿ ಬದುಕು..  ಬದುಕಿನ ದೋಣಿಯಲ್ಲಿ ಹೀಗೊಂದು
ಸುಮ್ಮನೇ ಬರಹ. ಈ ಮಳೆಯೊಂದಿಗೆ  ಮಣ್ಣಿನ ಕಂಪಿನೊಂದಿಗೆ ಎಷ್ಟೆಲ್ಲ ಮಾತು ಹರಿದು
ಬಂದಿತಲ್ಲವಾ? ಹಾಂ ಮೊದಲ ಮಳೆಗೆ ಒಂದಿಷ್ಟು ಮಣ್ಣು ಕರಡಿ ಕರಡಿ ಕೆಂಪು ನೀರು ಹರಿಯುವಂತೆ..
 ಈ ಹೊತ್ತಿನ ಕಾಗದದ ದೋಣಿಗಳು ಅದೇ ಕೆಂಪು ಮಣ್ಣಿನ ನೀರಿನಲ್ಲಿ ತೇಲಿ ಬಿಡುತ್ತಿರುವೆ.
ಈ ತೀರದಲ್ಲಿ ನಾನು ಮತ್ತು ನನ್ನ ದೋಣಿಗಳು!! ಅದೋ ಅಲ್ಲಿ ನೀನು ಮತ್ತು ನಿನ್ನ ಪ್ರಪಂಚ.
ತಲುಪುವುದಾ ಈ ಕಾಗದದ ದೋಣಿಗಳು!!
  ಮತ್ತೆ ಸಿಗುತ್ತೇನೆ ಇದೇ ತೀರದಲ್ಲಿ............