Friday, August 14, 2015

ದೇಶಾ ನನ್ನದು ನನ್ನದೀ ದೇಶ....


ಯಾಕೆ ಸುಮ್ಮನೆ? ಬರೆದು, ಮಾತಾಡಿ  ಏನು ಸಾಧಿಸುವುದಿದೆ  ಅಂತ ಸಾವಿರಬಾರಿ ಅನ್ನಿಸುತ್ತದೆ. ಹಾಗಿದ್ದೂ ಒಮ್ಮೊಮ್ಮೆ  ಬರೆಯದಿರಲಾಗದ
ಅಸಹನೆ ಕಾಡುತ್ತದೆ. ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಸಿಗುವ ಅನವಶ್ಯಕ ವಿಷಯಗಳ ಕಂಡಾಗ, ದೊಡ್ಡ ದೊಟಡ್ಡವರೆನ್ನಿಸಿಕೊಂಡವರು ಸಣ್ಣತನಗಳ ಮೆರೆವಾಗ, ಭೌತಿಕ, ಆಧ್ಯಾತ್ಮಿಕ ಸಂಪತ್ತುಗಳಿಂದ ತುಂಬಿರುವ ಈ ನೆಲವನ್ನು ದೇಶವನ್ನು ಹೀನಾಯವಾಗಿ ನೋಡುವಾಗ, ನಮ್ಮದೇ  ಮನಸ್ಥಿತಿಯ ಜನರು ಇದ್ದಕ್ಕಿದ್ದಂತೆ ಕಳೆದು ಹೋಗುವಾಗ,  ಮಾನವೀಯ ಸಂಬಂಧಗಳು ಮೌಲ್ಯ ಕಳೆದುಕೊಳ್ಳುವಾಗ, ಒಳ್ಳೆಯದೆಲ್ಲವೂ ಕೆಟ್ಟದೆಂಬಂತೆ ಬಿಂಬಿಸಲ್ಪಟ್ಟಾಗ  ಬರೆದು ಹಗುರಾಗುವ ತವಕ
ಹುಟ್ಟಿಕೊಳ್ಳುತ್ತದೆ. ಯಾರನ್ನೋ ಸುಧಾರಿಸಿಬಿಡುವ ಆವೇಶವಲ್ಲ ಇದು. ನನ್ನೊಳಗನ್ನು ಹಗುರಾಗಿಸಿಕೊಳ್ಳುವ ಸ್ವಾರ್ಥವೇ ಇರಬಹುದು. ಆದರೆ ಹೌದು ಒಮ್ಮೊಮ್ಮೆ ಮೌನ ಮುರಿದುಬಿಡಬೇಕು.  "ಛೆ" ಅನ್ನಿಸಿದರೆ ಹೇಳಿಬಿಡಬೇಕು. 

     ಸಮಾಜದಲ್ಲಿ ಒಳ್ಳೆಯದು ಏನೂ ಇಲ್ಲವಾ? ಎಂಬುದು ನನ್ನ ಪ್ರಶ್ನೆ. ಹಿಂದೂ ಇರಲಿ ಮುಸಲ್ಮಾನ ಅಥವಾ ಇನ್ಯಾವುದೇ ಧರ್ಮವಿರಲಿ. ಏನೂ ಇಲ್ಲವಾ ಒಳ್ಳೆಯದು?ಯಾಕೆ ಒಳ್ಳೆಯ ವಿಚಾರಗಳು ಪ್ರಚಲಿತವಾಗುವುದಿಲ್ಲ? ಯಾಕೆ ಒಳ್ಳೆಯ ವಿಷಯಗಳು ಪದೇ ಪದೇ ನಮ್ಮ  ಕಿವಿಗಳ ಮೇಲೆ ಬೀಳುವುದು ನಿಂತು ಹೋದವು?

ಎಲ್ಲಾದರೂ ಏನಾದರೂ ಸಮಾಜಪೂರ್ಣ ಕುಳಿತು ಕೇಳುವ  ವಿಷಯ ನಡೆಯುತ್ತಿದ್ದರೆ ಮೊಸರಲ್ಲಿ ಕಲ್ಲು ಹುಡುಕಲು ಪ್ರಾರಂಭಿಸುತ್ತೇವೆ. ನಾವೇ. ನಮ್ಮ ನೆಲದಲ್ಲಿರುವ ಹುಳುಕುಗಳ ಮುಚ್ಚಿಟ್ಟು ಮತ್ತೊಬ್ಬರ ಬದುಕಿನ ನೊಣ ಹುಡುಕುವ ಕೆಲಸ ಸಮಾಜಮುಖಿ ಎಂಬಂತೆ ನಡೆಯುತ್ತದೆ. ಮತ್ತದನ್ನು ಪ್ರಚಾರಪಡಿಸಿ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಕಾದಿರುವ ಮಾದ್ಯಮಗಳು ಮತ್ತೆ ಮತ್ತೆ ಅದನ್ನೇ ಕಿವಿಗಿಂಪು ಎಂಬಷ್ಟು ಅನವಶ್ಯಕ ಚಚರ್ೆಗಳಲ್ಲಿ ಮುಳುಗುವ ಬುದ್ಧಿವಂತರು...

    ಬುದ್ಧೀಜೀವಿಗಳೆಂದು ಕರೆಸಿಕೊಳ್ಳುವವರೊಂದೇ ಅಲ್ಲ. ನಿಜವಾಗಿ ಬುದ್ಧ್ದಿ ಜೀವಿಗಳು ಎನ್ನಿಸಿಕೊಂಡವರು ಕೂಡ ಈ ಬಗ್ಗೆ ಚಕಾರವೆತ್ತುವುದಿಲ್ಲ. ಅವರಿಗೆ ಅವರಷ್ಟಕ್ಕೆ ಇರುವುದ ಬಹಳ ದೊಡ್ಡತನ. ತಾನು  ತನ್ನದು ತನಗೆ ಗೊತ್ತಿದೆ ಎಂಬ ಆತ್ಮವಿಶ್ವಾಸ ಅಹಂಕಾರವಾಗಿ ಬದಲಾಗಿದ್ದೂ ಗೊತ್ತಾಗದಂತ ಅವಸ್ಥೆಯೆನ್ನಬೇಕೇನೋ. ಸಹಜತೆಗಿಂತ ಅಲ್ಲಿ
ದೊಡ್ಡತನ ಯಾವುದೂ ಇಲ್ಲ ಎಂಬುದನ್ನು ಮರೆತುಬಿಡುವ ಈ ದೊಡ್ಡವರೆದುರು ನೀವು ಎಂಥದ್ದೇ ತೆಗೆದುಕೊಂಡು ಹೋದರೂ ಅದೊಂದು ಯಕಶ್ಚಿತ್ ಎಂಬಂತೆ ಮಾತನಾಡುವ ಕಲೆ ಅವರಿಗೆ ಅವರ ಬೌದ್ಧಿಕ ಸಾಮಥ್ರ್ಯ ಕೊಟ್ಟಿರುತ್ತದೆ. ನಾನು ರಾಜಕಾರಣಿಗಳನ್ನು ಉದ್ದೇಶಿಸಿ ಯಾವ ಮಾತನ್ನೂ ಹೇಳುತ್ತಿಲ್ಲ. ಅವರು ಬೇರೆಯೇ ವರ್ಗದ ಜನ ಬಿಡಿ. ಸಮಾಜದ ಇನ್ನಿತರ ದೊಡ್ಡವರು ಮತ್ತು ಸಮಾಜ ಚಿಂತಕರ ಕುರಿತು ಹೇಳುತ್ತಿದ್ದೇನೆ. 

        ಯಾವುದನ್ನಾದರೂ ಸರಿಯಿಲ್ಲ ಕೆಟ್ಟದ್ದು ಅಂತ ತೀಮರ್ಾನಿಸುವಾಗ ಸರಿ ತಪ್ಪು ಅರಿವಿದ್ದವರಾಗಿರಲೇಬೇಕು. ಹಾಗಿದ್ದರೆ ತಪ್ಪು ಅಂತ ಹೇಳುವವರು ಸರಿಯಾದ ಮಾರ್ಗ ತೋರುವ ಸಾಮಥ್ರ್ಯ ಇದ್ದವರಾಗಿರಬೇಕು. ಅವರು ಹೇಳದೇ ಉಳಿದರೆ ಅಂತಹ ಜ್ಞಾನ ಸಮಾಜಕ್ಕೆ
ಉಪಯೋಗವಾಗದಿದ್ದರೆ ಅದಿದ್ದು ಪ್ರಯೋಜನವೇನು? ನನಗೆ ತಿಳಿದಂತೆ
ಇದು ಜ್ಞಾನಿಗಳ ನಾಡು. ವೃಥಾ ಆರೋಪ ಪ್ರತ್ಯಾರೋಪಗಳಲ್ಲಿ ಕಳೆಯುವ ಮಾಧ್ಯಮಗಳಿಗೆ ಇಂತ ಜ್ಞಾನಿಗಳ್ಯಾರೂ ಹೋಗುವುದಿಲ್ಲ.   ಎಲ್ಲರೂ ಓದುವಂತ ಮನಸಿಗೆ ತಲುಪುವಂತ ಯಾವ ಸರಳ ಜ್ಞಾನವನ್ನೂ ಈ ಬುದ್ದಿವಂತರು ಸಮಾಜಕ್ಕೆ ಕೊಡಲು ಇಷ್ಟಪಡುವುದಿಲ್ಲ. ಸದಾ ಪೌರೋಹಿತ್ಯಶಾಹಿಗಳು  ಎಂದು ಜರಿಯಲ್ಪಡುವ ಒಂದೇ ಕಾರಣವೂ
ಇದೇ ಅನ್ನಿಸುತ್ತದೆ ನನಗೆ. ವೇದಗಳ ಕುರಿತು ನಿಷ್ಠೆ ಸರಿ. ಕಟ್ಟು ನಿಟ್ಟಾಗಿ ಆಚರಿಸಲ್ಪಡಬೇಕೆಂಬುದು ಸರಿ. ಆದರೆ ಅದನ್ನೇ ವಿಷದವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ತರುವ ಸಾಮಥ್ರ್ಯ ನಮ್ಮ ಪಂಡಿತರಿಗೆ ಇರಲಿಲ್ಲವಾ? ಒಂದುವೇಳೆ ಇವೆಲ್ಲವೂ ಯಾರಿಗಾದರೂ ಅನರ್ಹ ಎಂದು ವೇದ ಸಾರಿದೆಯಾ? ಇಲ್ಲ. ವೇದ ಏನೂ ಇಂತಹದನ್ನು
ಹೇಳುವುದಿಲ್ಲ ಎಂದು ವೇದಪಂಡಿತರೇ ಹೇಳುತ್ತಾರೆ. ಹಾಗಾದರೆ ನಮ್ಮಲ್ಲಿಯ ಜ್ಞಾನಬಂಡಾರ, ನಮ್ಮ ದೇಶದ ಸಂಸ್ಕೃತಿ, ನಮ್ಮ ಮೂಲಗಳು ನಮ್ಮ  ನಾಡಿನ ಇಂದಿನ ಈ ಬೌದ್ದಿಕ ಅನಾಚಾರವನ್ನು ಯಾಕೆ ತಡೆಯಲು ಸಾಧ್ಯವಾಗುತ್ತಿಲ್ಲ? ಮಾನವೀಯ ಮೌಲ್ಯಗಳ ಮೂಲವೇ ಆದ ನಮ್ಮ ಸಂಸ್ಕೃತಿಯ ಪ್ರಬಂಧಕರು ಯಾಕೆ ಇವನ್ನು ಮಾದ್ಯಮಗಳ ಮೂಲಕ ಜನಸಾಮಾನ್ಯರ ಮನಸಿಗೆ ತಲುಪಿಸಲು ಶಕ್ಯರಾಗುತ್ತಿಲ್ಲ?  ಅವರ ಅಹಂ  ಅಡ್ಡಬರುತ್ತಿದೆಯಾ? ಅವರ ಜ್ಞಾನವೇ ಸಮಾಜದಲ್ಲಿ ಸಹಜವಾಗಿ ಸರಳ ಬದುಕಿನ ಸೂತ್ರಗಳ ಹೇಳಲು ಅವರಿಂದ ಸಾಧ್ಯವಾಗುತ್ತಿಲ್ಲವಾ? ಕೆಟ್ಟದ್ದನ್ನು ಬಾಯಿ ಬಿರಿದು ಬೊಬ್ಬಿರುವ ಜನ ಒಂದು ವರ್ಗವೇ ಸೃಷ್ಟಿಯಾಗಿದೆ. ಓಕೆ. ಅದು ಸಮಾಜದ ಒಂದು ಮುಖ. ಆದರೆ
ಒಳ್ಳೆಯದಕ್ಕೆ ಸಮಾಜದಲ್ಲಿ ಜಾಗವೇ ಇಲ್ಲದಂತಾಗಿದ್ದರೆ  ಅದು ಬರೀ ಆ ವರ್ಗದವರ ತಪ್ಪಲ್ಲ.  ಬಾಯಿಬಿಡದೇ ಕೂತಿರುವ ಒಳ್ಳೆಯವರ ತಪ್ಪು ಕೂಡ ಹೌದು.

   ಸಮಯ ಬಂದಾಗ ಸಮಾಜದ ಪ್ರತಿಯೊಬ್ಬರೂ ಮುಖ್ಯವಾಹಿನಿಯಲ್ಲಿ ಸೇರಿಕೊಂಡು ಕೆಲಸ ನಿರ್ವಹಿಸಬೇಕು. ಮೋದಿ ಈ ಕಾರಣಕ್ಕೆ ನನಗೆ ಇಷ್ಟವಾಗುತ್ತಾರೆ. ಅವರು ಮ್ಯಾಜಿಕ್
ಮಾಡುತ್ತಾರೆಂದಲ್ಲ. ಹಿಂದೂ ಧರ್ಮ ಉದ್ಧಾರ ಮಾಡುತ್ತಾರೆಂದೂ ಅಲ್ಲ. ದೇಶದ ಎಲ್ಲಾ ಸಮಸ್ಯೆ ಪರಿಹರಿಸಿಬಿಡಬೇಕೆಂದೂ ಅಲ್ಲ. ದೇಶದ ಕೊನೆ ಕೊನೆಯಲ್ಲಿರುವ ಮನುಷ್ಯನ ಎದೆಯಲ್ಲಿ ದೇಶ ಎಂಬ ನುಡಿ ಮಾರ್ದನಿಸುವಂತೆ ಎಚ್ಚರಗೊಳಿಸುತ್ತಾರೆ. ಎಲ್ಲ ಹೃದಯದಲ್ಲೂ ಒಬ್ಬ ಮನುಷ್ಯ ಜೀವಂತವಾಗಿದ್ದಾನೆ. ಆ ಮನುಷ್ಯನ ಜೀವಂತಿಕೆಯ ಕೇಂದ್ರವನ್ನು
ಎಚ್ಚರಗೊಳಿಸುವ ಸಾಮಥ್ರ್ಯ ಅವರ ನುಡಿಯಲ್ಲಿ ಮಾರ್ದನಿಸುತ್ತದೆ. ದೇಶ, ಭಾಷೆ,  ನನ್ನದು ಎಂಬ ಆ ಭಾವ ಮನುಷ್ಯನಲ್ಲಿ ಮೂಲದಲ್ಲಿ ಜಾಗೃತವಾದರೆ ತನ್ನಿಂದತಾನೇ ಮನುಷ್ಯನಲ್ಲಿ ಮಾನವತೆ ಜಾಗೃತಗೊಳ್ಳುತ್ತದೆ. ಅವನು ಸಮಾಜಮುಖಿ ಮತ್ತು ಮನುಷ್ಯನಾಗಿ ಬೆಳೆಯುವ ಹಾದಿಯಲ್ಲಿ ನಡೆಯುತ್ತಾನೆ. ಪ್ರತಿ ಹೃದಯವನ್ನೂ ಜೀವಂತಗೊಳಿಸಬಲ್ಲ ವಿವೇಕಾನಂದರ ಮಾತುಗಳಲ್ಲಿ ಇವತ್ತಿಗೂ ನಾವು ಕಾಣುವುದು ಇದೇ ಮೂಲ ಶಕ್ತಿಯನ್ನು.  ಬುದ್ಧಿವಂತರಿಗೆ, ವಿಷಯ ಜ್ಞಾನಿಗಳಿಗೆ, ಸಮಾಜದ ಪರಿವೆಯಿದ್ದರೆ ಈ ದೇಶದ ನೆಲ ಪಾವನವಾಗುತ್ತದೆ. ಅವರು ಸ್ವಾಥರ್ಿಗಳೂ ಮೌನಿಗಳೂ ಆದರೆ ಎಂಥ ಸಾಧಕರು ಜ್ಞಾನಿಗಳಿದ್ದರೂ ದೇಶ ನೆಲಕಚ್ಚುತ್ತದೆ.

  ಅಳಿಲುಸೇವೆ ರಾಮಾಯಣದಲ್ಲಿ ನನಗಿಷ್ಟವಾಗುವ ಪಾಠ. ನಮ್ಮದು  ಅಳಿಲುಸೇವೆಯಾಗಲಿ ಈ ಭೂಮಿಗೆ. ಹುಟ್ಟಿದ, ಬದುಕಿದ ಮಣ್ಣಿಗೆ ಋಣ ತೀರಿಸಲು ಸಾಧ್ಯವಿಲ್ಲ. ಅವರವರ ಕೈಲಾದ ಸೇವೆ ಸಾಕು. ಎಷ್ಟೋ  ಅಂತಹ ಪಾಠಶಾಲೆಗಳಿವೆ ನಮ್ಮಲ್ಲಿ, ಗುರುಕುಲ, ಆಶ್ರಮಗಳಿವೆ. ಸೇವೆ ಮಾಡುವ ದಾದಿಯಿಂದ ಹಿಡಿದು ವೈದ್ಯನ ವರೆಗೆ, ನರ್ಸರಿ ಶಿಕ್ಷಕಿಯಿಂದ ಹಿಡಿದು ಉಪನ್ಯಾಸಕರವರೆಗೆ  ಎಲ್ಲ ಕ್ಷೇತ್ರಗಳ ಎಲ್ಲ ಕೆಲಸಗಳ ಗೌರವಿಸುವ ಮನಸ್ಥಿತಿ ನಮ್ಮದಾಗಲಿ, ಚಕ್ರವತರ್ಿ ಸೂಲಿಬೆಲೆಯವರ ಜಾಗೋ ಭಾರತ್ ದಲ್ಲಿ ತುಂಬ
ಒಳ್ಳೆಯ ಮಾತು ಹೇಳುತ್ತಾರೆ! ಅವರು ನನ್ನ ದೇಶ ಜಗತ್ತಿನಲ್ಲಿಯೇ ನಂಬರ್ ಒನ್ ಇದೆ ಅನ್ನುವ ಸಾಲು ಸಾಲು ಆ ಮಾತುಗಳ ಕೇಳುತ್ತಿದ್ದರೆ ಎಂತವನ ಮನದಲ್ಲಾದರೂ ಹೆಮ್ಮೆ ಸುಳಿಯದಿರದು. ಭಾರತದ ಸಾಧನೆಗಳ ಮಹಾ ಪಟ್ಟಿಯಲ್ಲಿ ನಮ್ಮ ಜ್ಞಾನಿ  ಹಾಗೂ ಮೌನಿ ಪಂಡಿತರೂ ಸೇರುವಂತಾಗಲೀ. ಮುಖ್ಯವಾಹಿನಿಗಳಲ್ಲಿ ಅವರು ರಾರಾಜಿಸಲಿ. ಆಗ
ಸಮಾಜದಲ್ಲಿ  ಭಾವೀ ಸಮಾಜದಲ್ಲೀ ಮಕ್ಕಳ ಕಿವಿಗಳ ಮೇಲೆ ಒಳ್ಳೆಯದು ಪದೇ ಪದೇ ಬೀಳುತ್ತದೆ. ಮತ್ತು ಅದು ಅವರಲ್ಲಿ ಅಚ್ಚಾಗಿ ಉಳಿದು ಸತ್ಪ್ರಜೆಗಳ ನಿಮರ್ಾಣಕ್ಕೆ ಕಾರಣವಾಗುತ್ತದೆ. ಮನೆ, ತಾಯಿ, ಎಲ್ಲರನ್ನೂ ದೂಷಿಸುವ ಸಮಾಜದಲ್ಲಿ ಇನ್ನೂ ಅದೇ ಕುಟುಂಬವ್ಯವಸ್ಥೆ ಉಳಿದಿದ್ದರೆ ಅದೇ ಹೆಣ್ಣು
ಮಗಳಿಂದ. ಕೆಟ್ಟು ಹೋಗಿರುವ ನೂರು ಜನರ ನಡುವೆ ಲಕ್ಷ ತಾಯಂದಿರ ವಾತ್ಸಲ್ಯ ನಮಗೆ ಕಾಣದುಳಿದರೆ ಅದು ನಮ್ಮ ತಾಯಂದಿರ ದೌಭರ್ಾಗ್ಯವಲ್ಲವೆ? 

     ಸಮಾಜದ ಅತಿ ಸಾಧಾರಣ ಕೆಲಸ ನಿರ್ವಹಿಸುವ ಸ್ವಾರ್ಥ ತೊರೆದು ಸಮಾಜಕ್ಕೋಸ್ಕರ ಬದುಕುವದು ಹೆಮ್ಮೆಯ ವಿಚಾರ ಆಗುವವರೆಗೆ ಇದು  ಸರ್ವಮಾನ್ಯವಾಗಲಾರದು. ಪಂಡಿತನಲ್ಲದ ಒಬ್ಬ ಕೂಲಿ ಸಹ ಸಮಾಜಕ್ಕೆ ಉತ್ತಮವಾದದ್ದನ್ನು ಕೊಡಬಲ್ಲ. ಅಂತವರೆಲ್ಲರ ಗೌರವಿಸುವ ದೊಡ್ಡತನ ನಮಗೆ ಬರಲಿ. ಸನ್ಮಾನ ಮಾಡಬೇಕೆಂದು ಅವರೂ ಬಯಸುವುದಿಲ್ಲ. ಅವನ ಕೆಲಸ ಮಾನವೀಯ ಗೌರವಕ್ಕೆ ಅರ್ಹ ಎಂಬ ಪ್ರಜ್ಞೆ ಸಾಕು. ಕೆಲವರನ್ನು ಕೇಳಿ ನೋಡಿ. ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವವರೂ  ಜ್ಞಾನಿಗಳು ಎಂದು ಹೆಸರಿಸಿಕೊಂಡವರೂ ಕೂಡ  ಇನ್ಯಾರೋ ಒಬ್ಬ ಜನಸಾಮಾನ್ಯ ಅಥವಾ ಪಂಡಿತನ ಬಗ್ಗೆ ಅವನ ಸಾಮಾಜಿಕ ಸ್ವಾಸ್ಥ್ಯದ ಪ್ರಯತ್ನದ ಬಗ್ಗೆ.
ಮಾತನಾಡುವುದು ತೀರಾ ಕೇವಲವಾಗಿ. ವಿಶೇಷವೆನ್ನಿಸುವುದು ಇಲ್ಲಿಯೇ. ಪಂಡಿತರು ಸಮಾಜಕ್ಕೆ ಹೆಚ್ಚೆಂದರೆ ಒಂದಿಷ್ಟು ಪುಸ್ತಕಗಳನ್ನು ಕೊಡಬಹುದು. ಆದರೆ ಪ್ರಯತ್ನಶೀಲರು
ಸಮಾಜದ ಜನಮಾನಸದಲ್ಲಿ ಬೆರೆತು ನಾಲ್ಕೇ ಜನರಿಗಾದರೂ ಒಳ್ಳೆಯ ಬದುಕು ಕಲ್ಪಿಸಲು ನೆರವಾಗುತ್ತಾರೆ. 

 ಕೆಟ್ಟದ್ದು ಅತಿಯಾದ ಕಾಲದಲ್ಲಿ ಒಳ್ಳೆಯದ ಹುಡುಕಬೇಕಾಗಿದೆ. ಇದು ಕಾಲದ ಅನಿವಾರ್ಯತೆ.. 

Saturday, August 1, 2015

ಬದುಕು ನಡೆಸಿದತ್ತ ಪಯಣ...




ಚಿತ್ರಕೃಪೆ: ಅಂತರ್ಜಾಲ.


        ಮಾನಸ ಸರೋವರದಲ್ಲಿ  ವೈಚಾರಿಕ ಮಾತಿಗಿಂತ ಮನಸಿನ ಮಾತಿಗೆ ಹೆಚ್ಚು ಒಲವು ಅಲ್ಲವಾ ಮನಸೇ?  ಮನಸೆಂಬ ಒಲವಿನ ಮೂಟೆಯೆದುರು ಮತ್ತೊಮ್ಮೆ ಹರವಿಕೊಳ್ಳುವ ಭಾವಸಾಗರದಲ್ಲಿ ನೀನು ಬಂದು ಕೂರುವುದೇನೂ ಬೇಡಬಿಡು. ಒಮ್ಮೊಮ್ಮೆಯಾದರೂ ಒಂಟಿಯಾಗಿ ಕೂತು ಮಾತನಾಡಿಕೊಳ್ಳಬೇಕೆನ್ನಿಸಿದೆ. ಹೀಗೆ...

    ಯಾವ ಚೆಲುವಿನೊಳಗೂ ನಮ್ಮೊಳಗಿನ ಸಮ್ಮೋಹನಗೊಳಿಸುವ ನಶೆಯಿರಲಿಲ್ಲ. ಹೂವುಗಳೆದೆಯಲ್ಲಿ ಗಂಧ ಹರಡಿಕೊಂಡಂತೆ  ಭಾವದ ಹೂ ಅರಳಿಕೊಂಡಿತಿಲ್ಲಿ. ಮನಸಿನಂಗಳದಲ್ಲಿ.. ನಿನ್ನ ಒಲಿಸುವ ನನ್ನ ರಮಿಸುವ ಮಾತಿಗೆ ಎಂದಿಗೂ ಎಡೆಯಿರಲಿಲ್ಲ.  ಮುಗಿಲಂತೆ ಚಾಚಿಕೊಂಡಿತು ಒರವಶರಧಿಯಲ್ಲಿ... ಮಾತು ಮಾತಿಗೆ ಮುನಿಸು ನಿತ್ಯ ನಿರೀಕ್ಷೆಯ ಕನಸು ಯಾವುದೂ ಇರಲಿಲ್ಲ.  ನಾದವಾಯಿತು ನಮ್ಮೊಳಗಿನ ಚಿಂತನೆಗಳೆಲ್ಲ! ಎಲ್ಲ ಮೀರಿರುವಾಗ ಎಲ್ಲಿ  ಅಡಗಲಿ ಹೇಳು? ಮಾಧವನೆಡೆಗೆ ಮೀರೆಯ ಒಲವಿರುವಂತೆ ಕೊಳಲಿನ ಕರೆಗೆ ಗಂಗೆ ಗೌರಿ ಬರುವಂತೆ ಈ ಮನಸು ನಿನ್ನದಾಯಿತಲ್ಲ! 

 ನೀನೊಂದು ಕ್ಷಣ ಮನಸಿಂದ ಮರೆಯಾದರೆ ಸಾಕು ಯಾಕೋ  ಮಾತು ಮೌನ ಪ್ರೀತಿ ಕಾವ್ಯ ಬರಹ, ಬದುಕು ಎಲ್ಲವೂ ಮುಗಿಸಿಬಿಡಬೇಕೆಂದು ಹಟ ಹಿಡಿದಿಯುತ್ತಿದೆ ಮನಸು.. ಅದೇ ಮನಸು ಬೆಳದಿಂಗಳಲ್ಲಿ ಈಗ ತಾನೇ ಹೊಯ್ತಾ ಇರೋ ಮಳೆ ನೀರಲ್ಲಿ ರಮಿಸಿ ಆನಂದಿಸುತ್ತದೆ. ಕವಿತೆ ಬರೆಯುತ್ತದೆ. ಸುಡುವ ವಿರಹದ ಚಂದ್ರನಿಗಾಗಿ ಅಳಲಿಕೆಯಿದೆ ಈ ಬುವಿಯ ಕಳವಳದಲ್ಲಿ. ಕತ್ತಲಿಗೆ ಬೆಳಕಿಗೆ ಸಾಂಗತ್ಯಕ್ಕೆ ತೊರೆಯಿದೆ ಇಲ್ಲಿ... ಹೌದು  ಪ್ರೀತಿಸದೇ ಉಳಿಯಲಾರೆ ನಾನು. ನೀ ಕೂಡ. ಆದರೆ ವ್ಯಕ್ತವಾಗುವಿಕೆಯನ್ನು ಕಟ್ಟಿ ಹಾಕಬೇಕೀಗ. ನಾನೂ ಹಾಗೆ ಮಾಡಿದರೆ  ನಮ್ಮ ನಡುವೆ ಸಂವಹನ ಯಾವತ್ತೋ ನಿಂತುಹೋಗುತ್ತಿತ್ತು. ಮಾನಸಿಕ ಸಂವಹನದ ಜೊತೆ ಭೌತಿಕ ಸಂವಹನವೂ ನಿಂತು ಹೋಗುತ್ತಿತ್ತಲ್ಲವಾ! ನನ್ನ ನಿನ್ನ ಹಾದಿ ಎಷ್ಟೇ ಬೇರೆಯಾಗಲೀ ಅದು  ಸಂಧಿಸಲೇ ಬೇಕು ನಾವು ಮತ್ತೆಮತ್ತೆ. ಕೃಷ್ಣಾ ಉರಿದು ಹೋಗಲಿ ಎಲ್ಲ ಕಾಯ ಎಂದುಕೊಂಡ ಭಾವಕ್ಕೆ ಬದುಕನ್ನೇ ದೀಕ್ಷೆಯಜ್ಞವಾಗಿಸಿಬಿಟ್ಟಿದ್ದೀ. ಸಾಕು ಅಂದರೆ ಬಿಡುವುದಲ್ಲ. ಬೇಕು ಅಂದರೆ ಸಿಗುವುದಲ್ಲ! ಎಂಥಾ ಜಾಗದಲ್ಲಿ ನನ್ನ ನಿಲ್ಲಿಸಿದೆ ನೀ! ನಗಲಾಗದ ಅಳಲಾಗದ ಮರುಗಲಾಗದ, ಖುಶಿಪಡಲಾಗದ ಬೇರೆ ಎಲ್ಲೋ ಏನೋ ಖುಶಿ ಕಂಡುಕೊಳ್ಳಲಾಗದ ನನ್ನ ಸ್ಥಿತಿ ನಿನಗೇ ಪ್ರೀತಿ. ಬಯಸಿದರೆ ಏನೆಲ್ಲವನ್ನೂ ಬೇಕಾದಲ್ಲಿ ಪಡೆಯಬಲ್ಲೆ ನಾನು. ಉಹುಂ. ಬಯಕೆಗಳೇ ಇಲ್ಲ. ಭಾವಗಳೂ ಇಲ್ಲ. ಎಷ್ಟೆಲ್ಲ ಬರಿದಾಗಿಸಿಕೊಂಡೆ ನನ್ನ ಒಳಗನ್ನು... ಬರಿದಾಗಿಸಿಕೊಂಡಷ್ಟೂ ನೀನೇ ತುಂಬಿಕೊಂಡುಬಿಟ್ಟೆ. ನನಗೆ ಗೊತ್ತಿಲ್ಲದೇ. ನನ್ನ ಅರಿವಿಲ್ಲದೇ.. ನನ್ನ ಬದುಕಿನ ಈ ಅಂಕವನ್ನು ಹಂಚಿಕೊಳ್ಳುವ ಕವಿತೆ ಕೂಡ ಬರೆಯಲಾರೆ ಇವತ್ತಿಗೆ ನಾನು. ಅದಕ್ಕೆಂದೇ ಇವನ್ನೆಲ್ಲ ಹೀಗೆ ಬರೆದು ಮನಸು ಹಗುರಾಗಿಸಿಕೊಳ್ಳುತ್ತಿದ್ದೇನೆ. ನನ್ನ ಕಣ್ಣಲ್ಲಿ ಹನಿ ನೀರಿಲ್ಲ, ಕನಸಿಲ್ಲ, ಖುಶಿಯಿಲ್ಲ. ಕತೆಯಿಲ್ಲ, ಕವಿತೆಯಿಲ್ಲ, ಆದರೆ ಎಲ್ಲವನ್ನೂ ಮರುಸೃಷ್ಟಿಸಿಕೊಳ್ಳುತ್ತೇನೆ. ಮತ್ತೆ ಜೀವನ್ಮುಖಿಯಾಗುತ್ತೇನೆ. ನನ್ನ ಭಾವಗಳ ನಾನು ಜೀವಂತ ಪೋಷಿಸಿಕೊಳ್ಳ್ಳುತ್ತೇನೆ. ಮತ್ತೆ ನಾನು ಜೀವಂತಿಕೆಯ ಉಸಿರು ಹಿಡಿಯುತ್ತೇನೆ. ತೊರೆಯುವಿಯಾದರೆ ಎಲ್ಲಿಯವರೆಗೆ?  ಈ ಭೂಮಿ ಆಕಾಶಗಳು ಮುಗಿಯುವವರೆಗೆ...  ನಿರೀಕ್ಷೆಯಾದರೂ ಏನಿತ್ತು ಇಲ್ಲಿ? ಪ್ರೀತಿ ತಾನೇ? ನನ್ನ ಪ್ರೀತಿಸಲು ನೀನ್ಯಾಕೆ ಬೇಕು ನನಗೆ? ನಾನೇ ನೀನೆಂಬ ಮನಸಾಗಿ ನನ್ನೊಳಗೆ ನೀನಿರುವವರೆಗೆ ಭೌತಿಕವಾದ ಯಾವ ಅಗತ್ಯಗಳೂ ನನ್ನ ಕಾಡದಿರುವವರೆಗೆ ನೀನೆಂಬ ನೀನು ನಾನೇ ಆಗಿ ನನ್ನ ಬದುಕೆಲ್ಲ ನಿನ್ನ ಸುಗಂಧವೇ ಪಸರಿಸಿ ಪ್ರೀತಿಸಿಕೊಳ್ಳುತ್ತಲೇ ಬದುಕುತ್ತೇನೆ. ಜೀವನ್ಮುಖಿಯಾಗಿ..ಇದು ನನ್ನ ಹಟ ಮಾತ್ರವಲ್ಲ. ಭಾವಗಳ ಮರುಸೃಷ್ಟಿಸಿಕೊಳ್ಳುವ ಮನಸ್ಸಿನ ನಿರಂತರ ಪ್ರಯತ್ನವೂ ಹೌದು. ಒಳಗನ್ನು ತುಂಬಿಕೊಂಡ ಅಗತ್ಯಗಳು ಮೀರಿದ ಒಲವಿದು.. ಇಷ್ಟಕ್ಕೂ ನೀ ನನಗೆ ಒಲವಿನ ಒರತೆ..ನಿನ್ನೊಳಗೆ ಎಲ್ಲವನ್ನೂ ನಾನೇ ಪಡೆದುಕೊಳ್ಳುವ ನಿರಂತರ ಜ್ಯೋತಿ..  ಪ್ರೀತಿ, ಭಕ್ತಿ, ಆನಂದ, ಪ್ರಜ್ಞೆ, ಮನಸು ಎಲ್ಲದರ ನೆಲೆ ನೀನು..ನಿನ್ನ ಹೊರತು ನಾನು ಏನು? ಇದಕ್ಕಿಂತ ಹೆಚ್ಚಿನ ತೃಪ್ತಿ ಬದುಕಿಗೆ ಏನು ಬೇಕು ಹೇಳು. ಏನು ಬೇಕು ನನಗೆ? ಇದೇ   ನನ್ನದೇ ಮನಸಿನ ಜೊತೆ  ಈ ಪಯಣ ನಿರಂತರ. ಇದು ನನ್ನ ಭ್ರಮೆಯಲೋಕವೆನ್ನಿಸದರೆ ಹೌದು. ಬದುಕಿಸುವುದು ಭ್ರಮೆಯಾದರೇನು ಕನಸಾದರೇನು? ನೀನೇ ಹಚ್ಚಿಟ್ಟ ಹಣತೆಯಿದೆ. ನನ್ನೊಲವಿನ ಕೈದೀಪವಿದೆ. ಸಾಕು ಬಿಡು. ಇನ್ನೆಂತ ಬರೆಯಲೀ... ಬದುಕ ಪ್ರೀತಿಸಲು ಹಟವೊಂದಿರಲೀ...
ಮೌನಕ್ಕೆ ಧ್ಯಾನಕ್ಕೆ ಆತ್ಮಶಕ್ತಿ ಕೊಡಲಿ.. ಕೃಷ್ಣ ನನ್ನ ಹೋರಾಟಕ್ಕೆ ಬಲವನ್ನೀಯಲಿ.. ಬದುಕು ತೋರಿದತ್ತ..