Friday, December 27, 2013

ಗೋವಿಂದ ಕತೆಯೊಳಗಿಂದ..

.

         ಭಾವನಾತ್ಮಕವಾದ ಮನಸು ಹೊತ್ತು ಬರೆಯಹೊರಟರೆ ಬುದ್ಧಿ ಸೋಲುತ್ತದೆ ಕೆಲವೊಮ್ಮೆ. ಪ್ರಜ್ಞೆ ಮಸುಕಾಗುತ್ತದೆ. ಹಾಗಾಗಬಾರದೆಂದರೆ ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಲೇಬೇಕು. ಈ ಕ್ಷಣದಲ್ಲಿ  "ಗೋವಿಂದ" ಎಂಬುದು ಒಂದು ಭಾವನದಿ. ಅಲ್ಲಿಯ
ಜೈಗೋಮಾತಾ, ಜೈಗೋಪಾಲಾ, ಎಂಬುವ ಜೈಕಾರಗಳಾಗಲಿ, ಅಂಬರಕೇರಲಿ ಅಂಬಾರವ ಎಂಬ ಅಮೃತ ನುಡಿಗಾನವಾಗಲೀ ಮೈ ಮನಸುಗಳ ಒಳಗೆ ನಶೆಯೋಪಾದಿಯಲ್ಲಿ ತುಂಬಿಕೊಂಡಿದೆ. ಅದು ನಶೆಯಲ್ಲ.  ಐದು ದಿನಗಳು ಝೇಂಕರಿಸಿದ ನಾದಪ್ರಪಂಚದ ಅಮಲೆನ್ನಬಹುದು. ಈ ಅಮಲು ನಾಲ್ಕು ದಿನಕ್ಕೆ
ಇಳಿದುಹೋಗಬಾರದೆಂಬ ಪ್ರಜ್ಞೆಯಲ್ಲಿ ಇದು ನರನಾಡಿಗಳಲ್ಲಿ ಹರಿಯಬೇಕಾದ ರಕ್ತವಾಗಲೀ ಎಂಬ ಆಶಯದೊಂದಿಗೆ ಮಾನಸ ಸರೋವರದಲ್ಲಿ ಪುಟ್ಟದೊಂದು ಅಲೆ. ಗುರುಚರಣಕ್ಕೆ ನುಡಿನಮನ. ಗೋವಿನ ಗೋವಿಂದನ ಪದತಲಕ್ಕೆ ಈ ಕುಸುಮ.
ಚಿತ್ರ ಕೃಪೆ ಅಂತರ್ಜಾಲ






   ಕಡಿಮೆಯೆಂದರೆ ಪ್ರತಿ ದಿನ ಸಾವಿರ ಸಾವಿರ ಸಾವಿರ ಜನ ಸಾಗರೋಪಾದಿಯಲ್ಲಿ ಆಗಮಿಸಿ ಜಗಜನನಿ
ಗೋ ಕತೆಯ ಆಲಿಸಿದರು. ಕಥೆಯ ಕೇಳೋ ಅಭ್ಯಾಸವಿಲ್ಲದವರೂ ಕೂತು ಕಥೆಯನ್ನಾಲಿಸಿದರು. ಹಾಡುಗಾರರ ಘನ ಕಂಠದಲ್ಲಿ  ಮೊಳಗಿದ ಗೋ ಮಾತೆಯ ಕೂಗು ಕೇಳಿದರು. ಕೆಲವೊಮ್ಮೆ ಭಾವುಕರಾಗಿ
ಕಂಗಳು ತೇವವಾದರೆ ಇನ್ನು ಕೆಲವೊಮ್ಮ ರಕ್ತ ಬಿಸಿಯಾಗಿ ಕುದಿದರು.  ಗೋವಿನ ಹತ್ತು ಹಲವು ರೂಪಗಳ
ಚಿತ್ರ, ಗಾನ, ಶ್ರವಣ ಹೀಗೆ ಆನಂದಿಸಿದರು. ಎಲ್ಲ ಮುಗಿಯಿತು. ಗುರು ಪೀಠದ ಮುಂದೆ ಸಂಕಲ್ಪವೂ ನಡೆಯಿತು. ಗೋ ಕಥೆ ಸಂಪನ್ನವಾಯಿತು.ಮಕ್ಕಳು ಮಹಿಳೆಯರು ಹಿರಿಯರು, ಕಿರಿಯರು ಗೋ ಜೈ ಜೈ
ಧೇನು ಕಥಾ  ಎಂದು ಕುಣಿದು ಕುಪ್ಪಳಿಸಿ ಎದೆ ಭಾವ ಜೀವದಲ್ಲಿ ಅದೊಂದು ಲಹರಿಯನ್ನು ತುಂಬಿಕೊಂಡು ಮನೆಯೆಡೆಗೆ  ಮುಖಮಾಡಿದರು. ಹಲವರ ನಿರಂತ ಶ್ರಮ ಸೇವೆ ಅದೆಷ್ಟೋ ಜನರ
ಕನಸು ಏನೇನೆಲ್ಲ ನನಸಾಗಿ ಈ ಗೋ ಕತೆಯೊಡನೆ ಸಂಪನ್ನವಾಯಿತೆಂಬುದಕ್ಕೆ ಲೆಕ್ಕವಿಲ್ಲ. ಆದರೆ ಇದೆಷ್ಟು ದಿನದ ನಶೆ? ಹೀಗೊಂದು ಪ್ರಶ್ನೆ ನನ್ನೊಳಗೆ  ಏಳುವುದಕ್ಕೆ ಕಾರಣವಿದೆ.


  ಒಬ್ಬ ಸಾಮಾನ್ಯ  ಗೃಹಿಣಿಯಾಗಿ, ಒಂದು ಸಮಾಜದ ಪ್ರತಿನಿಧಿಯಾಗಿ,  ಸಹಜ ಮನೆಮನೆಗಳಲ್ಲಿ
ಗೋವಿನೊಡನೆ ಹುಟ್ಟಿ ಒಡನಾಡಿ ಬೆಳೆದು ಇದೀಗ ಇದೇ ಗೋವಿನ ಬಗ್ಗೆ ಬರೆಯುವಾಗ ನನ್ನ ಮನೆಯಲ್ಲಿ
ಒಂದು ಗೋವು ಕಟ್ಟಿ ಸಾಕಲಾಗದ ಸ್ಥಿತಿಯಲ್ಲಿ ನಾನೇನಾದರೂ ಮಾತನಾಡಿದರೆ ತಪ್ಪಾದೀತೇನೋ ಎನ್ನುವ ಒಳಗಿನ ತಾಕಲಾಟದಲ್ಲೇ  ಗೋವೆಂಬ ಗೋವಿಂದನ ಕುರಿತು ನನ್ನೆರಡು ಮಾತುಗಳ ತಂದಿದ್ದೇನೆ ಈ ಸರೋವರದ ಅಂಚಿನಲ್ಲಿ. ಗೋವನ್ನು ಸಾಕಬೇಕೆಂಬುದು ಈ ಕ್ಷಣಕ್ಕೂ ಮನಸ್ಸಿನ ಭಾವ. ಆದರೆ ವಾಸ್ತವ?

     ಆಕಳು ತಂದರಾಯಿತೆ? ಅವುಗಳಿಗೆ  ಬೇಕಾದ ಹುಲ್ಲು, ಹಿಂಡಿ, ಸಮಯ ಇವನ್ನೆಲ್ಲ ಎಲ್ಲಿಂದ
ತರುವುದು? ಒಂದು ವೇಳೆ ಇದು ಸಾಮಾನ್ಯ ಮನುಷ್ಯನೊಬ್ಬನ ಪ್ರಶ್ನೆ. ಎಲ್ಲವೂ ಗೊತ್ತಿರುವಷ್ಟು ಸುಲಭಕ್ಕೆ ಬಗೆಹರಿಯಲಾಗದ ಪ್ರಶ್ನೆಕೂಡ. ಮನೆಯಲ್ಲಿ ಆಕಳೊಂದನ್ನು ಸಾಕುವುದು ಮೊದಲಿನ ಕಾಲದಲ್ಲಿ ಅಷ್ಟೊಂದು
ಕಷ್ಟವೇನಿರಲಿಲ್ಲ. ಸಮೃದ್ಧ ಅಕ್ಕಿ ಮನೆಯಲ್ಲಿ ಬೆಳೆಯುವ ಕಾಲಕ್ಕೆ ಕೊನೆಗೆ ಊರಲ್ಲಾದರೂ ಬೆಳೆಯುವ
ಕಾಲಕ್ಕೆ ಮನುಷ್ಯನಂತೆ ದನಗಳ ಮೇವು ಕೂಡ ಸಮಸ್ಯೆ ಆಗಿರಲಿಲ್ಲ. ಇವತ್ತು ಅಕ್ಕಿ ಬೆಳೆಯುವವರೇ ಇಲ್ಲವಾಗಿರುವಾಗ ಹುಲ್ಲು ಬೆಳೆಯುವವರ ಎಲ್ಲಿ ಹುಡುಕುವುದು ನಾವು? ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಮೊದಲಾದರೆ  ದನಕರುಗಳ ಮೇವಿಗೆಂದು ಹೊರಗೆ ಬಿಡಬಹುದಿತ್ತು. ಈಗ ಅವು ಎಲ್ಲಿ ಬಿಟ್ಟರೂ ಹೋಗಲು ಜಾಗವೇ ಇಲ್ಲ. ಮೇವಿನ ಬದಲು ಪ್ಲಾಸ್ಟಿಕ್, ಕಾಗದಗಳ ತಿನ್ನುವಂತಾಗಿದೆ. ಅದು ಕೂಡ  ಘೋರ ಪಾಪವೆನ್ನಿಸುತ್ತದೆ. ಗೋವನ್ನು ಕೇವಲ ಲಾಭದೃಷ್ಟಿಯಿಂದ ನೋಡಲಾರಂಭಿಸಿದರೆ ಜರ್ಸಿ ತಳಿಗಳು ಹಾಕುವ ಹಿಂಡಿಗೆ ಸಮನಾದ ಹಾಲು ಕೊಡುತ್ತವೆ ಎಂಬುದು ದೊಡ್ಡ ವಿಷಯವಾಗುತ್ತದೆ. ಇಷ್ಟೇ ಅಲ್ಲ.ಅದು ಲೆಕ್ಕಾಚಾರದಲ್ಲಿ ಸಮ ತೋರುವುದರಿಂದ ಹಾಲಿನೊಳಗಿನ ಅಂಶಗಳಿಗಿಂತ ಹಾಲಿನ ಉತ್ಪನ್ನದ ಬಗ್ಗೆಯಷ್ಟೇ
ಯೋಚಿಸುವುದು ಸಾಮಾನ್ಯ.

  ಎಲ್ಲವೂ ರೂಪಾಯಿಗಳ ಲೆಕ್ಕಾಚಾರಕ್ಕಿಳಿದಮೇಲೆ ಮನುಷ್ಯ ಹೆತ್ತವರನ್ನೂ ಲೆಕ್ಕಾಚಾರದ ತಕ್ಕಡಿಯಲ್ಲಿಟ್ಟು
ತೂಗಿದ ಮೇಲೆ  ಗೋವಿನಂತ ಗೋವು ಕೂಡ  ಭಾರವಾಗುತ್ತದೆ ಎಂಬುದು ಇವತ್ತಿನ ನಿದರ್ಶನ. ಗೋ ಪ್ರೇಮಿಗಳು ಸಾಗರೋಪಾದಿಯಲ್ಲಿ ಬಂದು ಗೋ ಕಥೆ ಕೇಳಿದವರೆಲ್ಲ ಒಂದೊಂದೇ ರೂಪಾಯಿಯಷ್ಟು
ಗೋ  ಸೇವೆಯೆಂಬ ಭಾವಕ್ಕೆ ಬಿದ್ದರೆ ಇಂಥ ಗೋ ಕಥೆ ಮಾಡುವವರ ಕೇಳುವವರ ಶ್ರಮ ಸಾರ್ಥಕವೆನ್ನಿಸುತ್ತದೆ. ಇವತ್ತು ಸಮಾಜದಲ್ಲಿ ಬರ ಬಿದ್ದಿರುವುದು ಹಣಕ್ಕಲ್ಲ, ಹೊನ್ನಿಗಲ್ಲ, ಶ್ರಮಕ್ಕೆ ಮತ್ತು
ಭಾವಕ್ಕೆ. ಯಾರಿಗೆ ಯಾರ ಕುರಿತಾಗಿಯೂ ಶುದ್ಧ ಭಾವ ಹುಟ್ಟುವುದು ಸಾಧ್ಯವೇ  ಇಲ್ಲದ ಸ್ಥಿತಿ ಇಂದಿನದು. ಪ್ರತಿಯೊಬ್ಬರನ್ನೂ ಅನುಮಾನದ ದೃಷ್ಟಿಯಿಂದ ನೋಡುವುದು ಅನಿವಾರ್ಯವೂ ಆಗಿ ಹೋಗಿದೆ. ಹೀಗಿರುವಾಗ ಗೋ ಪ್ರೇಮದ ಕಥೆ ಕೇಳಿ ಬಂದ ಮನಸಿನ ಸರೋವರದಲ್ಲಿ ಇಂತದ್ದೊಂದು ಗೋವಿಂದಾ ಎನ್ನುವ ಅಲೆ ಏಳುವ ಸಾಧ್ಯತೆ ಹುಟ್ಟಿಕೊಂಡರೆ ...


 ಸತ್ಯವನ್ನೇ ನುಡಿ ಸತ್ಯವನ್ನೇ ನಡೆ  ಸತ್ಯ ವಾಕ್ಯಕೆ ತಪ್ಪಿ ನಡೆಯಬೇಡ ಎನ್ನುವುದು ಬಾಲ್ಯದಿಂದ ಇಂದಿನವರೆಗೆ ಗೋವಿನ ಕಥೆಯಿಂದಲೇ ಕಲಿತೆವು ನಾವೆಲ್ಲ. ಇಂದು  ಅದೇ ಗೋವಿಗಾಗಿ ನಾವೇನು ಮಾಡಬಲ್ಲೆವು ಎಂದು ಕೇಳಿಕೊಂಡರೆ ಕನಿಷ್ಟ ಸತ್ಯ ದ ನಡೆನುಡಿ ಕೂಡ ಬಿಟ್ಟೆವಲ್ಲ!ನಮ್ಮಲ್ಲಿ ಒಂದು ಮಾತಿದೆ. ಬಯಲು ಸೀಮೆಯ ಜನ ನಡೆನುಡಿಗಳಿಂದ  ಒರಟರೆಂಬುದು ಅದರ ಅರ್ಥ. ಆದರೆ ಈ ವಿಚಾರದಲ್ಲಿ   ಸುಸಂಸ್ಕೃತರಿಗಿಂತಲೂ ಈ ಶ್ರಮಜೀವಿಗಳ ಬದುಕು ಮತ್ತು ಭಾವದಲ್ಲಿ ಗೋವಿಗೊಂದು
ಅಮೂಲ್ಯ  ಸ್ಥಾನವಿರುವುದ ನೋಡುತ್ತೇವೆ. ಕೃಷಿಗೆ ಗೋವು ಆಧಾರ, ಗೋವಿಗೆ  ಮೇವು ಆಧಾರ ಇನ್ನೂ
ಗೋವಿನ ಜಾತ್ರೆಗಳು ಗೋವಿನ ತಳಿಗಳನ್ನು ನಾವು ಈ ಬಯಲುಸೀಮೆಯಲ್ಲಿ  ನೋಡಬಹುದೇನೋ.
ಹಳ್ಳಿಗರ ಬದುಕಿನಲ್ಲಿ ಗದ್ದೆ ಗೋಮಾಳಗಳು ಇರುವವರೆಗೂ ದನಗಳ ಕುರಿತು ನಾವು ಇಷ್ಟೊಂದು
ನಿಷ್ಕರುಣಿಗಳಾಗಿರಲಿಲ್ಲ.  ಗದ್ದೆ ತೋಟವಾಯಿತು. ಉಳುವ ಅಗತ್ಯವಿಲ್ಲದೇ ಎತ್ತುಗರುಗಳು ಮಾರಲ್ಪಟ್ಟವು
ಜಾತಿ ಸಂಕರಣ ಅಲ್ಲಿಂದ ಆರಂಭವಾಯಿತು. ಇಂಜೆಕ್ಷನ್ ಕರುಗಳು ಜನಿಸಲಾರಂಭಿಸಿದವು.  ಗೋವು
ಉದ್ಯಮವಾಯಿತು.  ಭಾವನಾತ್ಮಕ  ಸಂಬಂಧ ಹೋಗಿ ಅಲ್ಲಿ ಕೇವಲ ಲಾಭನಷ್ಟಗಳು ಉಳಿದಕೊಂಡವು.
ಅದು ಇಂದಿನ ಘೋರ ರೂಪ ತಳೆಯಿತು. ಪಟ್ಟಣಗಳ ವಿಷಯ ಅವರ ಅನಿವಾರ್ಯತೆಗಳನ್ನು ಬಿಟ್ಟರೆ
ಹಳ್ಳಿಗಳಲ್ಲಿ ಇಂದಿಗೂ ಕೆಲವರು ದನ ಸಾಕಿಕೊಳ್ಳುತ್ತಾರೆ. ಇಲ್ಲವೆಂದಲ್ಲ. ಆದರೆ ಅದು ಸಹ ಹೆಚ್ಚು ಹಾಲುಕೊಡುವ ತಳಿಗಳನ್ನು ಮಾತ್ರ. ಇಲ್ಲಿ ಸಮೃದ್ಧಿಯ ವಿಷಯ ಬಂದಾಗೆಲ್ಲ ಹಾಲು ಎಲ್ಲ ಒಂದೇ
ಅನ್ನಿಸಿಬಿಡುತ್ತದೆ. ದೀರ್ಘ ಪರೀಕ್ಷೆಯ ವಿಚಾರಗಳ ಒತ್ತಡಕ್ಕೆ ಬೀಳುವವರಲ್ಲ.ನಮ್ಮ ದನಕರುಗಳ ಕುರಿತು
ಸಾಮಾನ್ಯ ಪ್ರಜ್ಞೆ ಕೂಡ ಇರುವುದಿಲ್ಲ. ಹಾಗೆ ನೋಡಿದರೆ ಗೋವು ಪ್ರತೀ ಮನೆಯ ಅಗತ್ಯ. ಆದರೂ ಕೂಡ
ಅದೊಂದು  ಬಲಿಷ್ಟ ಉದ್ಯಮವಾಗಿಯಷ್ಟೇ ಪ್ರಚಲಿತವಾಗುತ್ತಿರುವುದು ದುರಂತ.

  ಒಮ್ಮೊಮ್ಮೆ ಅನ್ನಿಸುತ್ತದೆ. ಮನುಷ್ಯ ಮನುಷ್ಯನ ಕುರಿತಾಗಿಯೇ ಸಂವೇದನೆ ಕಳೆದುಕೊಂಡು ಮೃಗೀಯವಾಗುತ್ತಿರುವ ಈ ದಿನಗಳಲ್ಲಿ ನಾವು ಮನುಷ್ಯನಿಂದ ಪ್ರಾಣಿಗಳ ಕುರಿತು ಸಂವೇದನೆ
ಬಯಸುವುದು ಸ್ವಲ್ಪ ಹೆಚ್ಚಿನ ನಿರೀಕ್ಷೆ ಅನ್ನಿಸಬಹುದು. ಆದರೆ ಮನುಷ್ಯ ಮತ್ತು ಪ್ರಾಣಿಗಳ ಒಡನಾಟ
ಅದೆಷ್ಟೋ ಕಾಲದಿಂದ ಉಳಿದುಕೊಂಡು ಬಂದಿದೆಯೆಂದರೆ ಅದು ಮಾನವ ಸಂಬಂಧಗಳಿಗಿಂತ ಬಲಿಷ್ಠವಾಗಿ ತೋರುತ್ತದೆ. ಮನುಷ್ಯರ ಜೊತೆ ಸಂಬಂಧ ಅಹಂಗಳಿಂದಾಗಿ ಬಹಳ ಬೇಗ ಶಿಥಿಲಗೊಳ್ಳುತ್ತಿದೆ ಇಂದು.
ಆದರೆ ಪ್ರಾಣಿಗಳು ಹಾಗಲ್ಲ. ಅವುಗಳಿಗೆ ಅಹಂ ಕಾಡುವುದಿಲ್ಲ. ಸ್ವಾರ್ಥ ಇರುವುದಿಲ್ಲ ಅವುಗಳಿಗೆ. ಪ್ರೀತಿ
ಮತ್ತು ಅನ್ನ ಕೊಟ್ಟವನಿಗಾಗಿ ಜೀವ ಕೊಡುತ್ತವೆ. ಅವುಗಳು ಮಾತು ಬರದೇ ಪ್ರೀತಿಸುವ ಪರಿಗೆ ಮನುಷ್ಯ
ಮೂಕವಾಗುತ್ತಾನೆ. ಪ್ರಾಣಿಗಳ ಪ್ರೀತಿಸುವ ಮನುಷ್ಯ ಹೃದಯಗಳು  ಸದಾ ಜೀವಂತಿಕೆಯಿಂದ ಇರುತ್ತವೆ.
ಎಲ್ಲೋ ಓದಿದ ನೆನಪಿನಂತೆ ಸಾಕು ಪ್ರಾಣಿಗಳ ಪ್ರೀತಿಸುವವರಲ್ಲಿ ಹೃದಯದ ಕಾಯಿಲೆ ಕಡಿಮೆಯಂತೆ.
ಇಷ್ಟೆಲ್ಲಾ ತಿಳಿದೇ ಅಲ್ಲವಾ  ಎಷ್ಟೋ ಸಾವಿರ ಜೀವ ಜಂತುಗಳಲ್ಲಿ  ಕಣಕಣವೂ ಪವಿತ್ರವಾಗಿರುವ
ಉಪಯುಕ್ತವಾಗಿರುವ ಗೋವನ್ನು ನಮ್ಮ ಪೂಜನೀಯ ದೇವರಂತೆ ಕಂಡಿರುವುದು ನಮ್ಮ ಹಿರಿಯರು.
ಜ್ಞಾನ ಬೆಳೆದಂತೆ ಪ್ರಪಂಚ  ಚಿಕ್ಕದಾದಂತೆ ವಿಸ್ತಾರವಾಗಬೇಕಿದ್ದ  ಜೀವ, ಭಾವ, ಔದಾರ್ಯ, ಪ್ರೀತಿಗಳು,
ಸಂಕೀರ್ಣತೆ ಕಳೆದುಕೊಂಡು ಮೃದುವಾಗಬೇಕಿದ್ದ ಮನಸುಗಳು ಮನುಷ್ಯ ಸ್ವಾರ್ಥವೊಂದೇ ಮುಖ್ಯವಾಗಿಬಿಡುತ್ತಿರುವುದು ಎಂಥ ವಿಪರ್ಯಾಸ!  ಆದರೂ ಅನ್ನಿಸುತ್ತದೆ. ಎಲ್ಲ ಬದಲಾವಣೆಗಳಿಗೂ ಒಂದು
ಸಂಕ್ರಮಣ ಕಾಲ ಬರುತ್ತದೆ.  ವಿನಾಶದ ಬಿಸಿ ತಟ್ಟಿದಾಗ ಮಾತ್ರ ಎಚ್ಚರಿಕೆಯ ಪೃಕೃತಿ ಮೊಳಗುತ್ತದೆ.
ಅಂತದ್ದೊಂದು ವಿನಾಶ ಕಾಲದಲ್ಲಿ  ಇಂಥ ಮಹಾನುಭಾವರ ದರ್ಶನವಾಗುತ್ತದೆ.  ಹಿಂದೂ ಧರ್ಮವೇ
ಒಡೆದು ವಿನಾಶದ ದಾರಿ ಹಿಡಿದಾಗ ಶಂಕರರ ಅವತಾರವಾಯಿತು. ಇಂದು ಗೋವು ತಳಿಗಳೇ ನಿನರ್ಾಮವಾಗಿ  ಜನ ದನ ದ ಬದುಕು ಅಳಿಯುವಾಗ ಹೀಗೊಂದು ಜಾಗೃತಿಯ ಸಂಸ್ಥಾಪನೆಗಾಗಿ
ಆ ಗೋವಿಂದನೇ ಗೋವಿಗಾಗಿ  ಜನ್ಮತಳೆದಿರಬಹುದೆಂಬ ಭಾವ ಮೂಡುತ್ತದೆ! ಮತ್ತೆ ಮತ್ತೆ ಗೋವಿಗಾಗಿ
ಮಡಿವ ಮಿಡಿವ ಹಲವು ಗೋ ಪ್ರೇಮಿಗಳೆಲ್ಲ ಗೋಪಾಲಂದಿರೇ....

ಚಿತ್ರ ಕೃಪೆ ಅಂತರ್ಜಾಲ


 ಇದು ಸಾಧ್ಯವಾ ಅಂತಂದುಕೊಂಡರೆ ಯಾವುದೂ ಸಾಧ್ಯವಿಲ್ಲ. ಸಾಧ್ಯ ಅಂದುಕೊಂಡರೆ ಎಲ್ಲವೂ ಸಾಧ್ಯ.
ಸಾಧ್ಯವಾಗಿಸಿದ ನೂರಾರು ನಿದರ್ಶನಗಳಿವೆ ಇಲ್ಲಿ. ಗೋವನ್ನು ಕೇವಲ ಪ್ರಾಣೀ ಅಂತಾಗಲೀ, ಹಿಂದೂ ಧರ್ಮದ ಪೂಜನೀಯ  ದೇವತೆ ಅಂತಾಗಲೀ ನೋಡಲಾಗದಿದ್ದರೆ  ಗೋವನ್ನು ಮನುಷ್ಯ ಜನ್ಮಸಾರ್ಥಕಗೊಳಿಸುವ ಪ್ರಾಣೀ ಅಂತಾದರೂ ನೋಡಬಹುದಲ್ಲ! ವೈಜ್ಞಾನಿಕವಾಗಿಯೇ ಸಾಬೀತಾಗಿದೆ ಭಾರತೀಯ ತಳಿಗಳ ಗೋವುಗಳು ಎಷ್ಟು ಸಂಪದ್ಭರಿತವಾದವು ಎಂಬುದು. ಹಾಗಿದ್ದಾಗ ನಮ್ಮ ದೇಶ ನಮ್ಮ ಜನರ  ಬದುಕು ಭಾವ ಎಲ್ಲ ಆಗಿರುವ ಗೋವನ್ನು ಕಾನೂನು ರೀತ್ಯ ಹತ್ಯೆಗೈಯ್ಯುವ ಸರಕಾರವನ್ನು
ನಾವು ಆರಿಸಿಕೊಂಡಿದ್ದೇವೆ ಎಂಬುದು ಕೂಡ ಯೋಚಿಸುವ ವಿಷಯ!   ನಿಂದಕರು ಇರಬೇಕೆಂದಿದ್ದಾರೆ
ದೊಡ್ಡವರು. ಆದರೆ ಹಂತಕರು ಇದ್ದಾರೆ ಇಲ್ಲೆಲ್ಲ. ಇವತ್ತು ಗೋವು, ನಾಳೆ ನಾವು. ಇವೆರಡನ್ನೂ ಯೋಚಿಸುವ
ಸಮಯ ಬಂದಿದೆ ಅನ್ನಿಸುವುದಿಲ್ಲವೆ?





ನಿಮ್ಮ ಅನಿಸಿಕೆಗಳಿಗಾಗಿ.

ಹೊತ್ತು ಹೆತ್ತ ಮಾತೆಗೆ, ಹಾಲುಕೊಟ್ಟ ಹಸುವಿಗೆ, ನಿಮ್ಮ ಭಾವದ ಒಂದು ಅರ್ಪಣೆ  ಹೇಗೆ ಹೇಳುತ್ತೀರಿ?







   

Wednesday, December 11, 2013

ವ್ಯಾವಹಾರಿಕ ಪ್ರಪಂಚದಲ್ಲಿ ಸಾತ್ವಿಕ ಪ್ರತಿಭಾವಂತ..



              ಸಾತ್ವಿಕ ಚಿಂತನೆಗಳ ಹಂಚಿಕೊಳ್ಳಲೆಂದೇ ಒಂದಷ್ಟು ಸ್ನೇಹಗಳು ಹುಟ್ಟಿಕೊಳ್ಳುತ್ತವೆ. ಅಂತಹ ಸ್ನೇಹಗಳಿಗೆ
ಋಣಿ ನಾನು.      ಬದುಕಿನ ಅಸಮ್ಮತಿಗಳ ನಡುವೆ ಸಮ್ಮತಿಯೆಂಬುದು ಹುಟ್ಟುವುದೇ ಇಲ್ಲಿ. ಸಾತ್ವಿಕ ಚಿಂತನೆಗಳು
ಹರಡಿಕೊಂಡು   ಅವುಗಳಿಗೆ ಸರಿಯಾದ ಆಧಾರವನ್ನು, ಬಲವನ್ನು ಪಡೆದುಕೊಳ್ಳುವುದು ಸಮಾನ ಮನಸ್ಕರ ಸ್ನೇಹ
ಗಳಿಂದಾಗಿ ಕಾವ್ಯ,ಕಥನ, ಭಾವ, ಭಜನೆ, ಲಲಿತ ಕಲೆಗಳ ಯಾವುದೇ ಪ್ರಕಾರಗಳು ಹಾಗೂ ಎಲ್ಲಾ ಜೀವಂತ ಪ್ರತಿಭೆಗಳು
ರಸೋತ್ಪನ್ನಗೊಳ್ಳುವ ಎಲ್ಲ ಭಾವಕಲೆಗಳಿಗೂ ಬಲಕೊಡುವುದು ಸಮಾನ ಆಸಕ್ತಿ ಹಾಗೂ ವಿಮರ್ಶೆಯ ಒರೆಹಚ್ಚುವಿಕೆ.
ಹಾಗೆ ಆರಂಭವಾದ ಎಲ್ಲ ಸ್ನೇಹಗಳೂ ಹಂತ ಹಂತವಾಗಿ ಬೆಳವಣಿಗೆಯನ್ನು ಕಾಣಬೇಕು. ಹಾಗಾದಾಗ
ನಾವೂ ಬೆಳೆಯುತ್ತೇವೆ. ನಮ್ಮೊಂದಿಗೆ ಎಲ್ಲರೂ ಬೆಳೆಯುತ್ತಾರೆ.

 ದುರದೃಷ್ಟವಶಾತ್  ಇವತ್ತು ಹೀಗಾಗುತ್ತಿಲ್ಲ. ಹುಟ್ಟಿಕೊಳ್ಳುವಾಗ ಸಾತ್ವಿಕವಾಗಿರುವ ಸ್ನೇಹ ಬೆಳೆಯುತ್ತ ಬೆಳೆಯುತ್ತ
ಸ್ವಾರ್ಥವಾಗುತ್ತದೆ. ಎಲ್ಲಿ ಯಾರನ್ನು ಎಷ್ಟು ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳಬಹುದೆಂಬ ಮಾನದಂಡದ ಮೇಲೆ ಸ್ನೇಹ
ನಿಲ್ಲುತ್ತದೆ. ಯಾರು ಎಷ್ಟು ಸಹಾಯ ಸಹಕಾರ ನೀಡಬಲ್ಲರೆಂಬುದು(ಲೆಕ್ಕಾಚಾರವಾಗಿ) ಸ್ನೇಹದ ತಳಪಾಯವಾಗುತ್ತದೆ.
ಋಣ ಸಂದಾಯ ಕೂಡ ಬಹಳ ದೊಡ್ಡ ಮೊತ್ತದ ಏನನ್ನೋ ನಿರೀಕ್ಷಿಸುತ್ತದೆ. ಅದು ಹಣ ಹೆಸರು ಇನ್ನೇನೂ ಆಗಿರಬಹುದು!
ಇದು ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ, ನಾಟ್ಯ, ಸಂಗೀತ, ಅಭಿನಯ, ಚಿತ್ರಕಲೆ, ಯಾವುದೇ ಇರಬಹುದು. ಕಲಾಕಾರ ವ್ಯಾವಹಾರಿಕ ಮೋಸಕ್ಕೆ ಪದೇ ಪದೇ ಒಳಗಾಗುವುದು ನೋಡುತ್ತೇವೆ. ಯಾಕೆಂದರೆ ಪ್ರತೀ ಕಲಾವಿದನೂ ಭಾವಜೀವಿಯಾಗಿದ್ದಾನೆ. ಬದುಕು ಅವನಿಗೆ ನಿರಂತರ  ವ್ಯಾವಹಾರಿಕ ಪಾಠಗಳನ್ನು ಹೇಳಿಕೊಡುತ್ತದೆ. ಹಾಗೆ ಹೇಳಿಕೊಡುವವರಲ್ಲಿ ಸುತ್ತ ಮುತ್ತಲಿನವರೇ ಹೆಚ್ಚು ಪ್ರಮುಖ ಪಾತ್ರ  ವಹಿಸುತ್ತಾರೆ.

            ಸಾಹಿತಿಯ ಪುಸ್ತಕಗಳು ಅವನ ಮತ್ತು ಅವನ ಸಂಸಾರದ ಹೊಟ್ಟೆತುಂಬಿಸುವುದಿಲ್ಲ.  ಆಸಕ್ತ ಪ್ರಕಾಶಕರು ಕೈ ಸುಟ್ಟುಕೊಳ್ಳುತ್ತಾರೆ    ಆದರೆ ವೃತ್ತಿನಿರತ ಪ್ರಕಾಶಕರು ಪುಸ್ತಕವನ್ನೇ ಬಂಡವಾಳವಾಗಿಸಿಕೊಂಡು ಬೇಕಾದಷ್ಟು ದುಡ್ಡು ಮಾಡಿಕೊಳ್ಳುತ್ತಾರೆ. ಅವರಿಗೆ ಪುಸ್ತಕದಲ್ಲಿ ಏನಿದೆ ಎಂಬ ಮಾಹಿತಿಯೂ ಬೇಕಾಗುವುದಿಲ್ಲ ಕೆಲವು ಬಾರಿ. ಸಂಗೀತವನ್ನೇ ಉಸಿರಾಗಿಸಕೊಂಡು ಹಾಡುವವರು  ಕೆಲವೇ ಪ್ರೋಗ್ರಾಂಗಳಿಗೆ ತೃಪ್ತಿಪಟ್ಟುಕೊಳ್ಳಬೇಕು. ದೇವಸ್ಥಾನ  ಸಭೆ ಸಮಾರಂಭಗಳಿಗೆ ಹಾಡಿ ಖುಶಿ ಪಡಬೇಕು ಸಂಗೀತವನ್ನು  ವೃತ್ತಿಯಾಗಿಸಿಕೊಂಡವರಿಗೆ ಹಣದ ಹೊಳೆ. ನಿಜಕ್ಕೂ ಕಲಾವಿದನಾದವನು ವೃತ್ತಿಯಾಗಿ ಆಯ್ದುಕೊಂಡಾಗ ಅವನಿಗೆ ಯಾವುದೇ ಕಲೆಯನ್ನು ಪೂರ್ಣ ನೂರಕ್ಕೆ ನೂರು ತೊಡಗಿಸಿಕೊಳ್ಳಲಾಗದು ಹಾಗೆ ತೊಡಗಿಸಿಕೊಂಡವನನನ್ನೂ ಕೂಡ ಅವರನ್ನೂ ಉಪಯೋಗಿಸಿಕೊಂಡು ಹಣ ಹೆಸರು ಮಾಡಿಕೊಳ್ಳುವ ಅನೇಕರನ್ನು ನೋಡಬಹುದು.


         ಭಾರತೀಯ ಶಾಸ್ತ್ರೀಯ ನೃತ್ಯ, ಸಂಗೀತಗಳು ಇಂದು ಬಹಳ ದುಬಾರಿಯಾಗುತ್ತಿವೆ ಎಂಬದು ಸದ್ಯದ ಒಳನೋಟ ಬಲ್ಲವರ ಮಾತು. ಗುರುಕುಲ ಮಾದರಿಯ ಈ ಶಾಲೆಗಳು   ಕೂಡ  ಹಣ  ಮಾಡುವ   ಕೇವಲ   ಹಣ ಮಾಡುವ ಇಂದಿನ ವಿದ್ಯಾಸಂಸ್ಥೆಗಳ ದಾರಿ ಹಿಡಿದಿವೆ. ಈ ನೃತ್ಯಪಟುಗಳು, ಸಂಗೀತ ಸಾಧಕರು ಮತ್ತು ಸಾಹಿತ್ಯದ ಉನ್ನತ ಹೆಸರು ಪಡೆದವರು ಸಹ ಕಲೆಯನ್ನು ಮೊದಲಿನಂತೆ ಸರಸ್ವತಿಯಾಗಿ ಆರಾಧಿಸುವ ಬದಲು ಲಕ್ಷ್ಮಿಯನ್ನು ಕೊಡುವ ಸಾಧನವಾಗಿ  ಬಳಸಿ  ಕೊಳ್ಳುತ್ತಿರುವುದು  ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ತಿಳಿಯುತ್ತಿಲ್ಲ. ನಮ್ಮ ಸಂಸ್ಕೃತಿಯ ಕೊಡುಗೆಯಂತಿರುವ ಈ ವಿದ್ಯೆಗಳು ಸಹ ಇಂದು ಕೇವಲ ಹಣ ಇರುವವರ ಸೊತ್ತಾಗುತ್ತಿರುವುದು  ದೌರ್ಭಾಗ್ಯವಲ್ಲವೆ? ದೊಡ್ಡ ದೊಡ್ಡ ಸಿಟಿಗಳಲ್ಲಿ ಹಣವಂತರ ಮಕ್ಕಳಿಗೆ ನೃತ್ಯ ಶಾಲೆಗಳಿಗೆ ಸೇರಿಸುವುದು ಮತ್ತು ಸಂಗೀತಕ್ಕೆ ಕಲಿಸುವುದೆಂಬದು ಪ್ರೆಸ್ಟೀಜ್ ನ ಪ್ರಶ್ನೆಯಷ್ಟೆ. ಮಕ್ಕಳಲ್ಲಿಯ ಪ್ರತಿಭಾವಂತರ ಗುರುತಿಸಬೇಕಾದ ಗುರುಸ್ಥಾನಿಗಳು ಇದನ್ನು ಯೋಚಿಸಬೇಕಾಗಿದೆ.

  ಸರಕಾರಗಳಿಗಂತೂ ಸಂಸ್ಕೃತಿಯ ಉಳಿಸಿ ಬೆಳೆಸುವದರಲ್ಲಿ ಆಸಕ್ತಿಯಿಲ್ಲ. ಒಂದೊಂದು ಇಲಾಖೆಗಳೂ ಒಂದಿಷ್ಟು ಜನರ
ಹೊಟ್ಟೆತುಂಬಿಸುವ ಸಾಧನಗಳಷ್ಟೆ. ಉಳಿಸಿ ಬೆಳೆಸುವ ಗುರು ಸ್ಥಾನದ ಪ್ರತಿಯೊಬ್ಬರೂ ಯೋಚಿಸಬೇಕಿದೆ ಸಂಸ್ಕೃತಿಗೆ ಈ ತಲೆಮಾರಿನ ಕೊಡುಗೆಗಳೇನು ಅಂತ.  ಅದು ಕೇವಲ ವ್ಯಾಪಾರವಾಗಿ ಉಳಿಯದೇ ಪ್ರತಿಭೆಯ ಮೌಲ್ಯ ಮಾಪನ ವಾಗಲಿ ಎಂದಷ್ಟೇ ಕೋರಬಹುದು ನಮ್ಮಂತವರು.


         ವಿಷಯ ಆರಂಭವಾದದ್ದು ಸಾತ್ವಿಕ ಚಿಂತನೆಗಳ ಸ್ನೇಹದ ಕುರಿತು. ಎಲ್ಲಿಂದ ಎಲ್ಲಿಗೋ ತಲುಪಿತು. ಆದರೆ  ವಾಸ್ತವದಲ್ಲಿ ಯೋಚನೆ ಮಾಡಿದರೆ ಇಂತಹ ಸಂದರ್ಭದಲ್ಲಿ  ಮನುಷ್ಯನ ಒಳಗಿರುವ ನಿಜವಾದ ಪ್ರತಿಭೆ ಅರಳುವುದು ಸ್ನೇಹವಲಯದಲ್ಲಿ. ಜೀವಂತಿಕೆಯ ಒಳ ತುಡಿತಗಳು ಕಲೆಯ ರೂಪದಲ್ಲಿ ಮೊದಮೊದಲು ತಾಗುವುದು ಸ್ನೇಹಗಳಲ್ಲೇ. ಅದರಲ್ಲೂ ಆಸಕ್ತ ಮನಸ್ಸಿನವರ ನಡುವೆ ಮಾತ್ರ ಕಲಾವಿದ ತನ್ನೊಳಗಿನ ಪ್ರತಿಭೆಯನ್ನು ಹೊರಗಿಡಬಲ್ಲ. ಅದು ಒಳ್ಳೆಯ ಸಾತ್ವಿಕ ಚಿಂತನೆ, ಮಂಥನಗಳ ಮೂಲಕ  ಒರೆಹಚ್ಚಿಕೊಳ್ಳುತ್ತ ಬೆಳೆಯುವ ಮೊದಲ ಹೆಜ್ಜೆ. ಈ ಹೆಜ್ಜೆಗೆಷ್ಟು ಬಲವಿದೆ ಎಂಬುದು  ಗುರುವಿಲ್ಲದೇ ಅರಳಿದ ಇಂತ ನೂರಾರು ನವ ನವೀನ ಪ್ರತಿಭೆಗಳ, ಹಳ್ಳೀ ಮರೆಯಲ್ಲಿ ಹರಡಿದ ಕುಸುಮ ಗಂಧಗಳ ನಾವು ನೋಡುತ್ತೇವೆ. ಅವೇನೂ  ಯಾವ ದೊಡ್ಡ ವಿದ್ವಾಂಸನ ವಂಶಸ್ಥನಾಗಲೀ ಯಾವ ಗಾಡ್ ಪಾದರ್ ಗಳ ನೆರಳಾಗಲೀ ಕಂಡಿರುವುದಿಲ್ಲ. ಎಷ್ಟೋ ಬಾರಿ ಮಕ್ಕಳಲ್ಲಿರುವ ಪ್ರತಿಭೆ ತಂದೆ ತಾಯಿಗಳ ಗಮನಕ್ಕೂ ಬಂದಿರುವುದಿಲ್ಲ. ಅಂತ ಅನೇಕ ಜನ ನಮ್ಮೊಡನೆ
ಆಡುತ್ತ ಹಾಡುತ್ತ ನಲಿಯುತ್ತ ಅನೇಕ ವಿಸ್ಮಯಗಳ ಕಟ್ಟಿಕೊಡುತ್ತಾರೆ ಅಂಥ ಎಲ್ಲ ಜೀವ ಭಾವ ತುಂಬಿದ ಕಲಾವಿದರೂ ಸಾಹಿತಿಗಳೂ ಬಹುತೇಕ ಭಾವುಕ ಮನದವರಿರುತ್ತಾರೆ. ಅವರನ್ನು ಸಾತ್ವಿಕವೆಂದು ನಂಬಿದ್ದ ಸ್ನೇಹವಲಯದಲ್ಲಿ ದುರುಪಯೋಗ ಮಾಡಿಕೊಳ್ಳಲು ಒಬ್ಬ ಬುದ್ದಿವಂತ ಸಿಕ್ಕರೆ ಸಾಕು. ಎಷ್ಟೋ ಬಾರಿ ಇಂದಿನ ಕಾರ್ಪೋರೇಟ್ ಪ್ರಪಂಚ ಕೂಡ
ಇಂತಹ ಕೆಲಸ ಮಾಡುತ್ತಿರುವುದು ಕಂಡರೆ ಬೇಸರವಾಗುತ್ತದೆ. ಇಲ್ಲಿ ಎಲ್ಲರೂ ಅಂಥವರೇ ಎಂದು ಹೇಳುತ್ತಿಲ್ಲ ನಾನು. ಆದರೆ ಸಮಾನ ಮನಸ್ಕರೆಂದು ಕಂಡು ಆದರಿಸಿ ಹರಡಿ ಹಂಚಿಕೊಂಡ ಪ್ರತಿಭೆಗಳು ಇಂಥ ಮೋಸಗಳಿಗೆ ಬಲಿಯಾದಾಗ ನೋವಾಗುವುದು ಸಹಜವಲ್ಲವೇ?  ಬರಹಗಳನ್ನು ಬ್ಲಾಗ್ಗಳಿಗೆ ಹಾಕಿಕೊಂಡರೆ ಬರಹಗಳನ್ನು ಕದ್ದು ಬೇರೆ ಹೆಸರಲ್ಲಿ ಹಾಕಿಕೊಳ್ಳುವ ಪತ್ರಿಕೆಗಳು, ಫೇಸ್ಬುಕ್ಕ್ ಪ್ರತಿಭಾವಂತರು, ಕವಿತೆಗಳ ಕದ್ದು ಓದುವ ಕವಿಪಲ್ಲವರು ಇವರೂ ಕೂಡ ಈ ಸಾಲಿಗೆ ಸೇರುತ್ತಾರೆ ಅಲ್ಲವೆ? ಯಾವ ರಾಜಕೀಯ ಪಕ್ಷಕ್ಕೂ ಕಡಿಮೆಯಿಲ್ಲದಂತೆ ರಾಜಕೀಯ, ಸ್ವಾರ್ಥ ಈ ಕಲಾವಿದರ ಸಾಹಿತಿಗಳ ಪ್ರಪಂಚದಲ್ಲಿ ಕಂಡರೆ ಅಸಹನೆ ತನ್ನಂತಾನೇ ಹುಟ್ಟಿಕೊಳ್ಳುತ್ತದೆ. ಒಳ್ಳೆಯವರು ಇಲ್ಲ ಅಂತೇನಿಲ್ಲ. ಆದರೆ ಪ್ರಮಾಣ ಯಾವುದು ಹೆಚ್ಚಾಯಿತು ಎಂಬುದರ ಮೇಲೆ ಆ ರಂಗದ ಭವಿಷ್ಯ ನಿಲ್ಲುತ್ತದೆ. ಈ ಕುರಿತಾದ ನಿಮ್ಮ ಅನಿಸಿಕೆಗಳಿಗಾಗಿ ಕಾಯುತ್ತ..




   

Tuesday, December 3, 2013

ನನಗೀಗ ಸಮಯವಿಲ್ಲ..





   "ಈಗ ಮಾನಸ ಸರೋವರದಲ್ಲಿ ನೀರೇ ಇಲ್ಲ ಅನ್ನಿಸುತ್ತಿದೆ. ಎಲ್ಲ ಸಮುದ್ರಗಳಲ್ಲಿ ಚಂಡಮಾರುತ ಬೀಸಿ ಭರ್ಜರಿ ಅಲೆಗಳ ಪ್ರವಾಹದಂತಿವೆ.  ಆದರೆ ಮಾನಸ ಸರೋವರದಲ್ಲಿ ಮಾತ್ರ ನೀರವ ಮೌನ! ಚಿಕ್ಕ ಅಲೆಯ ಸದ್ದೂ ಇಲ್ಲ! ಏನಾದರೂ ಟ್ಯಾಂಕರ್ ನಿಂದ ನೀರು ತಂದು ಬಿಡಬೇಕಾ?" 

   ಎಷ್ಟು ಚಂದದ ಮುಗ್ಧ ಪ್ರಶ್ನೆ! ಈ ಪ್ರಶ್ನೆಗೆ ಉತ್ತರವಾಗಿಯೂ ಮೌನ ಕರಗಿ ನೀರಾಗದಿದ್ದರೆ ಸರೋವರ ಹೃದಯ ಕಳೆದುಕೊಳ್ಳಬಹುದೆಂಬ  ಭಯ ನನಗೇ ಹುಟ್ಟುತ್ತಿದೆ. ಸಾವಿರ ಜನರನ್ನು ತಲುಪದಿದ್ದರೇನಾಯಿತು? ತಲುಪಿದ ಜನರ ಮಾನಸದಲ್ಲಿ ಒಂದು ನಿರೀಕ್ಷೆ ಹುಟ್ಟಿಸಿದೆಯೆಂಬ ಪ್ರೀತಿಗೆ ಮತ್ತೆ ಅಲೆಗಳು ಮಾನಸ ಸರೋವರದ ತೀರದಲ್ಲಿ.

    
       ಮನಸಿನ ಮನೆಯಲ್ಲಿ ಮನಸಿನೊಂದಿಗೆ ಹೊರಟ ಪಯಣ ಮುಗಿದಿದೆ. ಇದು ಮತ್ತೊಂದು ಪಯಣ. ನಿಮ್ಮೊಂದಿಗಿನ ಮಾತಿನದು.  ಈ ಅಲೆಗಳು ಸ್ವಲ್ಪ ಭಿನ್ನವಾಗಿರಬಹುದು. ಆದರದು ಕೂಡ ಈ ಸರೋವರದಲ್ಲೆದ್ದ ಅಲೆಗಳು.  ಚೂರು ಚೂರು ತಾಗಿದರೆ ಸಾರ್ಥಕ.


ಬರೆಯ ಹೊರಟರೆ ಎಷ್ಟೊಂದು ಪ್ರಶ್ನೆಗಳು  ಎದುರಾಗುತ್ತವೆಯೆಂದರೆ ನಾನೇ ಕಳೆದುಹೋಗುವಷ್ಟು. ಯಾವ ಯಾರ ಹಂಗೂ ಇಲ್ಲದೆ ನಿಭರ್ೀಡೆಯಿಂದ ಮನಸಿನ ಮಾತುಗಳ ಬರೆಯತೊಡಗಿದರೆ ಅದೆಷ್ಟೋ ಮನಸುಗಳಿಗೆ ನೋವಾಗಬಹುದು! ಅದೆಷ್ಟೋ ವಿರೋಧಗಳಿಗೆ ಎಡೆಯಾಗಬಹುದು. ಯಾಕೆಂದರೆ ನನ್ನ ಭಾವ ವಿಚಾರಗಳೆಲ್ಲ ಎಲ್ಲರದ್ದೂ  ಆಗಿರಬೇಕೆಂಬ ನಿಯಮವಿಲ್ಲ. ಇತ್ತೀಚೆಗೆ ಹಲವು ಬ್ಲಾಗ್ ಓದುತ್ತಿದ್ದಂತೆ ಹಲವು ಪುಸ್ತಕಗಳ ನೋಡುತ್ತಿದ್ದಂತೆ ಇಂತ ಹಲವು ಪ್ರಶ್ನೆಗಳ ಇಟ್ಟುಕೊಂಡು  ಏನು ಬರೆಯಲಿ ಎಂದೇ ತೋಚುವುದಿಲ್ಲ. ಒಳಗಿನ ಹಸಿ ಹಸಿ ಭಾವಗಳ   ಕಾವ್ಯವಾಗಿಸುವಂತ ಮನಸ್ಥಿತಿ ಇಂದಿಗಿಲ್ಲ. ಬರೆದದ್ದೆಲ್ಲ ಪ್ರಕಟವಾಗಬೇಕೆಂಬ ತೆವಲು ಇಂದಿಗೂ ಹುಟ್ಟಿಲ್ಲ ಎಂಬುದಕ್ಕೆ ನನಗೆ ನಾನೇ ಹಲವು ಬಾರಿ ಸ್ಪಷ್ಟಪಡಿಸಿಕೊಂಡಿದ್ದೇನೆ. ಹಾಗಿದ್ದೂ ಉತೃಷ್ಟತೆಯ ಹಪಹಪಿ ಕೂಡ ಇಲ್ಲ ಅಂತಲೇ ಅಂದುಕೊಂಡಿದ್ದೇನೆ. ನನ್ನದಾದ ಬ್ಲಾಗ್ ನ
ಈ ಪಯಣದಲ್ಲಿ ನಿಮ್ಮೊಂದಿಗೆ ನಾಲ್ಕು ಮಾತು ನನ್ನದಿರಲಿ ಅಂತಷ್ಟೇ.  ಮತ್ತೆ ಬರೆಯುವ ಈ ಭಾವ ಸ್ವಾರ್ಥ ಅಂದುಕೊಂಡರೆ ಹಾಂ ಹಾಗೇ ಇರಬಹುದು.

 ಈ ಸ್ವಾರ್ಥ ನಿಸ್ವಾರ್ಥಗಳ ಬಗ್ಗೆ ಗೋಜಲು. ನಮ್ಮವರನ್ನು ಪ್ರೋತ್ಸಾಹಿಸುವುದು ಅವರನ್ನು ಮುಂದೆ ತರುವುದಕ್ಕಾಗಿ ಒಂದಿಷ್ಟು ಸಲಹೆ ಪ್ರಚಾರ ಕೊಡುವುದು ತಪ್ಪಾ? ಪ್ರತಿಯೊಬ್ಬರೂ ಅದೂ ಅಂತಜರ್ಾಲದ ಈ ಸಾಮಾಜಿಕ ಪ್ರಪಂಚದಲ್ಲಿ  ಹಾಗೆ ಒಟ್ಟೊಟ್ಟಿಗೆ ಬೆಳೆಯುವವರ ಸಲಹುವವರ ನೋಡುತ್ತೇವೆ. ಯಾರ್ಯಾರೋ ಪ್ರತಿಭಾವಂತರಿಗೆ ಇನ್ಯಾರೋ ಮಣೆ ಹಾಕಬಹುದು! ಆದರೆ ನಮ್ಮವರಿಗೆ ನಾವೇ  ಮಣೆ ಹಾಕದಿರುವ ಮತ್ತು ಮತ್ತೊಬ್ಬರು ಅವರಷ್ಟಕ್ಕೇ ಅಂತ ಪ್ರೀತಿ ಕಟ್ಟಿಕೊಂಡರೆ ಅದನ್ನು ಗುಂಪುಗಾರಿಕೆ ಅಂದುಕೊಳ್ಳುವುದು ಸರಿಯಾ?  ಎಷ್ಟೋ ಬಾರಿ ನಮ್ಮೂರಿನಲ್ಲಿ ಇಂತಹ ಅನೇಕ ವ್ಯಕ್ತಿಗಳ ನೋಡುತ್ತೇವೆ ನಾವು. ಪಕ್ಕದ ಮನೆಯಲ್ಲಿರುವ ಯಾವುದೋ ವಿಷಯ ಪಾರಂಗತ ಪ್ರತಿಭಾವಂತ ಲೋಕವಿಖ್ಯಾತಿ
ಪಡೆದಿರುತ್ತಾನೆ. ಅವನನ್ನು ಅವನವರು ಅವನೂರು ಗುರುತಿಸುವುದೇ ಇಲ್ಲ. ಒಮ್ಮೆ ನಮ್ಮೂರಿನ ಅಂಧ ಕೊಳಲು ಕಲಾವಿದ ಮಂಜಣ್ಣ ನಿಗೆ ಒಂದು ಪುಟ್ಟ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆಗ ಅವರೊಂದು ಮಾತು ಹೇಳಿದ್ದು ಈಗಲೂ ನೆನೆಪಿಗೆ ಬರುತ್ತಿದೆ. ಎಷ್ಟು ಪ್ರಸಿದ್ದಿ  ಪಡೆದರೇನು ನಿನ್ನವರು ನಿನ್ನ ಪ್ರತಿಭೆ ಗುರುತಿಸದಿದ್ದರೆ! ಊರಲ್ಲಿ ನಡೆಸಿದ ಈ ಸನ್ಮಾನ ರಾಜ್ಯಪ್ರಶಸ್ತಿ ಸಿಕ್ಕಿದ್ದಕ್ಕಿಂತ ದೊಡ್ಡದು ಎಂದು ಅವರನ್ನುವಾಗ ಅವರ ಕಣ್ಣಲ್ಲಿ ಅಕ್ಷರಶಃ ನೀರಿತ್ತು.  ನಮ್ಮವರನ್ನು ನಾವು ಗುರುತಿಸಿಕೊಳ್ಳುವುದು ಸನ್ಮಾನಿಸುವುದು, ಗೌರವಿಸುವುದು ಇವೆಲ್ಲ ಸ್ವಾರ್ಥವಾ ಹಾಗಾದರೆ?

ಹಲವು ಬಾರಿ ಗೆದ್ದೆತ್ತಿನ ಬಾಲ ಹಿಡಿಯುವ ಮತ್ತು ನಾವು ಪೂರ್ಣ ಸಂಭಾವಿತರೆಂದು ತೋರಿಸಿಕೊಳ್ಳುವ ಅನೇಕರನ್ನು ನಾವು ನೋಡುತ್ತಿರುತ್ತೇವೆ. ಪ್ರತಿಭೆ, ಸಾಧನೆಗಳ  ಮಾಡಿದವರ ಜೊತೆ  ನಿಂತುಕೊಂಡು ತಾನೂ ಮಾಡಿದ್ದೆಂಬ ಹಮ್ಮು ತೋರುವವರು. ಇಲ್ಲ ಅವರನ್ನು ಮಾತ್ರ ತಮ್ಮವರೆಂದುಕೊಳ್ಳುತ್ತ ಪರಿಚಯಿಸಿಕೊಳ್ಳುವವರು. ಇಂತವರ ಬಗ್ಗೆ ಇದೀಗ  ಒಂದಿಷ್ಟು ಅಸಹನೆ ಹುಟ್ಟಿಕೊಂಡಿದೆಯೆಂದರೆ ತಪ್ಪಲ್ಲ. ಅವರಿಗೆ ಬೇರೆಯವರು ಮಾಡಿದ ಯಾವ ಕೆಲಸಗಳೂ ಒಳ್ಳೆಯದು ಅನ್ನಿಸುವುದಿಲ್ಲ. ಅವರ ಮೂಗಿನ ನೇರಕ್ಕೇ ಪ್ರತಿಯೊಂದೂ ಸರಿಯೆಂಬ ಪ್ರತಿಪಾದಕರು. ಇವರ ಬಾಯಲ್ಲಿ ಕೂಡ ಎಲ್ಲರೂ ಸ್ವಾರ್ಥಿಗಳು. ಸಂಭಾವಿತರ ಸಾಲಿನಲ್ಲಿ ಅವರು ಮೊದಲಿರುತ್ತಾರೆ! ತಪ್ಪೇನೂ ಇಲ್ಲದಿದ್ದರೂ ಅವರು ಉಳಿದವರನ್ನೆಲ್ಲ
ತಪ್ಪಿತಸ್ಥರಂತೆ ಕಾಣುತ್ತಿರುತ್ತಾರೆ! ಇಂಥವರು ಪ್ರೋತ್ಸಾಹಕರಾಗಿ ತೋರುತ್ತಾರೆ. ಪ್ರೋತ್ಸಾಹದ ಹಿಂದೆಯೂ ಸ್ಮರಣೆಯಿರಲಿ ಎಂಬ ಸ್ವಾರ್ಥವೇ ಎದ್ದುನಿಲ್ಲುತ್ತದೆ. ಆಗೆಲ್ಲ ಉಪಕಾರಸ್ಮರಣೆ ಕೂಡ ಸ್ವಾರ್ಥ ಅನ್ನಿಸಿಕೊಳ್ಳುತ್ತದೆ. ಈ ಸ್ವಾರ್ಥ ಒಂದು ಹಂತದವೆರಗೆ ಸರಿಯೇ.. ಆದರೂ ಪ್ರತಿಫಲಾಕ್ಷೆಯಿಂದಲೇ ಪ್ರೋತ್ಸಾಹ ನೀಡುವುದು ಎನ್ನುವುದು ಒಂದು ತರದ ವ್ಯಾಪಾರೀ ಮನೋಭಾವ ಅನ್ನಿಸಿಕೊಳ್ಳುತ್ತದೆ. ಇಲ್ಲಿ  ಕೂಡ ಸಹಾಯ ಸಹಕಾರ ಪಡೆದವರಿಗೆ ಸ್ಮರಣೆ ಎಂಬುದು ಬೇಕೇ ಬೇಕು. ಉಪಕಾರ ಸ್ಮರಣೆ ಇಲ್ಲದವನು ಸಹಾಯ ಪಡೆದುಕೊಳ್ಳಲು ಅರ್ಹನಲ್ಲ. ಹಾಗಿದ್ದರೆ ಇಲ್ಲಿ ನ್ಯಾಯ ಯಾವುದು? ಸ್ವಾರ್ಥ ರಹಿತ ಮತ್ತು ಸ್ವಾರ್ಥ ಸಹಿತ ಇವೆರಡದರ ನಿರ್ಣಯ ಹೇಗೆ?



    ಬದುಕು ಒಂದಿಷ್ಟು ಕಾಲಘಟ್ಟದಲ್ಲಿ ಹದವಾಗುತ್ತದೆ, ಇನ್ನೊಂದು ಕಾಲಘಟ್ಟದಲ್ಲಿ ಪಕ್ವಗೊಳ್ಳುತ್ತದೆ. ಮತ್ತೊಂದು ಕಾಲಘಟ್ಟದಲ್ಲಿ ಪರಮಾನ್ನವಾಗುತ್ತದೆ ಆಗಬೇಕು ಎಂಬುದು ಸಹಜ. ಹಾಗಿದ್ದೂ ಕೆಲವರು ಮಕ್ಕಳಂತೆ ಮುಗ್ಧವಾಗಿ ಅನುಗಾಲ ಬಾಳುತ್ತಾರೆ. ತಮ್ಮ ಸಾವಿರ ಗೋಜಲುಗಳ ನಡುವೆ ಈಗಿನವರ ಕಷ್ಟ ಸುಖ ವಿಚಾರಿಸುತ್ತಾರೆ. ಎಷ್ಟೋ ಬಾರಿ ಅವರ ಅಪ್ಪ ಅಮ್ಮನಿಗೆ ಪುರುಸೊತ್ತಿಲ್ಲದವರೂ ಅಂತವರ ಬಳಿ ಬಂದು ತಮ್ಮ ಕಷ್ಟ ಸುಖ ಹೇಳಿಕೊಳ್ಳುತ್ತಾರೆ. ಅವರನ್ನು ಕೇಳಿಸಿಕೊಳ್ಳುವ ಸಹನೆಯಿದೆಯಲ್ಲ. ಅದೂ ಸಹ  ಆದರಣೀಯ ಗುಣ. ಅಂಥಹ ಅನೇಕರು ನಮ್ಮ ನಡುವೆ ಸಿಗುತ್ತಾರೆ.  ವಿಪಯರ್ಾಸವೆಂದರೆ ಹಾಗೆ ಕೇಳಿಸಿಕೊಂಡವರನ್ನೇ ಕಾಲಕ್ರಮೇಣ ಅವರೂ ಮರೆತುಬಿಡುತ್ತಾರೆ! ಬದುಕಿನ ಜಂಜಾಟಗಳ ಮಧ್ಯೆ ಯಾರಿಗೂ ಯಾರಿಗಾಗಿಯೂ ಸಮಯ ಕೊಡಲೇಬೇಕೆಂಬ ನಿಯಮವಿಲ್ಲ. ಪ್ರಪಂಚದಲ್ಲಿ ಎಲ್ಲಕ್ಕಿಂತ ಬೆಲೆಬಾಳುವುದೆಂದರೆ ಸಮಯ. ಅಂತಹ ಅಮೂಲ್ಯ ಸಮಯವನ್ನು ನಮಗೋಸ್ಕರ ಕೊಟ್ಟವರಿಗಾಗಿ ನಮ್ಮ ಬಳಿ ಐದು ಸೆಕೆಂಡಿನಷ್ಟು ಸಮಯ ಉಳಿಯದೇ ಹೋಗುವುದಿದೆಯಲ್ಲ ಇದಕ್ಕೆ ಏನನ್ನಬೇಕು ಅನ್ನುವ ಪ್ರಶ್ನೆ ಕೂಡ ಇದೆ ನನಗೆ.!

 ವಿನಾಕಾರಣ ಪ್ರೀತಿಸುವವರನ್ನು ನೋಡುತ್ತೇವೆ.  ಹೀಗೆ ಪ್ರೀತಿಸಲು ಕಾರಣಗಳು ಬೇಕಿಲ್ಲ. ಯಾವ ನಿರೀಕ್ಷೆಗಳಿಲ್ಲದೇ ನಮ್ಮ ನಡುವೆ ನಮ್ಮನ್ನು ಪ್ರೀತಿಸುವೆಷ್ಟೋ ಶಿಕ್ಷಕರಿರುತ್ತಾರೆ. ಅಭಿಮಾನಿಗಳಿರುತ್ತಾರೆ.  ಸುಮ್ಮನೆ ಸ್ನೇಹಿತರಿರುತ್ತಾರೆ. ಕೆಲವರಿಗೆ ಪ್ರೀತಿ ಎನ್ನೋದು ಕಾಮುಕ. ಆದರೆ ಇನ್ನು ಕೆಲವರಿಗೆ ಪ್ರೀತಿ ದೈವಿಕ. ಅವರಲ್ಲಿ ನಿರಪೇಕ್ಷತೆಯಿರುತ್ತದೆ ಎಂಬುದು ನಿಜವಾದರೂ ಸ್ಪಂದಿಸುವ ಮನಸ್ಸನ್ನಂತೂ ಹೊಂದಿರಬೇಕಾಗುತ್ತದೆ. ಎಲ್ಲರ ಪ್ರೀತಿಗೆ ತೆರೆದುಕೊಳ್ಳಲಾಗದು ಎಂಬುದು ಒಂದು ಸತ್ಯವಾದರೆ ಒಂದು ಸಹಜ ಒರತೆಗೆ ಒಡ್ಡಿಕೊಳ್ಳುವಷ್ಟು  ಮನಸಿನ ಕೊಳವನ್ನು ನಿರ್ಮಲವಾಗಿ ಇಟ್ಟುಕೊಳ್ಳಬೇಕು. ಸ್ನೇಹ, ಅಣ್ಣ, ತಮ್ಮ, ಅಕ್ಕ, ತಂಗಿ, ಇನ್ಯಾವುದೋ ನಂಟಿನ ಭಾವಕ್ಕೆ ಕಲ್ಮಶವಿಲ್ಲದಿದಲ್ಲಿ ಪ್ರೀತಿ ಎಷ್ಟು ಅಂದ! ಆನಂದ!ಹಾಗಿದ್ದೂ ಅವನ್ನೆಲ್ಲ ನಮ್ಮ ನಮ್ಮ ಈಗೋ ಗಳ ಮೂಲಕ ಸದಾ ಹಳದಿಕಣ್ಣಿನ ಗ್ಲಾಸಿನ ಮೂಲಕ ನೋಡುವವರು ಬೇಕಾದಷ್ಟು ಜನರಿದ್ದಾರೆ. ಇದಕ್ಕೆ ಪೂರಕವಾಗಿ
ಪ್ರೀತಿಯ ಹೆಸರಲ್ಲಿ ಸ್ನೇಹದ ಹೆಸರಲ್ಲಿ ದುರುಪಯೋಗ ಪಡಿಸಿಕೊಳ್ಳುವವವರೂ ಸಾಕಷ್ಟು ಜನರಿದ್ದಾರೆ.  ಹಾಗಾದರೆ ನಾವು ನಿರ್ಮಲವಾಗಿ ಇರಬೇಕೆಂದರೆ ಹೇಗಿರಬೇಕು ಸ್ನೇಹ? 

  ಇವತ್ತಿಗೆ ಸಾಕಲ್ಲವಾ ಇಷ್ಟು ಪ್ರಶ್ನೆ? ಮತ್ತೆ ಇದೇ ತೀರದಲ್ಲಿ ಸಿಗೋಣ  ಆಗಾಗ. ನಿಮ್ಮ ಅನಿಸಿಕೆಗಳಿಗಾಗಿ  ಮುಂದಿನ ಜಾಗ.