Friday, July 31, 2020

ಕೊರೊನಾ ಕಾಲದ ಕತೆ

ಭಯಪಡುವಂತದ್ದೇನಿದೆ ಅಂತ ನೂರು ಭಾರಿ ಅಂದುಕೊಳ್ಳುತ್ತೇನೆ. ಸಾವಿನ ಬಾಗಿಲು ಮನೆಯೆದುರೆ ನಿಂತಿದೆ. ಅಲ್ಲೆಲ್ಲೋ ಯಾವುದೋ ದೇಶದಲ್ಲಿ   ಅಂದುಕೊಂಡದ್ದು ರಾಜಧಾನಿಯಲ್ಲಿ ಅಂದುಕೊಂಡಿದ್ದು  ಯಾವುದೋ ಊರಲ್ಲಿ ಅಲ್ಲಿ ಇಲ್ಲಿ ಅಂದುಕೊಂಡದ್ದೆಲ್ಲ ಹೋಗಿ ಇದೀಗ ಮನೆಯಲ್ಲೇ ಂದು ನಿಂತಿದೆ ಅನ್ನುವಾಗ ಗಾಭರಿ ಅಂತಲ್ಲದಿದ್ದರೂ ಒಂದಿಷ್ಟು ಭಂಡ ಧೈರ್ಯ ಬಂದಿರುವುದಂತೂ ಸುಳ್ಳಲ್ಲ. ಮೊದಲಿನ ಕೊರೋನಾ ಭಯ ಈಗ ಕಾಡ್ತಿಲ್ಲ. ಎಷ್ಟು ಜನ ಆರಾಮಾಗಿ ಬಂದಿಲ್ಲ  ಎಷ್ಟು ಜನ  ಕ್ವಾರಂಟೈನ್ ಲಿದ್ರೂ ಕೊರೋನಾ ಬರದೇ ಹಾಗೇ ಸುರಳೀತ ಇದ್ದಾರಲ್ಲ ಅಂತೆಲ್ಲ ಒಂದಷ್ಟು  ಒಳ್ಳೆಯ ವಿಚಾರಗಳನ್ನೇ ತಲೆಯಲ್ಲಿ ತುಂಬಿಕೊಂಡರೂ 100 ರಲ್ಲಿ ಹತ್ತು ಪರ್ಸೆಂಟ್ ಆದರೂ ಬಂದುಬಿಡಬಹುದಾದ ಎಲ್ಲ ಭಯ ಒಳಗೊಳಗೆ ಕಾಡುತ್ತಿರುವುದು ಸುಳ್ಳಲ್ಲ. ಹೌದು ಬಹಳಷ್ಟು ಓದಾಯಿತು, ಕೊರೋನ ಕಾಲದ ಸತ್ಯಗಳು ಅಂತೆಲ್ಲ ಪೇಜುಗಟ್ಟಲೆ ಓದಿದ್ದು ಕೇಳಿದ್ದು ಆಯಿತು. ಬದುಕಿನ ಈದಡಲ್ಲಿ ಸಾವಿನ ಕುರಿತಾದ ಅಂತಹ ಭಯವೇನೂ ಇಲ್ಲ ಅಂದುಕೊಳ್ಳಬಹುದು. ಇತ್ತೀಚೆಗೆ ಸಾವು ಮೊದಲಿನಷ್ಟು ನನ್ನನ್ನು ಅಧೀರಳನ್ನಗಿಸುವುದಿಲ್ಲ. ಬಹುಶಃ ಬದುಕಿಗೆ ಬೀಳುವ ಪೆಟ್ಟುಗಳೇ ಮನುಷ್ಯನ ಇಷ್ಟು  ನಿರುದ್ವಗ್ನವಾಗಿ ನಿಲ್ಲಿಸಿರಬಹುದು. ಯಾವ ಪಾಠಗಳೂ ಕಲಿಸದ ಜೀವನ ಸತ್ಯಗಳನ್ನ ಬದುಕು ಕಲಿಸುತ್ತದೆ. ಇದು ವೇದಾಂತವೋ ಇನ್ನೇನೋ ಅಲ್ಲ. ಒಂದು ನಿರ್ವಾತದಂತ ಶೂನ್ಯದಲ್ಲಿ ಕರ್ತವ್ಯಪ್ರಜ್ಞೆಯೊಂದಿಗೆ ನಿಲ್ಲಬಹುದಾದ ಗಟ್ಟಿತನ ಅಂತಲೇ ನಾನು ಅಂದುಕೊಳ್ಳುತ್ತೇನೆ.

 
 ಹೀಗೇ ನಾಳೆಯೇ ನನ್ನ ಸಾವಿನ ಬಾಗಿಲಿನಲ್ಲಿ ನಿಲ್ಲಿಸಿದರೆ ನನ್ನ ಅಪೇಕ್ಷೆಗಳೇನು ಅಂತ ಒಮ್ಮೆ ಕೇಳಿಕೊಂಡೆ. ತಕ್ಷಣ ಮುಗಿಸಬಹುದಾದ ಅಥವಾ ಮುಗಿಸಲೇಬೇಕಾದ ಯಾವ
ಅನಿವಾರ್ಯತೆ ಈ ಬದುಕಿನೆಡೆಗೆ ನನಗಿದೆ ಅಂದರೆ ಇದ್ದರೆ ಮಾಡಬೇಕಾದ ಸಾವಿರ ಕೆಲಸಗಳಿವೆ. ಹಾಗಂತ ಇಲ್ಲದಿದರೆ ಅವ್ಯಾವುದೂ ನಡೆಯುವುದಿಲ್ಲ ಅಂತೇನಿಲ್ಲ. ಈ ವಿಶಾಲ ಜಗತ್ತಿಗೆ ನಾನೆಂಬುದು ಏನೇನು ಅನಿವಾರ್ಯವಲ್ಲ.ಹಾಗಂತ ನಾನಿರುವುದಾದರೆ ಈ ವಿಶಾಲ ವಿಶ್ವದ ಎಲ್ಲ ಅನಿವಾರ್ಯತೆಗಳೂ ನನಗಿವೆ. ಪ್ರತಿಯೊಬ್ಬರಿಗೂ ಇನ್ನೊಬ್ಬರಿಂದ ನಿರೀಕ್ಷೆಗಳಿವೆ. ಸುತ್ತಲಿನವರ ಯಾರ ನಿರೀಕ್ಷೆಯನ್ನು ನಾನು ಎಷ್ಟು ಪೂರೈಸಬಲ್ಲೆ ಎಂದು ಯೋಚಿಸಿದರೆ ಬಹುಶಃ ಅದರ  ಲೆಕ್ಕ ಪ್ರತಿಶತಃ ಹತ್ತಕ್ಕೂ ಕಡಿಮೆ ಇರಬಹುದು. ಹಾಗೇ ನನ್ನ ನಿರೀಕ್ಷೆಗಳಿಗೆ ಇನ್ನೊಬ್ಬರು ಸಿಗಬಹುದಾದ ಪ್ರಮಾಣ ಕೂಡ ಅಷ್ಟೇ. ಆದರೆ ನಾವು ಇದನ್ನು ಅರ್ಥಮಾಡಿಕೊಳ್ಳದೇ ಸದಾ ನಮ್ಮ ನಿರೀಕ್ಷೆಯನ್ನು ಪ್ರತಿಶತಃ ತೊಂಬತ್ತರ ಪ್ರಮಾಣದಲ್ಲಿ ನಿರೀಕ್ಷಿಸುತ್ತೇವೆ. ಮತ್ತು ನಾವು ಸದಾ ಪ್ರತಿಶತಃ 10 ಕ್ಕೂ ಕಡಿಮೆ ಪ್ರಮಾಣದಲ್ಲಿ ಬೇರೆಯವರಿಗೆ ಒದಗುತ್ತೇವೆ.

    ಸಾವಿನೆದುರಿನ ಸತ್ಯಗಳು ಬಹಳ. ನಮ್ಮ ಸಾವಿನ ಭಯಕ್ಕಿಂತ ನಮ್ಮವರ ಕಷ್ಟದ ಭಯ ನಮ್ಮನ್ನು ಕಾಡುತ್ತದೆ. ಬಹುಶಃ ಬೇರೆಲ್ಲ ರೋಗಕ್ಕಿಂತ ಜಾಸ್ತಿ ಕೊರೋನಾ ಇದನ್ನು ಹೇಳುತ್ತಿದೆ. ನಮ್ಮವರ ಖಾಳಜಿಯೇ ಮುಖ್ಯ ಅನ್ನುವ ಮನಸ್ಥಿತಿ ಸಾಮಾನ್ಯರನ್ನು ಎಚ್ಚರಿಸುತ್ತಿದೆ. ಆದರೆ ಬಹುಶಃ ನಮ್ಮೊಳಗಿನ ಭಯ, ನೋವು, ಕಾಳಜಿ ಇದೆಲ್ಲ ಬಹುಶಃ ನಮ್ಮವರಿಗೂ ಅರ್ಥ ಮಾಡಿಸಲು ಸೋಲುತ್ತೇವೆ. ನಮ್ಮಿಂದ ನಿಮ್ಮ ಜೀವ ರಿಸ್ಕಿನಲ್ಲಿಡುತ್ತಿದ್ದೇವೆ ಅನ್ನುವ ಗಿಲ್ಟ್ ಎಷ್ಟೊಂದು ಗಾಢವಾಗಿ ಕೊರೆಯುತ್ತಿದ್ದರೂ ಅದನ್ನು ತೋರಿಸಲಾಗುವುದಿಲ್ಲ. ಕೊರೊನಾ ಕಾಲದಲ್ಲಿ ಇದರೊಂದಿಗೆ ಕೆಲಸ ಮಾಡುತ್ತಿರುವವರ ಮನಸ್ಥಿತಿ ಹೇಗಿಬಹುದು  ಅಂತ ಸಾವಿರ ಸಲ ಯೋಚನೆ ಮಾಡುತ್ತೇನೆ. ಸುರಕ್ಷತೆಯ ಸಾವಿರ ಕ್ರಮಗಳಿರಬಹುದು. ಆದರೂ ರಿಸ್ಕ್ ಇದ್ದೇ ಇದೆ. ಅಂಕಿ ಅಂಶಗಳ ನೋಡುತ್ತಿದ್ದರೆ ಈ ರಿಸ್ಕ್ ಎಷ್ಟು ದೊಡ್ಡದು ಅಂತ ಅನ್ನಿಸುತ್ತಲೇ ಇರುತ್ತದೆ.

 ಶ್ರೀಮಂತರಿಗೆ ಒಳ್ಳೆಯ ಟ್ರೀಟ್ಮೆಂಟ್ ಬಡವನಿಗೆ ಅದಿಲ್ಲ ಭಯ, ಮಧ್ಯಮ ವರ್ಗದವರಿಗೆ ಬಿಲ್ಲುಗಳ ಯೋಚನೆ ಆದರೆ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಸಾವಿನ ಕರಿ ನೆರಳು ಕಾಣದಿರದು. ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಯಾವುದೋ ಒಂದು ಕ್ಷಣದಲ್ಲಿ ಎದುರಾಗಿ ನಿಂತೇಬಿಡುತ್ತೇವೆ. ನನಗಲ್ಲ ಅನ್ನುವ ರೋಗದ ಎದುರೇ ಅಚಾನಕ್ಕ ನಿಂತಾಗ ದೇವರಿದ್ದಾನೆ ಅನ್ನುವ ಧೈರ್ಯವೊಂದೇ. ಎಲ್ಲವನ್ನೂ ಮೀರಿದ ಕೈಯೊಂದಿದೆ. ಯಾವತ್ತು ಅದು ನಮ್ಮ ಬದುಕಿನ ಕೊನೆಗೆ ನೆಪ ಬರೆದಿರತ್ತೆ ಯಾರಿಗೆ ಗೊತ್ತು?


   ಈ ಕ್ಷಣ ಹೇಳಬೇಕಾದ ಮಾತುಗಳಿವೆ ಅಂತ ಬಂದು ಕೂತರೂ ಏನೂ ಇಲ್ಲದ ಮೌನವೊಂದೇ ನನ್ನಲ್ಲಿದೆ ಅಂದರೆ ಅದು ಸುಳ್ಳಲ್ಲ. ನಿನ್ನ ಒತ್ತಾಯದ ಮೇರೆಗೆ ಬರೆಯಲು ಕುಳಿತರೂ ಮನಸಿನ ಮಾತುಗಳನ್ನಷ್ಟೇ ಇಲ್ಲಿ ನೇರವಾಗಿ ಅಕ್ಷರಕ್ಕಿಳಿಸಬೇಕಾಗಿದೆ. ಹೌದು ಇಷ್ಟೊಂದು ಅಗಾಧವಾದ ಸ್ಥಿರತೆ ಗೆ ಕಾರಣವಾದರೂ ಏನು ಅಂತ ನೀನು ಕೇಳುತ್ತಿ. ನನಗೆ ಗೊತ್ತು. ಹೇಳಬೇಕಾದ ಜವಾಬ್ಧಾರಿ ನನ್ನದು ಹೇಳುತ್ತೇನೆ ಕೇಳು.

 ಬದುಕು ಯಾವತ್ತೂ ನನಗೆ ಅನ್ನಿಸೋದು ನನ್ನನ್ನ ನಿರಪೇಕ್ಷದೆಡೆಗೆ ನಡೆಸುವ ಗುರು ಅನ್ನೋದು. ನಾನು ಮೊದಲೂ ಬಹುಶಃ ಹಾಗೇ ಇದ್ದೆ. ನನಗೆ ನನ್ನದೆಂಬ ಅಸ್ತಿತ್ವಕ್ಕೆ ಏನೂ ಇರಲಿಲ್ಲ. ಎಲ್ಲ ಅವರಿವರ ಖುಶಿ ಅವರ ಅಗತ್ಯ ಅವರ ಸಂಭ್ರಮ ಅವರ ನೋವುಗಳೇ ನನ್ನ ಬದುಕಾಗಿತ್ತು ಅಥವಾ ನನ್ನ ಒಳಗೊಂಡಿತ್ತು. ಬದುಕು ನೀನು ಹೀಗಿದ್ದರೆ ಆಗದು ಅಂತ ನನ್ನ ಮಗ್ಗಲು ಹೊರಳಿಸಿ ನನ್ನದೇ ಕನಸುಗಳ ಕಟ್ಟಿಕೊಟ್ಟಿತು. ನನ್ನದೇ ದಾರಿಯ ಹುಟ್ಟು ಹಾಕಿತು. ನನ್ನದೇ ಅಡಿಪಾಯ ನನ್ನದೇ ಅರಮನೆ ಎಲ್ಲ ಆಯಿತು. ಅದರಲ್ಲೇ ನಡೆದು ನಡೆದು ಇದು ನನ್ನದು ಎಂಬ ಮೋಹ ಶುರುವಾಯಿತು. ನನ್ನವರು ನನ್ನದು  ನಾನು ಎಂಬುದನ್ನು ಹೇಳೀಕೊಟ್ಟ ಬದುಕೇ ಇಲ್ಯಾವುದೂ ನಿನ್ನದಲ್ಲ ನೀನು ಎಂದಿಗೂ
ಶೂನ್ಯವೇ ಎನ್ನುವುದ ಮತ್ತೆ ಹೇಳತೊಡಗಿತು. ಬಹುಶಃ ಈಗ ನನಗೆ ಅರ್ಥವಾಗುವ ಮಟ್ಟಿಗೆ ಎಲ್ಲವೂ ಬದಲಾಗಿದ್ದರೂ ನನಗೆ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ನಾನೆಷ್ಟು ಮುಳುಗಿ ಹೋಗಿದ್ದೆ ಈ ನನ್ನದೆಂಬ ಅಹಂಕಾರದ ನಶೆಯಲ್ಲಿ ಮೋಹದಲ್ಲಿ! ನನ್ನ ನಶೆಯ ಇಳಿಸಲು ಬದುಕು ಬಲವಾದ ಪೆಟ್ಟು ಕೊಡಲೇಬೇಕಿತ್ತು. ಬದುಕು ಕೂಡ ಅಮ್ಮನಂತೆ. ಅವಳ ಛಡಿಯೇಟಿಗೆ ಹತ್ತಿದ್ದ ನಶೆಯೆಲ್ಲ ಇಳಿಯಿತು ನೋಡು. ಈ ಪ್ರಪಂಚದಲ್ಲಿ ಕಾಯಕವೊಂದೇ ನನ್ನ ಕರ್ಮ. ಉಳಿದದ್ದೆಲ್ಲ ಅವನದೇ ಮರ್ಮ. ಅರ್ಥವಾಗುವ ಹೊತ್ತಲ್ಲಿ ಬಹಳ ತಡವಾಗಿತ್ತು. ಹೌದು ಬದುಕಿನ ಪೆಟ್ಟುಗಳು ಹೇಗಿರುತ್ತವೆ ಅಂದರೆ ಯಾರು ಕಲಿಯದಿದ್ದರೂ ಯಾವುದನ್ನು ಕಲಿಯದಿದ್ದರೂ ಕಲಿಸುತ್ತದೆ ಅದು. ಸುಪ್ಪತ್ತಿಗೆಯಲ್ಲಿ ಹುಟ್ಟಿದವನಿಗೂ ಟಾಯ್ಲೆಟ್ ತೊಳೆಯುವುದು ಕಲಿಸುತ್ತದೆ! ಭಿಕಾರಿ ಬದುಕಲ್ಲೂ ಆತ್ಮಾಭಿಮಾನ ಕಲಿಸುತ್ತದೆ, ಸೋತವನಿಗೆ ಗೆಲ್ಲುವುದ ಕಲಿಸುತ್ತದೆ, ಗೆದ್ದವನಿಗೆ ಸೋಲುವುದ ಕಲಿಸುತ್ತದೆ.

 ನಾನೆಂಬ ಅಹಂಕಾರ ಇಳಿಸುತ್ತದೆ, ನಾವೆಂಬ ಮಮಕಾರ ಬೆಳೆಸುತ್ತದೆ. ಬದುಕನ್ನು ಕಟ್ಟುವುದೂ ಗೊತ್ತು, ಬದುಕನ್ನು ಕೆಡುವುದೂ ಗೊತ್ತು, ಮಕ್ಕಳಲ್ಲಿ ಮುಗ್ಧತೆ ಹಾಳಾಗದಿಲಿ ಅಂತ ನಾವು ಮುಚ್ಚಟೆ ಮಾಡಿದರೆ ನಾಳೆ ಸೂರ್ಯನ ಬೆಳಕೂ ನೋಡಲು ಕಷ್ಟವಾಗಬಹುದು. ಹಾಗೇ ಬದುಕು ಕಲಿಸುವ ಪಾಠಗಳಿಗೆ ತೆರೆದುಕೊಳ್ಳದಿದ್ರೆ ಅದರ ಫಲ ಘೋರವಾಗಬಹುದು. ಸಂತೋಷವನ್ನು ಹುಡುಕಿ ಹೊರಡುವವದಕ್ಕಿಂತ ಸಿಕ್ಕ ಎಲ್ಲದರಲ್ಲೂ ಸಂತೋಷ ಕಾಣುವವನ ಮನಸು ಹೆಚ್ಚು ಆರೋಗ್ಯವಾಗಿರಬಲ್ಲುದು. ಕನಸುಗಳ ಸಾವಿರ ಕಾಣುವುದಕ್ಕಿಂತ ಒಂದೆರಡು ವಾಸ್ತವದ ಕೆಲಸ  ಜಾಸ್ತಿ ಖುಶಿ ಕೊಡಬಹುದು. ಹಾಗಂತ ಕನಸು ಗುರಿ ಇರಬಾರದೆಂದೇನೂ ಅಲ್ಲ. ಕ್ರಿಯೆಗೆ ಇಳಿಯದ ಕನಸುಗಳಿಗೂ ರಾತ್ರಿ ಬೀಳೋ ಕನಸುಗಳಿಗೂ ಅಂತ ವ್ಯತ್ಯಾಸಗಳೇನೂ ಇಲ್ಲ.  ದೊಡ್ಡ ದೊಡ್ಡದರ ಬೆನ್ನು ಹತ್ತಿದವರೆಲ್ಲ ಖುಶೀಯಾಗಿಯೇ ಇದ್ದಾರೆಂದಲ್ಲ. ಒಳಗಿನ ಅಗತ್ಯಗಳ ಅರಿತುಕೊಂಡವರು ಹೆಚ್ಚು ಖೂಶಿಯಾಗಿಯೂ ಹೆಚ್ಚು ಸ್ಥಿತಪ್ರಜ್ಞರೂ ಆಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಕನಸು ಮತ್ತು ವಾಸ್ತವದ ನಡುವಿನ ಬಹುದೊಡ್ಡ ಅಂತರವನ್ನು ಕಲಿಸುವುದೇ ಬದುಕು. ಕರ್ಮ ಸಿದ್ಧಾಂತದ ಸುಖ ಕಲಿಸುವುದೂ ಬದುಕು.


 ನಮ್ಮವರೆಂದುಕೊಳ್ಳುವವರ ಸಂತೋಷದಲ್ಲಿ ನಮ್ಮ ಎಲ್ಲ ಸಂತೋಷಗಳು ತನ್ನಂತಾನೇ ಅಡಕವಾಗಿಬಿಡುತ್ತವೆ. ಹಾಗಂತ ಸಂತೋಷದ ಬೆನ್ನು ಬಿದ್ದು ಪ್ರಜ್ಞೆಯ ಹಾಗೂ ಮೌಲ್ಯದ ಮಾರ್ಗ ತೋರದಿದ್ದರೆ ತಪ್ಪಾಗುತ್ತದೆ ಯಲ್ಲವೆ? ನಮ್ಮ ನಮ್ಮ ಕೆಲಸ ನಾವು ಮಾಡಲೇಬೇಕು. ಅರಿತುಕೊಳ್ಳುವ ಸಾಮಥ್ರ್ಯ ಇದ್ದವರು ಅರಿತುಕೊಳ್ಳುತ್ತಾರೆ. ಅರಿಯದಿದ್ದವರು ನಮ್ಮನ್ನೂ ದೂರಮಾಡುತ್ತಾರೆ. ಇದು ಕೂಡ ಪ್ರಕೃತಿಯದೇ ನಿಯಮ.  ಈ ಬದುಕಿಗೆ ಯಾರು ಏನು ಮಾಡಬಹುದು ಮಾಡಬೇಕು ಎಂಬುದನ್ನು ಅವನೇ ನಿರ್ಣಯಿಸುತ್ತಾನೆ ಅಂದಮೇಲೆ
ನಮ್ಮದಲ್ಲದ ಕಡೆ ಮೂಗು ತೂರಬಾರದು ಎಂಬುದು ಕೂಡ ಅರ್ಥಮಾಡಿಕೊಂಡು ಸುಮ್ಮನಿರಬೇಕು. ವಿವೇಕ ಮತ್ತು ಪ್ರಜ್ಞೆಯ ಮೂಲದಲ್ಲಿ ಹುಟ್ಟಿಕೊಳ್ಳುವ ಸಂತೋಷ ನಮ್ಮದಿರಬೇಕೆ ವಿನಃ ಮೋಹದ ಮಮಕಾರದ ಸಂಭ್ರಮಗಳು ಬಹಳ ಕಾಲ ಬಾಳಲಾರದು.

ಈ ಸಾವೆಂಬುದು ಎಷ್ಟೆಲ್ಲ ಎಚ್ಚರಿಕೆ ನೀಡುತ್ತದೆ. ನನ್ನ ಸಾವಿನ ಎದುರು ನಾನಿಂತರೆ ನನಗದು ಗಿಲ್ಟ್ ಅಲ್ಲ, ಭಯ ಅಲ್ಲ, ಪಾಪವಲ್ಲ.  ಅದೇ ನಿನ್ನನೋ ಇನ್ಯಾರನ್ನೋ ನನ್ನ ಜೊತೆ ನಿಲ್ಲಿಸಿಕೊಂಡರೆ ಅದು ಘೋರ ಪಾಪ, ಅದು ನನ್ನ ಪಾಲಿನ ಶಾಪ ಕೂಡ.  ಎಂತದೇ ಸಂದರ್ಭದಲ್ಲೂ ಈ ಗಿಲ್ಟ್ ನನ್ನೊಳಗೆ ಕಾಡದಂತೆ ನಾನು ನಡೆದುಕೊಳ್ಳುವುದೇ ನನಗೆ ವಿಹಿತ. ಇದನ್ನು ಅರಿವಾಗಿಸುವುದೇ ಈ ಕ್ಷಣ. ಬಹುಶಃ ಬಹಳ ಜನರಿಗೆ ಇದು ಕೂಡ ಅರ್ಥವಾಗವುದೇ ಇಲ್ಲವೇನೋ. ಅಥವಾ ಅಂತಹ ಆತ್ಮಗಳ ಅಹಂಕಾರ ಇದನ್ನೂ ಮೀರಿದ್ದಾಗಿರಬಹುದು. ಬೆಳಕು ಅವರ ಒಳಗೆ ಸುಳಿಯದು.ಕತ್ತಲೆಗೆ ಇನ್ಯಾರನ್ನೋ ಹೊಣೆಯಾಗಿಸಿಕೊಂಡೇ ತಳ್ಳಿಬಿಡುತ್ತಾರೆ ಅನ್ನೋದು ಕೂಡ ಸತ್ಯ.


ಬಹಳ ಸಲ ಯೋಚಿಸುತ್ತೇನೆ   ಯಾರನ್ನೂ ಬಿಡದ ಸಾವು ಅದರೆದುರು ನಿಂತು ಇಷ್ಟೆಲ್ಲ ಅರ್ಥವಾಗುವ ಹೊತ್ತಿಗೆ ಬದುಕೇ ಮುಗಿದಿರುತ್ತದೆಯಲ್ಲ!!?ಏನು ಪ್ರಯೋಜನ ಅರ್ಥವಾಗಿ ಅಂತ.ಗೊತ್ತಿಲ್ಲ. ನನಗಂತೂ ವಿಷಯಾಸಕ್ತಿಗಿಂತ ವಿಷಯ ವಿಚಾರಗಳೇ ಆಸಕ್ತಿಯುತ ಅನ್ನಿಸುತ್ತಿವೆ ಇತ್ತೀಚೆಗೆ. ಯಾರನ್ನಾದರೂ ದ್ವೇಷಿಸುವುದೆಂದರೆ ನನ್ನನ್ನೇ ದ್ವೇಷಿಸಿಕೊಂಡ ಭಾವ ಒಳಗೆ ಅಹಿತ ಅನ್ನಿಸಬಿಡುತ್ತದೆ. ಪರಮಾತ್ಮ ಎಲ್ಲರಿಗೂ ಒಳ್ಳೆಯದನ್ನೇ ಮಾಡಹೊರಟರರೆ ಈ ಕರ್ಮಗಳಿಗೂ ಬೆಲೆಯಿರುತ್ತಿರಲಿಲ್ಲವೇನೋ. ಹಾಗಾಗಿ ಒಂದು ನಿಶಾಂತ ಮನಸ್ತಿತಿಯ
ಕಪ್ಪಿನೊಂದಿಗೆ ಕೂಡ ಬೆಳಕಿನಷ್ಟೇ ಸ್ಥಿರವಾಗಿ ನಿಲ್ಲಬೇಕೆಂಬುದು ಒಳಗಿನಿಂದ ದೃಡವಾಗಿಸುತ್ತಿದೆ. ಸಾವು ನೋವುಗಳಿಗೆ ಸಮಾಧಾನವೇ ಇಲ್ಲ ಅಂದುಕೊಳ್ಳುತ್ತಿದ್ದ ನಾನು ಸಾವಿನೊಂದಿಗೂ ಅನಿವಾರ್ಯವಲ್ಲ, ನೋವಿನೊಂದಿಗೂ ಅನಿವಾರ್ಯವಲ್ಲ ಎಂಬ ಸತ್ಯ ನಿಧಾವಾಗಿ ಒಳಗಿಳಿಸಿಕೊಳ್ಳುತ್ತಿದ್ದೇನೆ. ಬಹುಶಃ ಪ್ರಪಂಚದ ಮೋಹ ಮತ್ತು ಮಾಯೆಗಳಿಂದ ಸಂಪೂರ್ಣ ತೊರೆದುಕೊಳ್ಳಲು ಸಾಧ್ಯವಾಗದಿದ್ದರೂ ಇದು ನನಗೆ ನನ್ನ ಜಾಗದಲ್ಲಿ ನೆಮ್ಮದಿ ಕೊಡಬಹುದು. ಬಹಳಷ್ಟು ಸಲ ನಾವು ನಮ್ಮ ಸುತ್ತಮುತ್ತಲಿರುವವರನ್ನೂ ನಮ್ಮವರನ್ನೂ ಅಂಡರ್ ಎಸ್ಟಿಮೇಟ್ ಮಾಡಿಬಿಡುತ್ತೇವೆ. ಅವರಿಗೆ ನಮ್ಮ ಸತ್ಯಗಳು ತಿಳಿಯುವುದೇ ಇಲ್ಲ ಅನ್ನುವುದು ಅದರ ಭಾಗದಲ್ಲೊಂದು. ಬಹುಶಃ ನಮ್ಮ ಬಗ್ಗೆಯೂ ಬಹಳ ಜನ ಇದನ್ನೇ ಮಾಡುತ್ತಿರುತ್ತಾರೆ. ಇದರಿಂದಾಗಿ ಮೌನ ಅಥವಾ ಸಹನೆಯಿಂದುರುವವರು ದಡ್ಡರೂ ಉಪೇಕ್ಷಿತರು ಅಥವಾ ಸಾಮಥ್ರ್ಯವಿಲ್ಲದವರೂ ಅನ್ನಿಸಿಕೊಳ್ಳುತ್ತಾರೆ.  ಪ್ರಪಂಚ ದೊಡ್ಡ
ದನಿಯಿಂದಾಗಿ ಹೆಚ್ಚು ಗುರುತಿಸಿಕೊಳ್ಳುತ್ತದೆ. ಆದರೆ ದೊಡ್ಡವರಾಗುವುದು ದನಿಯಿಂದ ಸಾಧ್ಯವಿಲ್ಲ, ದೊಡ್ಡವರಾಗಲು ಬೆಟ್ಟದಷ್ಟು ಶ್ರಮ ಬೇಕು, ಸಾಗರದಷ್ಟು ಸಹನೆ ಬೇಕು, ಆಕಾಶದಷ್ಟು ವೈಶಾಲ್ಯತೆ ಬೇಕು. ತಪ್ಪುಗಳ ಕ್ಷಮಿಸಬೇಕು, ನಮ್ಮ ನಾವೇ ತಿದ್ದಿಕೊಳ್ಳಬೇಕು ಎಲ್ಲಕ್ಕಿಂತ ಜಾಸ್ತಿ ಸಮಯ ಅನ್ನುವ ಈ ಚಿಕ್ಕ ಅಂತರದಲ್ಲಿ ನಾವು ಕಳೆದೇಹೋಗುತ್ತೇವೆ ಎನ್ನುವ ಪ್ರಜ್ಞೆ ಬೇಕು. ಇವೆಲ್ಲದರ ಜೊತೆ ಮಾತ್ರ ದೊಡ್ಡವರಾಗಬಹುದು. ವಯಸ್ಸು ಕೊಡುವುದಿಲ್ಲ ಇದನ್ನು ಪುಸ್ತಕಗಳು ಕೊಡುವುದಿಲ್ಲ ಇದಕ್ಕೆ ಮನಸ್ಸು
ನಮಗೆ ನಾವೇ ಸಿದ್ದಿಸಿಕೊಳ್ಳಬೇಕು. ತನ್ನಿಂದ ತಾನೇ ನಡೆಯುವ ಪ್ರಕ್ರಿಯೆಗಳೆಲ್ಲ ಇವೆಲ್ಲ. ಪ್ರತಿಯೊಂದನ್ನೂ  ಶ್ರಮದಿಂದಲೇ ಸಿದ್ಧಿಸಿಕೊಳ್ಳಬೇಕು. ಬಾಯಲ್ಲಿ ಹೇಳುವ ಆಚಾರಕ್ಕಿಂತ ಬದುಕುವ ವಿಚಾರ ಬಹಳ ದೊಡ್ಡದು. ಇದನ್ನು ಅರ್ಥಮಾಡಿಕೊಂಡರೆ ಪ್ರಪಂಚ ಹೇಗಿದ್ದರೂ ಕಹಿ ಅನ್ನಿಸುವುದಿಲ್ಲ. ಅದಕ್ಕೇ ಸಾವು ಭಯಭೀತರಾಗಿಸುವುದಿಲ್ಲ. ಬದುಕು ಹೊರೆಯೆನ್ನಿಸುವುದಿಲ್ಲ.  

ಬದುಕಿನ ಎಂತದ್ದೇ ಸ್ವಾರ್ಥ ಗಳಿರಲಿ. ಪ್ರತಿಯೊಬ್ಬರಿಗೂ ಇರುವಂತದ್ದೇ. ಅವರವರ ಬದುಕಿನ ಹೋರಾಟದ ಜೊತೆ ಅವರವರೆ ಹೀಗೆ ಬಂದು ನಿಲ್ಲಲೇಬೇಕು ಒಂದಲ್ಲ ಒಂದು ದಿನ.ಒಳಗಿನ ಆತ್ಮದ ಪಶ್ಚಾತ್ತಾಪದ ಬೆಂಕಿ ಬೇಯಿಸದಷ್ಟು ನಮ್ಮ ಬದುಕಿನ ದಾರಿ ಶುದ್ಧವಾಗಿದ್ದರೆ ಈ ಯಾತ್ರೆಗೆ ಅಂತಿಮ ಹೇಳಲು ಹಿಂಜರಿಕೆಯಿಲ್ಲ‌. ಹೀಗೆ ಇವತ್ತು ನಮ್ಮನ್ನು ನಿಲ್ಲಿಸಿ ಬದುಕಿನ ಸಮಯದ ಅಮೂಲ್ಯತೆ ಸಾರಿದ ಕೊರೊನಾಕ್ಕೆ ಧನ್ಯವಾದ ಹೇಳಲೇಬೇಕಲ್ಲವಾ?

😊😊

   
--ಪ್ರಿಯಾ

Tuesday, November 19, 2019

ಬೆಳಗಿನ ಕತೆ

ಆತ್ಮಸಖನೇ, 

ಅನಾಮಿಕ ಸ್ಥಳದಲ್ಲಿ ಕುಳಿತು ಬೆಳಗು ನನ್ನ ಕಣ್ತುಂಬಿಕೊಳ್ಳುವ ಹೊತ್ತಲ್ಲಿ ಸುಮ್ಮನೇ ಇರುವುದ ಬಿಟ್ಟು ಮನಸು ಅತ್ತ ಇತ್ತ ಹರಿದಾಡುತ್ತಿದೆ. ಹಿಂದೆ ಮುಂದೆ ಜೋಕಾಲಿಯಾಡುತ್ತಿದೆ. ಭೂತದ ನೆರಳು ಭವಿಷ್ಯತ್ತಿಗೆ ಬೆರಳ ತೋರಿಸುತ್ತಿದೆ. ನಾನೇನು ನಿನ್ನಷ್ಟು ವೇದಾಂತಿಯಲ್ವಲ್ಲ.ಆದರೂ ಎಲ್ಲಿ ಹೋದರೂ ಬೆನ್ನು ಬಿಡದ ಭೂತ ನೀನು. ಕತ್ತಲಿರಲಿ ಬೆಳಕಿರಲಿ. ಕಣ್ಣು ಮುಚ್ಚಿದರೂ ಕಣ್ಣು ಬಿಟ್ಟರೂ ನಿನ್ನ ಕಣ್ಣು ತಪ್ಪಿಸಲಾಗದು.

ಏನು ಯೋಚನೆ ಅಷ್ಟೆಲ್ಲ ಅಂತ ಕೇಳ್ತಿದೆ ನಿನ್ನ ಕಂಗಳು. ಹೇಳಿದರೆ ನೀನು ಬಿದ್ದು ಬಿದ್ದು ನಗೋದು ಗ್ಯಾರಂಟಿ ಅಂತ ನನಗೆ ಗೊತ್ತು. ಆದರೂ ಹೇಳ್ತೀನಿ ಕೇಳು.  ಇಷ್ಟು ವರ್ಷದಲ್ಲಿ ಏನು ಗಳಿಸಿದೆ ಅಂತ ನನಗೆ ನಾನೇ ಕೇಳ್ಕೊಳ್ತಿದ್ದೆ. ಗಳಿಕೆಯೆಂದರೆ ಹಣದ್ದಲ್ಲ.‌ಎಷ್ಟೆಲ್ಲ ಪ್ರೀತಿ ವಿಶ್ವಾಸ, ಸ್ನೇಹ ಲೆಕ್ಕ ಹಾಕ್ತಿದ್ದೆ. ಎಟ್ ಪ್ರೆಸೆಂಟ್ ಕಣ್ಮುಚ್ಕೊಂಡ್ರೆ ಒಳಗಿರೋದು ನಾನು ಮತ್ತೆ ನೀನು ಇಬ್ಬರೇ.. ನಂಗೆ ಬುದ್ದಿ ಬಂದಾಗ ಹೀಗೇ ಕಣ್ಮುಚ್ಕೊಳ್ತಿದ್ದೆ. ಆವಾಗ್ಲೂ ಇದ್ದಿದ್ದು ನಾವಿಬ್ರೇ. ಮತ್ತೆ ಮಧ್ಯೆ ಅದೆಷ್ಟು ಜನ ಬಂದಿದ್ದಾರೆ! ನಾನಿದ್ದೀನಿ ನಾನಿದ್ದೀನಿ ಅನ್ನೋದಕ್ಕೆ. ಮೊನ್ನೆ ಯಾರೋ ಹೇಳ್ತಿದ್ರು. ನಾನಿದ್ದೀನಿ ನಿನ್ ಜೊತೆ. ಯಾವತ್ತೂ ಇರ್ತೀನಿ. ಇಲ್ಲೇ. ಹೀಗೆ. ಇಪ್ಪತ್ತು ವರ್ಷಾದ ನಂತರವೂ ಇರ್ತೀನಿ ಅಂತೇನೋ. ನಗಲಿಲ್ಲ ಮಾರಾಯಾ ನಾನು. ಅದರೆ ಒಳಗೊಳಗೆ ನಗು ಬರ್ತಿತ್ತು ಸುಳ್ಳಲ್ಲ. ಇವತ್ತಿನ ಇಡೀ ದಿನಕ್ಕೆ ನನಗೆ ಕೊಡೋಕೆ ಐದು ನಿಮಿಷ ಸಮಯ‌ ಇಲ್ದಿರೋರೆಲ್ಲ ಜೀವನ ಪೂರ್ತಿ ನಿನ್ ಜೊತೆ ನಾನಿದ್ದೇನೆ ಅನ್ನೋದಿದೆಯಲ್ಲ ಅದರಂತ ದೊಡ್ಡ ಜೋಕು ಇನ್ನೊಂದಿಲ್ಲ ಅನ್ನಿಸ್ತಾ ಇತ್ತು! ನಾಳೆ ಬೆಳಿಗ್ಗೆ ನಾನೇ ಇರ್ತೇನೆ ಇಲ್ವೋ ಗೊತ್ತಿಲ್ಲ ಮಾರಾಯಾ ಇವತ್ತಿನದಷ್ಟೇ ನಿಜ. ಹೌದಾ ಅಲ್ವಾ ನೀನೇ ಹೇಳು.


ನೋಡು ಈ ಸಂಬಂಧಗಳೇ ವಿಚಿತ್ರ. ನಿಭಾವಣೆಯ ಹೊರೆ ಬೇಡ ಅಂದ್ಕೊಳ್ತೇವೆ. ನಿಭಾಯಿಸದೇ ಇದ್ರೆ ನಾವೇ ನೊಂದ್ಕೊಳ್ತೇವೆ. ಸಮಯ, ಮಾತು, ಕಷ್ಟ ಸುಖ ಎಲ್ಲಕ್ಕೂ ಸಣ್ಣ ಒಂದೊಂದು ಸ್ಪಂದನದ ನಿರೀಕ್ಷೆಯಲ್ಲೇ ಇರ್ತೇವೆ. ಮತ್ತೆ  ಅದನ್ನ ನಿಭಾಯಿಸಕ್ಕಾಗದೇ ಇದ್ದಾಗ ದೊಡ್ಡ ದೊಡ್ಡ ಡೈಲಾಗ್ ಎತ್ಗೊಳ್ತೇವೆ. ಇದಕ್ಕಿಂತ ನಾವ್ಯಾರಿಗೂ ಯಾವುದೇ ನಿರೀಕ್ಷೆ ಹುಟ್ಟಿಸುವಂತ ಮಾತುಗಳ ಆಡದೇ ಇರೋದು ಒಳ್ಳೆಯದಲ್ವ?   ಇವತ್ತಿಗೆಷ್ಟು ಸಾಧ್ಯವೋ ಅಷ್ಟೇ ಬದುಕಿಗಿರಲಿ.  ನಾಳೆಗಳು ನಮ್ಮವೆಂಬ ಖಾತರಿ ಏನಿಲ್ಲ. ನೊಂದುಕೊಳ್ಳೋದಿಲ್ಲ ಅನ್ನೋ ಗ್ಯಾರಂಟಿ ನನ್ನೊಳಗೆ ಇರೋದು ಈ ಕಾರಣಕ್ಕೆ. ಇತ್ತೀಚೆಗೆ ಯಾರಾದ್ರೂ ನನಗೋಸ್ಕರ ಏನಾದ್ರು ಮಾಡ್ತೀನಂದ್ರೆ ಬೇಡ. ನಿಮಗೆ ಬೇಕಿದ್ರೆ ಮಾತ್ರ ಮಾಡಿ ಅಂತ ನಿರ್ದಾಕ್ಷಿಣ್ಯ ಹೇಳಿ ಬಿಡೋಣ ಅನ್ನಿಸತ್ತೆ. ಸುಮ್ನೆ ಅವರ ಕಂಗಳಲ್ಲಿ  ನನ್ನ ಒರಟು ನಡವಳಿಕೆಯ ಬಗೆಗೆ ಅಸಹನೆ ನೋಡಕ್ಕೆ ಇಷ್ಟವಾಗದೇ ಸುಮ್ನಿದ್ದುಬಿಡ್ತೇನೆ. ಮೌನ ಅನ್ನೋದು ಎಷ್ಟೆಲ್ಲ ಅರ್ಥಗರ್ಭಿತ! ಅದಕೇ  ನೀ ನನಗೆ ಇಷ್ಟವಾಗೋದು. ಮಾತಾಡದೇ ಮಾತಾಡುವ ನಿನ್ನ ನಗು ನನ್ನ ಖುಶಿಯಾಗಿಡೋದು. ನಾನು ಒಂಟಿ ಅನ್ನಿಸದಷ್ಟು ನನ್ನೊಳಗೆ ನೀನು ಇರೋದ್ರಿಂದಲೇ ಬಾಹ್ಯ ಸಂಬಂಧಗಳು ನನ್ನ ಎಷ್ಟು ನಲುಗಿಸಿದರೂ ನಾನು ಸ್ಥಿರವಾಗಿ ನಿಲ್ಲೋಕೆ ಸಾಧ್ಯವಾದದ್ದು.   ನನ್ನ ಗಳಿಕೆ ಏನೂ ಇಲ್ಲ ಇಲ್ಲಿ ಅಂತ ಅರ್ಥವಾಗಿಸಿದ್ದು ಕೂಡ ನೀನೇ.   ಇವತ್ತಿಗೆ ಸಾಕು ಮಾರಾಯಾ. ಈ ಬೆಳಗು ಮತ್ತೆ ಒಳಗಿಳಿಯಲಿ. ಇಲ್ಲಿ ಚೆಲ್ಲಿದ‌ ಮಂಜಿನ ಹನಿಗಳಂತೆ...




Friday, October 4, 2019

ಇಳಿಯಬೇಕಿದೆ ಮತ್ತೊಂದು ಸುತ್ತು..

ಆತ್ಮಸಖನೇ,

ಒಂದ್ಕಾಲ ಇತ್ತು.  ಬದ್ಕಿನ ಬಗ್ಗೆ ವಿಪರೀತ ಕಾನ್ಪಿಡೆನ್ಸ್ ಇತ್ತು. ಹೋಪ್ ಇತ್ತು‌. ಫರ್ಪೆಕ್ಷನ್ ನ ಹುಚ್ಚಿತ್ತು. ಪ್ರಪಂಚದ ಅಂಚಿನವರೆಗೂ ಒಂದ್ಸಲ ಹೋಗಿ ಬಂದು ಬಿಡುವ ಅನ್ನುವ ಕನಸು ಉಮೇದಿ ಇತ್ತು. ಕಾಲ ಬದಲಾದಂತೆ ಎಷ್ಟೆಲ್ಲ ಬದಲಾದವು! ನಾವೇನಾ ಇದು ಅಂದುಕೊಳ್ಳುವಷ್ಟು!
ತರತರದ ಅಡುಗೆ ತಿನ್ನುವ ಮಾಡುವ ಉಮೇದಿಯ ಹೊತ್ತಲ್ಲಿ ಯಾರದೋ ನಿರ್ಭಂದಗಳಿಗೆ ನಮ್ಮ ಬಯಕೆಗಳ ಬಲಿ ಕೊಟ್ಟೆವು. ಈಗ ಮಾಡುವ ಉಮೇದಿ ಇದ್ದರೂ ತಿನ್ನುವ ಹಪಹಪಿಯೇ ಇಲ್ಲ‌. ದೇಹಕ್ಕೆ ತಿಂದರೆ ದಕ್ಕುವುದೇ ಇಲ್ಲ. ಬದುಕು ಹಾಗೆ. ಬೇಡದ್ದೆಲ್ಲ ಕಲಿಸಿದೆ. ಬೇಕಾಗಿರೋದನ್ನೇ ಕಿತ್ಗೊಂಡಿದೆ. ನನಗಂತೂ ಪರ್ಫೆಕ್ಷನ್ ನ ಭೂತ ತೊಲಗಿದೆ. ಎಲ್ಲಾನೂ ನಾನೇ ಸರಿ ಮಾಡ್ಕೊಳ್ತೀನಿ ಅನ್ನೋ ಅತಿಯಾದ ಅನಿಸಿಕೆಗಳೆಲ್ಲ ಮಣ್ಣುಕಚ್ಚಿದೆ. ಎಲ್ಲರಿಗೂ ಸರಿ ಮಾಡಬೇಕು. ಎಲ್ಲರ ನಿರೀಕ್ಷೆಗಳಿಗೂ ಒದಗಬೇಕು ಎಂಬುದೇ ಹುಚ್ಚು ಅಂತ ಗೊತ್ತಾಗಿದೆ. ಕಾಲ ಮತ್ತು ಪರಿಸ್ಥಿತಿ ನಮ್ಮನ್ನ ಆಡಿಸುವ ಆಟದ ಗೊಂಬೆಗಳು. ಅದು ಬೇರೆಯವರನ್ನೂ ಆಡಿಸುತ್ತಿದೆ ಅಷ್ಟೇ. ಹಿಂತಿರುಗಿ ನೋಡಿದರೆ ನಮ್ಮದೇ ನೂರು ತಪ್ಪುಗಳು ಗೋಚರಿಸುತ್ತವೆ. ಅವು ಅವತ್ತಿನ ಕ್ಷಣಕ್ಕೆ ತಪ್ಪೆನಿಸಿದವಲ್ಲ. ಇವತ್ತಿಗೆ ಅನ್ನಿಸುತ್ತಿವೆ. ನಾಳೆಗೆ ಗೊತ್ತಿಲ್ಲ. ಹಾಗೇ ಬುದ್ದೀಪೂರ್ವಕ ಬದುಕಿನ ಅಸಡ್ಡೆ ಇರಲಿಲ್ಲ ನನಗೆಂದೂ. ನಾನು ಕೇಳಿರದ ನೂರಾರು ತಿರುವುಗಳಲ್ಲಿ ನನ್ನ ನಡೆಸಿರುವ ಅವಳಿಗೇ ಗೊತ್ತು. ನನ್ನೊಳಗಿನ ಸರಿ ತಪ್ಪುಗಳ‌ಲೆಕ್ಕ. ಇನ್ಯಾರಿಗೆ ಕೊಡಲಿ ಹೇಳು.

ಬಹುಶಃ ಹಿಂತಿರುಗಿ ನೋಡೋದು ಒಂದು ವ್ಯವಸ್ಥೆ ಅಷ್ಟೇ. ಯಾವುದೂ ಮತ್ತೆ ನಮ್ಮ ಕೈಗೆ ಸಿಗದು. ನಾಳೆಗಳಿಗೆ ಇವತ್ತೇ ಋಜು ಹಾಕಲಾಗದು.‌ಇವತ್ತಿನ ಅನಿವಾರ್ಯತೆ ಗಳಿಗೆ ರಾಜಿ ಮಾಡಿಕೊಳ್ಳದ ಹೊರತು ಬೇರೆ ಆಪ್ಷನ್ ಇಲ್ಲ. ಸಧ್ಯಕ್ಕೆ ನನ್ನ ನಡೆಸುವ ದಾರಿ ಅವಳದ್ದೇ. ಸಮಾಧಾನ ಕೊಡುವಾಗ ಕೊಡುತ್ತಾಳೆ. ನೀನೇ ಹೇಳಿದ ಹಾಗೆ ಇದು ನನ್ನ ಬದುಕು ಅನ್ನೋ ಕಾರಣಕ್ಕೆ ಖುಶಿಯಾಗಿರುವ ನೋಯುವ ಅಳುವ ಎಲ್ಲ ಹಕ್ಕು ನನಗಿದೆ. ಎಲ್ಲದನ್ನೂ ಬದಿಗೆ ಸರಿಸಿ ಮುಂದೆ ನಡೆಯಲೇಬೇಕಾದ ಅನಿವಾರ್ಯತೆ ಬದುಕಿನದು
ಸಮಯದ ಜೊತೆ ಒಳಮನೆಯಲ್ಲಿ ಸದೃಡ ಏಕಾಂತವೊಂದನ್ನು ಸೃಷ್ಟಿಸಲು ಬದುಕೇ ಅನುವು ಮಾಡಿ ಕೊಟ್ಟಿದೆ. ಈ ಜಗತ್ತಿನ ಮೋಹ ಮಿಥ್ಯಗಳ ರೂಪದಲ್ಲಿ. ಅದು ಅರ್ಥಮಾಡಿಸುವ ಪರಿಗೂ ನಮಗೆ ಅರ್ಥವಾಗಿಲ್ಲ ಅಂದರೆ ಅದಕ್ಕೆ ಹೊಣೆ ಅವಳಲ್ಲ. ನಾವೇ. ಒಳಗಿಳಿದು ನೋಡು. ನಮ್ಮಿಂದ ಎಲ್ಲವನ್ನೂ ಕಿತ್ಗೊಂಡು ನೋವು ಕೊಡ್ತಿದ್ದಾಳೆ ಅಂದ್ಕೊಳ್ತಿದ್ದೀವಿ ನಾವು. ಆದರೆ ಅವಳು ಇದ್ಯಾವುದು ನಿಂದಲ್ಲ. ಮೋಹ ಕಳಚು ಅಂತಿದ್ದಾಳೆ‌.
ವಾಸ್ತವದ ಕರ್ತವ್ಯದ ಹೊರತಾಗಿ ಯಾವುದೂ ನೋವು ನಲಿವಿಗೆ ಅಂಟಿಕೊಂಡಿರಬಾರದು. ಆ ಕ್ಷಣಕ್ಕೆ ಅನುಭವಿಸು. ಒಪ್ಪಿಕೋ. ಹಾಗೇ ಮುಗಿಯಿತು. ಮುಂದೆಜ್ಜೆ ಇಡು.‌ಅಲ್ಲೇ ನಿಲ್ಲಕ್ಕಾಗಲ್ಲ.

ಕತೆ ಇಲ್ಲಿಗೆ ಎಂದಿಗೂ ಮುಗಿಯೋದಿಲ್ಲ.ಮಾತು ನಿನಗೆ ಕೇಳದುಳಿದೀತು. ನನಗೆ ಹೇಳಿ ದಣಿವಾಗೋದಿಲ್ಲ. ಸಣ್ಣ ಅಲೆಗಳ ತುಂಬ ತಂಗಾಳಿಯ ತುಂಬಿಕೊಂಡು ನಿನ್ನ ಪಾದ ನೇವರಿಸುವಾಗಲಾದರೂ‌ ನೆನಪು ದಟ್ಟವಾಗದಿರದು. ಎಷ್ಟೆಂದರೂ ಆತ್ಮಸಖನಲ್ಲವೇ!

ಈ ಬಾರಿಯ ನೆರೆಗೂ ನಿನ್ನ ಸರೋವರದಲ್ಲಿ ನೀರಾಗಿಲ್ಲವೇ ಅಂತ ನೀನೊಮ್ಮೆ‌ ಬೈದು ಕೇಳಿದ್ದರೆ  ಎಷ್ಟು ಚೆನ್ನಾಗಿತ್ತು ಅಂದುಕೊಳ್ಳುತ್ತಲೇ ಮತ್ತೆ‌ ಮತ್ತದೆ ಮಾತಿಗಿಳಿಯುತ್ತೇನೆ.ನೀನು ಓದುವುದಿಲ್ಲ.‌ಏನೂ ಹೇಳುವುದೂ ಇಲ್ಲ.‌ಕಾಯುತ್ತಲೇ‌ ಉಳಿದ‌ ನಾನು ನಾನಾಗಿರದ ಹೊತ್ತಲ್ಲಿ ಮನುಷ್ಯನ ಅಗತ್ಯ ಮನುಷ್ಯನೇ ಎಂಬ ಅರಿವಿನೊಂದಿಗೆ ಮತ್ತೆ ಜೋತುಬೀಳುತ್ತೇನೆ ಜೋಗಿತಿಯಂತೆ..

#ಜೋಗಿತಿಯ_ಜೋಳಿಗೆಯಿಂದ
#ಸಿರಿ

Thursday, April 11, 2019

ಆತ್ಮಸಖನೆ

ಆತ್ಮಸಖನೆ,

ಹೊರಗೆ ಬಿರು ಬಿರು ಬಿಸಿಲುರಿ. ಒಳಗೊಂದು ತಣ್ಣನೆಯ ಎಲೆ ಗಾಳಿ!ಇದೇನು ಹೊಸ ಪರಿ ಅಂತ ಆಲೋಚಿಸುತ್ತಿದ್ದೆಯೇನೋ. ನಿನ್ನ ನೆನಪಿಗಿರುವ ಖುಶಿಯದು. ಎಷ್ಟು ಕಾಲವಾಯಿತು ಮತ್ತೆ ನಾವು ಹೀಗೆ ತಣ್ಣಗೆ ಕುಳಿತು ಮಾತನಾಡಿ. ಬೃಂದಾವನ ತುಳಸಿಯೆಲ್ಲ ಒಣಗಿ ಬೀಜ ಉದುರುವಷ್ಟು ದಿನವಾಯಿತು. ನೀ ಬರದೇ. ಹೋಗಲಿ ಒಮ್ಮೆ ನೆನಪಾಗಿಸಿಕೊಂಡು ನನ್ನ ಹೆಸರ ಕರೆಯದೇ..

ಆದರೂ ನಿನ್ನ ನೆನಪಲ್ಲೆಷ್ಟು  ತಂಪಿದೆ ನನಗೆ ನೋಡು.  ಬರದವನ ಬಗೆಗೂ ಎಂಥಾ ಮೋಹವೇ ನಿನಗೆ ಅಂತ ನಗೆಯಾಡಬೇಡ. ಬಂದಾಗೊಮ್ಮೆ ಅಂಗೈ ನೇವರಿಸಿ ಹೋಗಿದ್ದೆಯಲ್ಲ! ಅಷ್ಟೇ ಸಾಕು ನೋಡು. ನಿನ್ನ ನೇವರಿಕೆಯಲ್ಲೇ ಅಷ್ಟು ಪ್ರೀತಿಯ ಕಂಡವಳು ನಾ. ಕರೆದಾಗೊಮ್ಮೆ ಖುಷಿಪಡುವ ಭಾಗ್ಯವನ್ನು ಕೊಡಲಿಲ್ಲ ಯಾಕೋ. ಒಮ್ಮೊಮ್ಮೆ ಬೈದುಕೊಳ್ಳುವ ಅನ್ನಿಸಿಬಿಡ್ತೀಯ. ಕೆಟ್ಟ ಹಠಮಾರಿಯಂತೆ ಒಮ್ಮೆ ರಚ್ಚೆ ಹಿಡಿದು ನನ್ನ ಒಲಿಸಬಾರದೇ. ನಿನ್ನ ಒಲವು ಅರಿವ ಮುನ್ನವೇ ಮೌನಕ್ಕೆ ಹೋದವಳು ನಾನು.   ನಿನ್ನ ಕಂಗಳ ಒಲವು ಬತ್ತಿಸಿ ಬಿಟ್ಟೆಯೆನೋ. ಸಣ್ಣ ಹಠದವಳು ನಾನೆಂದು ತಿಳಿದು ಒಲಿಸದೇ ಹೋದೆ. ಬಣ್ಣ ಹಚ್ಚಿಕೊಂಡಿಲ್ಲವೋ ಸುಮ್ಮನೆ ನಿನ್ನೊಲವ ಬಣ್ಣಕ್ಕೆ ಕಾಯ್ದಿದ್ದೇನೆ ನೋಡು.

ರಾತ್ರಿಯ ನಿಶೆಗೂ ಅಂದ ಬರುತ್ತದೆಯಲ್ಲ ನಿನ್ನ ನೆನಪಾದರೆ! ನಿರೀಕ್ಷೆಗಳ ಬತ್ತಿಸಿಕೊಂಡ ಎದೆಯಲ್ಲಿ ನಿನ್ನ ಕನಸುಗಳ ಮೂಟೆ ಕಟ್ಟಿ ಬೆಳಕಿನಂತ ದೀಪ ಹೊತ್ತಿಸಿ ಮತ್ತೆ ಕಾಣದಾದೆಯಲ್ಲ!! ಹೇಳು ನಿನಗೆಂದೂ ನಮ್ಮ ನಡುವಿನ ಖುಷಿಯ ಕ್ಷಣಗಳು ಕಾಡುವುದೇ ಇಲ್ಲವಾ?  ಒಮ್ಮೆಯಾದರೂ  ಕೆನ್ನೆ ಹಿಂಡಿದ ಕೈಗಳು ಕರೆಯುವುದಿಲ್ಲವಾ! 

ಎಷ್ಟೇ ಬರೆದರೂ ಬರದವ ನೀನು. ಗೊತ್ತು ನನಗೆ. ರಾಜಕಾರ್ಯ ಕಾರಣಗಳು ನೂರು ನಿನ್ನವಿದೆ. ಕರೆದಕೂಡಲೇ ಓಡಿ ಬರದ ಬಿನ್ನಾಣವು ನಿನ್ನದಿದೆ. ಹಾಗಿದ್ದು ನಿರೀಕ್ಷೆಯಲ್ಲೇ ನನ್ನ ದಿನಗಳಿವೆ. ತೋಳಿಗೊಮ್ಮೆ ಆತು ನಿನ್ನ ಎಲ್ಲ ಕಣ್ಣೀರು ಮರೆಯಬೇಕಿದೆ ನಾನು. ಎದೆಗೊಮ್ಮೆ ತಲೆಯಿಟ್ಟು ಉಸಿರಾಡಬೇಕಿದೆ. ಎಲ್ಲ ಬಿಂಕ ಬಿಟ್ಟು  ನಿನ್ನ ಕಾಡಬೇಕಿದೆ.

ಈ ಓಲೆಗೂ ಉತ್ತರವಿಲ್ಲದಿರೆ ನಿನ್ನೊಲವಿಗೆ ನನ್ನ ಹೆಸರಿಲ್ಲ! ನವಿಲುಗರಿಯ ಮರಿಯೊಂದು ಸಾಯಬಹುದು ನೋಡು! ಕೊಳಲಾಗುವ ಬಿದಿರೊಂದು ಒಡೆಯಬಹುದು ನೋಡು! 
ಬೇಗ ಒಮ್ಮೆ ಕೂಗಿ ಬಿಡು. ಇಲ್ಲ ನೀನೇ ಬಂದುಬಿಡು.
ಮಳೆಯ ಹೆಸರಿಗೆ.. ನನ್ನ ಕನಸಿಗೆ..

#ಜೋಗಿತಿಯ_ಜೋಳಿಗೆಯಿಂದ
#ಸಿರಿ

Sunday, December 4, 2016

ಭಾಷೆ -ಬಳಕೆ.

ಮತ್ತೊಮ್ಮೆ ನಿಮ್ಮೆದುರಿನಲ್ಲಿ....



 ಈಗಷ್ಟು ಬರೆಯೋದಕ್ಕೆ ನೂರು ಕನಸುಗಳಿವೆ. ಹೇಳೋದಕ್ಕೆ ಸಾವಿರ ಮಾತುಗಳಿವೆ. ಆದರೆ ಕೇಳೋರೊಬ್ಬರು ಬೇಕಲ್ಲ!! ಯಾರಿಲ್ಲದಿದ್ದರೂ ಏನಂತೆ. ಊದೋ ಶಂಖ ಊದೋದೆ. ಬಾರ್ಸೊ ಜಾವಟೆ ಬಾರ್ಸೋದೆ. ಹಂಗನ್ಕೊಂಡ್ಮೇಲೆ ಬರವಣಿಗೆ ಹಗುರ ಅನ್ನಿಸಿದೆ. ಓದು ಆಪ್ತ ಅನ್ನಿಸಿದೆ. ಸುತ್ತ ಮುತ್ತ ಸಿಕ್ಕಾಪಟ್ಟೆ ಬುದ್ದಿವಂತರು ಬುದ್ದಿಜೀವಿಗಳು ಪಂಡಿತರು
ಎಲ್ಲ ತುಂಬ್ಕೊಂಡು ನಾನೇ ನನ್ನಷ್ಟೊತ್ತಿಗೆ ಗಿಲ್ಟ್ ಫೀಲ್ ಮಾಡ್ತಾ ಬರೀಲೋ ಬೇಡ್ವೋ ಯಾರನ್ಕೊತಾರೋ ಅನ್ಕೊಳ್ತಾ ಒಳಗೊಳಗೆ ಸಣ್ಣಗೆ ಬೆವರ್ತಾ ಬದ್ಕು ಒಂಥರಾ ಕಟ್ಟಿ ಹಾಕ್ಕೊಂಡಿರೋ ಹೊತ್ತಿಗೆ ಹೀಗೆಲ್ಲ ಜ್ಞಾನೋದಯ ಆಗಿ ನಿಮಗೆಲ್ಲಾ ಕಷ್ಟ ಕೊಡ್ತಿದ್ದೀನಿ ಅನ್ನಿಸ್ತಿದ್ರೂ ಸ್ವಸ್ವಲ್ಪ ಸಹಿಸ್ಕೋಳ್ತ ಸ್ವಸ್ವಲ್ಪ ಬೈಕೊಳ್ತ  ಓದ್ತಾ ಇರುವಾಗ ಇವತ್ತಿನ ವಿಷಯಕ್ಕೆ ಬಂದ್ಬಿಡೋಣ.


 ಇತ್ತೀಚೆಗೆ  ಭಾಷಾ ಸಂಸ್ಕೃತಿ ನೆ ಮರ್ತು ಹೋಗಿರೋ ಹಾಗೆ ಅನ್ನಿಸ್ತಾ ಇರತ್ತೆ ನನಗೆ ಆಗಾಗ. ನನಗೊಬ್ಬಳಿಗೆ ಹೀಗಾ ಅಥವಾ ನಿಮಗೆಲ್ಲರಿಗೂ ಹೀಗಾ ಗೊತ್ತಿಲ್ಲ. ಬಯಲ ಸೀಮೆ ಅಜ್ಜಪ್ಪ ಬಸ್ಯಾ ಕರ್ಯಾ ಮತ್ತೆ ಅದೆಂತೆಂತದೋ ಆ ಮಗನೆ ಈ ಮಗ್ನೆ ಅಂದ್ರೆ ಏನೂ ಅನ್ಸಲ್ಲ. ಕೆಲಸಕ್ಕೋಸ್ಕರ ಎಲ್ಲೆಂದಿದ್ಲೋ ಬಂದಿರೋ ಜನ ಕುಡ್ಕೊಂಡು ರಸ್ತೆ ಬದಿಯಲ್ಲಿ ಬಾಯಿಗೆ ಬಂದಂತೆ ಮಾತಾಡೋ ಜನ, ಬೀದಿ ಅಂಚಲ್ಲಿ ಬೋರಿಂಗ್ ಬಾವಿ ನೀರಿಗೆ ನಿಂತ ಹೆಂಗಸರು ಕಿತ್ತಾಡೋ  ಭಾಷೆ ಎಲ್ಲ ಸಹನೀಯ. ಭಾಷೆ ಕೂಡ ಮನುಷ್ಯನ ಹುಟ್ಟು ಪರಿಸರದೊಂದಿಗೆ ಅವಿನಾಭಾವದ ಸಂಬಂಧ. ಕನ್ನಡವನ್ನ ಕೆಟ್ಟಕೆಟ್ಟದಾಗಿ ಆಡೋ ಬೇರೆ ಬೇರೆ ಜನರನ್ನೂ ನಾವು ಸಹಿಸ್ಕೊಳ್ತೇವೆ. ಉತ್ತರಕರ್ನಾಟಕ, ಮೈಸೂರ ಕನ್ನಡ, ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಹವ್ಯಕ ಕನ್ನಡ ಅಂತೆಲ್ಲ ಸಾವಿರ ವಿಂಗಡಣೆಯ ಮಾಡಿಯೂ ನಾವೆಲ್ಲ ಭಾಷೆಯ ವಿಷಯದಲ್ಲಿ  ಭಾವ ನೋಡಿ ಸಮಾಧಾನ ಪಟ್ಟುಕೊಳ್ತೇವೆ. ಅನಕ್ಷರಸ್ತರು ಕಾಡು ಜನರು ಹೇಗೆ ಮಾತನಾಡಿದರೂ ಅವರ ಅಭ್ಯಾಸ ಅದು ಅಂತ ಬಿಟ್ಟುಬಿಡ್ತೇವೆ. ಆದರೆ ಈ ನಾಗರಿಕರು, ವಿದ್ಯಾವಂತರು, ಸುಸಂಸ್ಕೃತರು ಅನ್ನೋರು ಬಳಸುವ ಭಾಷೆಗಳನ್ನ, ಉಪಯೋಗಿಸುವ ಶಬ್ಧಗಳು ಮಾತ್ರ ತುಂಬಾ ಕಸಿವಿಸಿಯುಂಟುಮಾಡುತ್ತದೆ! ಯಾಕೆ? ಅಂತ ನಾನೇ ನೂರಾರುಬಾರಿ ಅನ್ಕೊಳ್ತೇನೆ!


 ಶಬ್ಧಗಳ ವಿಷಯದಲ್ಲಿ ಮಡಿವಂತಿಕೆ ಸಲ್ಲದು ಎಂಬುದು ನಿಜವಾದರೂ ಸಾಮಾಜಿಕ ಸ್ಥಳಗಳಲ್ಲಿ ವಿದ್ಯಾವಂತರು ಉಪಯೋಗಿಸುವ ಭಾಷೆಗೆ ಸೌಜನ್ಯವಿರಬೇಕು ಎಂಬುದು ಅಲಿಖಿತ ಮನಸ್ತಿತಿಯೇನೋ.  ಅಥವಾ ವಿದ್ಯೆ ಅಷ್ಟಾದರೂ ಸೌಜನ್ಯ, ಸಂಸ್ಕಾರ ಕಲಿಸಿರಬೇಕೆಂಬುದು ಕೂಡ ನಮ್ಮಂತವರ ರಿಸ್ಟ್ರಿಕೆಡ್ ಮನಸ್ತಿಯೇ ಇರಬಹುದು. ಮನೆಯಲ್ಲಿ ಕೂತು ಓದುವ ಪುಸ್ತಕಗಳಲ್ಲಿ ಶಬ್ಧಗಳು ಹೇಗಿದೆ ಎಂಬುದಕ್ಕಿಂತ ವಿಷಯವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹಾಗಿದ್ದೂ   ಸಾರ್ವಜನಿಕ ಮಾತು, ಸಭೆ,  ಎಪ್ ಬಿ ಅಂತ ಜಾಗಗಳಲ್ಲಿ  ಭಾಷಾ ಸಭ್ಯತೆಯನ್ನು ಗಮನಿಸಲಾಗುತ್ತದೆ. ಅದು ಅವರ ನಾಗರಿಕ ಮನಸ್ತಿತಿಯ ಮುಖವಾಣಿಯೆಂದೇ ನಂಬಲಾಗುತ್ತದೆ. ಇವೆಲ್ಲ ಎಷ್ಟು ಸರಿ ಎಷ್ಟು ತಪ್ಪು ಎಂದು ಇನ್ನೊಬ್ಬರು ಲೆಕ್ಕ 
ಹಾಕಲು ಸಾಧ್ಯವಾಗದು. ಅವರವರದ್ದೇ  ಗುಣಾಕಾರಗಳು ಅಲ್ಲಿರೋದು. 

   ಇಷ್ಟೆಲ್ಲ ಹೇಳೋಕ್ ಮುಂಚೆ ನನಗೂ ಗೊತ್ತಿಲ್ಲ. ಯಾವುದು ಸರಿ ಯಾವ್ದು ತಪ್ಪು ಅಂತೆಲ್ಲ. ಮಾತಿನಾಚೆಗೆ ಮನಸೇ ಮುಖ್ಯ ಅನ್ನೋ ನನ್ನನ್ನು ಮಾತು ಹರ್ಟ್ ಮಾಡತ್ತೆ .  ಭಾಷೆಯ ಬಳಕೆ ತಪ್ ತಪ್ಪಾಗಿ  ಮಾತಾಡಿದ್ರೆ ಮೈ ಉರಿಯತ್ತೆ
ಅನ್ನೋದು ನೂರಕ್ಕೆ ನೂರು ಸತ್ಯ. ಮಾತು ಕೃತಿ ಎರಡೂ ಒಂದಷ್ಟು ಸಾಮ್ಯತೆ ಕಾಣದಿದ್ದರೆ ಅದೊಂದು ನಾಟಕೀಯ ಅನ್ನಿಸೋಕೆ ಎಷ್ಟೊತ್ತು ಬೇಡ. ಆಮೇಲಿಂದು ಅವರವರಿಗೆ  ಬಿಟ್ಟ ವಿಷಯ. 

 ಇವತ್ತಿಗೆ ಇದಿಷ್ಟೇ, ನಿಮಗೂ ನನ್ನಂಗೆ ಹೀಗೆಲ್ಲಾ ಅನ್ನಿಸ್ತಾ ಇದ್ರೆ ಹೇಳದೆ ಇರ್ಬೇಡಿ. ಮುಕ್ತಾಯಕ್ಕೊಂದು ಶರಾ ಬರೆಯೋ ವಿಷಯ ಅಂತೂ ಇದಲ್ಲ.

ಸಿಗುವಾ ಮತ್ತೊಮ್ಮೆ ನಾಳೆಗಳಿದ್ದರೆ.. 





Saturday, November 5, 2016

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ...



ತುಂಬಾ ದಿನಗಳ ನಂತರ ಬರೆಯಬೇಕೆಂಬ ಒತ್ತಡಕ್ಕೆ ಬಿದ್ದಿದ್ದೇನೆ. ಹೌದು. ನನ್ನ ಮೌನಗೊಳಿಸುವ ನಿಟ್ಟಿನಲ್ಲಿ ನಿನ್ನದು ಪ್ರಯತ್ನವಾ ಅಥವಾ ನನ್ನ ಸುಮ್ಮನುಳಿಸುವ ತಂತ್ರವಾ ಗೊತ್ತಿಲ್ಲ ನನಗೆ. ಆದರೆ ಒಮ್ಮೆ ಮೌನವಾಗುವ ಹಂಬಲಕ್ಕೆ ಬಿದ್ದರೆ ಮತ್ತೆ ನಿನಗೂ ನನ್ನ ಹತ್ತಿರ ಬರೋಕಾಗಲ್ಲ ಎಂಬುದು ನಿನಗೆ ಗೊತ್ತಿದೆಯಲ್ಲ. ಅತಿಯಾದ ಆತ್ಮವಿಶ್ವಾಸ ಅತಿಯಾದ ಹಟ ಅತಿಯಾದ ಎಲ್ಲವನ್ನೂ ಮಾಡಿ ನನ್ನ ಒತ್ತಡಕ್ಕೂ ನನ್ನ ಮನಸ್ಸಿನ ಒತ್ತಡಕ್ಕೂ ಕಾರಣವಾದ ಎಲ್ಲವನ್ನೂ ನಾನು ಇನ್ನಿಲ್ಲ ಎನ್ನುವಂತೆ ತೊರೆದಿದ್ದೇನೆ. ಸ್ವಲ್ಪ ಕಷ್ಟ ನನಗೆ ನಿಜ. ಆದರೆ ಹಠಕ್ಕೆ ಬಿದ್ದರೆ ಎಲ್ಲವನ್ನೂ ಬಿಡುತ್ತೇನೆ. ಯಾಕೆಂದರೆ ನಾನು ಒಪ್ಪಿಕೊಳ್ಳುತ್ತೇನೆ. ಇದು ನನಗೆ ಆಗೋದಿಲ್ಲ ಅಂತ. ಮೊದಲಾದರೆ ತುಂಬಾ ಕಾಲ ನೋಯ್ತಾ ಇರ್ತಿದ್ದೆ. ಆದರೆ ಈಗ ಹಾಗಿಲ್ಲ. ಅತಿಯಾದ ನೋವಾಗತ್ತೆ. ಆದ್ರೆ ದೇವರು ಇದನ್ನೇ ಬರ್ದಿದ್ದಾನೆ ಅಂತ ಅನ್ಕೊಂಡು ಆರಾಮಾಗ್ತೆನೆ. ಹೌದು. ಮಾತು ನನ್ನ ಅಗತ್ಯ. ಬದುಕಿಗೆ ಅನಿವಾರ್ಯ ಕೂಡ. ಎಲ್ಲೊ ನನಗೆ ಪ್ರೀತಿ ಹರಿಸೋಕೆ ಒಂದು ಜೀವ ಬೇಕು. ಅದು ನನ್ನಷ್ಟೇ ಆಪ್ತವಾಗಿ ತಬ್ಬಿಕೊಳ್ಳುವ ಜೀವ ಆಗಿರಬೇಕು ಎಂಬುದು ನನ್ನೊಳಗೆ ನನಗೇ ಅರಿವಿಲ್ಲದಷ್ಟು ಅಂಟಿಕೊಂಡಿರುವ ಸತ್ಯ. ಹಾಗಂತ ಅಗತ್ಯವಿಲ್ಲ ಅಂದವರಿಗೆ ಅದನ್ನೂ ಹರಿಸಲಾರೆ. ಹೆಜ್ಜೆ ಹೆಜ್ಜೆಗೆ ನನ್ನ ನೋಯುಸುವುದನ್ನು ಚಟವಾಗಿಸಿಕೊಂಡವರ ಜೀವಕ್ಕಿಂತ ಪ್ರೀತಿಸುತ್ತಿದ್ದರೂ ತೊರೆದಿದ್ದೇನೆ. ಎಲ್ಲಿ ನನ್ನ ಖುಶಿಗೆ ಜಾಗವಿಲ್ಲವೋ ಎಲ್ಲಿ ನನಗೆ ಅಸ್ತಿತ್ವವಿಲ್ಲವೋ ಅಲ್ಲಿ ನಾ ಹೇಗಿರಲಿ? ನನಗೆ ಅವ್ಯಕ್ತವೆನ್ನುವುದು ಅಭಿವ್ಯಕ್ತವಲ್ಲದಿದ್ದರೆ ಅದೂ ಬೇಡ. ನೀನು ಆಧ್ಯಾತ್ಮದ ಮಾತಾಡುತ್ತಿ!  ಒಂದ್ವೇಳೆ ನನ್ನ ಕೂಡ ಸಹಿಸಲಾಗದಷ್ಟು ಅಸಹನೆ ನಿನ್ನೊಳಗಿದೆ ಅಂತಾದರೆ ನಿನ್ನೊಳಗೆ ಇನ್ನೆಷ್ಟು ಬೆಂಕಿ ಇರಬಹುದು!! ಅವನ್ನೆಲ್ಲ ಇಟ್ಟುಕೊಂಡು ಹೇಗೆ ನೀನು ಜೋಗಿಯಾಗಲು ಸಾಧ್ಯ? ಮನಸು ಶಿವ ಆಗಬೇಕೆಂದರೆ ಅದರೊಳಗೆ ಶಾಂತಿ ನೆಲಸಿರಬೇಕು. ಅಥವಾ ನಿರ್ಲಿಪ್ತವಾಗಬೇಕು. ನಿನ್ನನ್ನು  ಕದಲಿಸದಷ್ಟು ಸಹನೆ ತುಂಬಿಕೊಳ್ಳಬೇಕು. ಆದರೆ ನೀನೋ ಪಕ್ಕದಲ್ಲಿ ಶಿಲೆಯಂತೆ ನಿಲ್ಲಬಲ್ಲ ನನ್ನನ್ನೂ ದೂರ ಇರು ಅಂತ ದೂರ ಮಾಡಿಕೊಳ್ಳುತ್ತಿ. ಸರಿ ಬಿಡು ನನಗಾದರೂ ಏನಗತ್ಯ? ಒಂದ್ವೇಳೆ ಅಗತ್ಯವೇ ಆಗಿದ್ದರೆ ಅದು ನನ್ನ ಮನಸ್ಸಿನದು. ಅದಕ್ಕೆ ದಕ್ಕದ ನೀನು ಇದ್ದರೆಷ್ಟು ಇಲ್ಲಗಿದ್ದರೆಷ್ಟು!!?? ಇದು ವಾಸ್ತವವಾದರೆ ನಾನು ಪ್ರೀತಿಸುವ ಎಲ್ಲ ಜೀವಗಳು ನನ್ನವೇ. ಅವು ಹೇಗಿರಲಿ ಎಲ್ಲಿರಲಿ. ನನ್ನದೇ ಎಂಬಂತೆ ಬದುಕುತ್ತೇನೆ ನಾ. ಅದನ್ನೆಲ್ಲ ಸಹಿಸುವಷ್ಟು ಸಹನೆಯೂ ಇದೆ. ಶಾಂತಿಯೂ ಇದೆ. ದಕ್ಕಿಸಿಕೊಳ್ಳುತ್ತೇನೆ ಎಲ್ಲವನ್ನು. ಅರಗಿಸಿಕೊಳ್ಳುತ್ತೇನೆ ಅಖಂಡ ಮೌನದಲ್ಲಿ.



 ಒಮ್ಮೊಮ್ಮೆ ಸುಮ್ಮನಿರು ಸುಮ್ಮನಿರು ಅನ್ನುತ್ತ ನನ್ನ ಬಾಯಿ  ಸುಮ್ಮನಾಗಿಸುವ ಪರಿಯಲ್ಲಿ ನನಗೆ ನಿನ್ನ ಮುದ್ದೇ ಕಾಣುತ್ತದೆ! ಇದು ನನ್ನ ಭ್ರಮೆ ಯೆಂಬುದು ನಿನ್ನ ಮಾತಾಗಿರುತ್ತದೆ ಅಂತಾನು ಗೊತ್ತು ನಂಗೆ. ಮಾತಿನಲ್ಲಿ ನಿನ್ನ ಸೋಲಿಸಲಾಗದು! ಹಾಗಂತ ನಿನ್ನ ಬಾಯ್ಮುಚ್ಚಿಸುವಿಕೆಯಲ್ಲಿ ತೆರೆದ ತುಟಿಯ ಅಂದವೆಲ್ಲಿ ಖಾಲಿಯಾಗುವುದೇನೋ ಎಂಬ ಅವಸರದಲ್ಲಿ ಮುಚ್ಚಿಟ್ಟುಕೊಳ್ಳುವ ಮಳ್ಳನಂತೆ ಅಪ್ಪಟ ಮುದ್ದಿನ ಹುಡುಗ ಅನ್ನಿಸಿಬಿಡುತ್ತದೆ! ಹೀಗೆಲ್ಲ ಅನ್ನುವುದು ನಿಶಿದ್ಧವೇನಲ್ಲವಲ್ಲ. ಆದರೆ ನಿನ್ನ ವಿಷಯಕ್ಕೆ ಅಂದುಕೊಳ್ಳುವುದು ನಿಷಿದ್ಧ. ನಾನಾದರೂ ಯಾಕೆ ಅಂದುಕೊಳ್ಳಬೇಕು ಹೇಳು! ಅದು ನಿಜವೆಂದು ನೀನೇನು ಒಪ್ಪಿಕೊಳ್ಳಬೇಕಾಗಿಲ್ಲ. ಹಲವು ಒಪ್ಪಿತವಾದ ಭಾವಗಳು ಖುಶಿಕೊಡುವುದಾದರೆ ನನಗಿರಲಿ ಅಂತ ಮುಗ್ಧ ಮುದ್ದು ಭಾವಗಳು..



 ಸುಖಾಸುಮ್ಮನೆ ಕಾಡುವುದು ಪ್ರೀತಿಸುವುದು ಸುಮ್ಮನೆ ಖುಶಿಕೊಡುವ ಮಾತಾಡುವುದು ಇವೆಲ್ಲ ನನಗಿಷ್ಟ. ಯಾರನ್ನಾದರೂ ಹರ್ಟ್ ಮಾಡೋದಕ್ಕೆ ಶ್ರಮ ಬೇಡ. ಆದರೆ ಖುಶಿಯಾಗಿಟ್ಟುಕೊಳ್ಳೋದಕ್ಕೆ ಶ್ರಮ ಬೇಕು. ನನ್ನ ಮಟ್ಟಿಗೆ ಅಂತ ಪ್ರಯತ್ನ ಸುತ್ತ ಮುತ್ತ ಇದ್ದರೆ ಸಾಕು. ಎನೋ ಅಮಲಿನ ಘಂ ಇರಬೇಕು ಅನ್ನೋ ಹಂಗೆ ಬದುಕಬೇಕು.

ಎಷ್ಟು ಜನ ಇಳಿವಯಸ್ಸಲ್ಲು ತಮ್ಮ ಸುತ್ತ ಅಂತದ್ದೊಂದು ಪರಿಮಳ ತುಂಬ್ಕೊಂಡಿದ್ದಾರೆ ಅಂದ್ಕೊಳ್ತಾ ಉತ್ಸಾಹ ನನ್ನೊಳಗೆ ಜೀವಂತ ಆಗತ್ತೆ. ಆದರೆ ದುದರ್ೈವವಶಾತ್  ನನ್ನ ಪ್ರೀತಿಸುವ ಅಥವಾ ನಾನು ಪ್ರೀತಿಸುವ ಜನರಿಗೆ ನನ್ನ ನಗು ಮುಖ ಬೇಕು ಅಷ್ಟೆ, ನನ್ನೊಳಗೆ ನಿಜಕ್ಕೂ ಸಂಭ್ರಮದ ದೀಪ ಉರಿವುದು ಬೇಡ. ಹಾಗೆ ನಾನು ಖುಶಿಪಡಲು ಆರಂಭಿಸಿದಾಗೆಲ್ಲ ನನ್ನಮ್ಮ  ನನ್ನ ಇನ್ನಿಲ್ಲದಂತೆ ಬಡಿದುಹಾಕಿದ್ದಾಳೆ. ಎಲ್ಲ ಪ್ರೀತಿ ಪಾತ್ರಗಳ ರೂಪದಲ್ಲಿ. ಅಂದ್ಮೇಲೆ ಅನುಭವ ನಲ್ವತ್ತು ವರ್ಷ ಆಗಿದೆ. ಈಗ ಹೊಸದೇನಿಲ್ಲ. ಇನ್ನೂ ಯಾರನ್ನಾದರೂ ದೂಷಿಸಬೇಕೆಂದೆಲ್ಲ ಅನ್ನಿಸ್ತಾ ಇಲ್ಲ. ನಮ್ಮ ಹಣೆಬರಹ ನಮ್ಮ ದೇವರು. ವೇದಾಂತ ಹೇಳುವುದ ವೇದಾಂತ ಬದುಕುವುದು ಎರಡೂ ವಿರುದ್ದ ಪದಗಳು. ನೀನು ಹೇಳ್ತಾ ಇರೋ ಜಂಗಮ ಬದುಕನ್ನ ನಾನು ಆಗಲೇ ಬದುಕಲಾರಂಭಿಸಿದ್ದೇನೆ. ಅಪ್ಪಟ ಮನುಷ್ಯನ ಅಸ್ತಿತ್ವದಲ್ಲಿ. ಎಲ್ಲ ಬಲಹೀನತೆಗಳ ಜೊತೆ. ಕಣ್ಣಲ್ಲಿ ಒಂದಿಷ್ಟು ಗಂಗೆ, ಎದೆಯಲ್ಲಿ ಒಂದಿಷ್ಟು ನಿಟ್ಟುಸುರು, ಒಲವು ಮತ್ತೆ ಸಮಯದ ಜೊತೆ ಗುದ್ದಾಟ ಎಲ್ಲವನ್ನೂ ಇಟ್ಟುಕೊಂಡು


ಅದೆಷ್ಟೋ ಡೈರಿಯ ಪದರಗಳು ಹಳೆತಾದವು. ಓದಿದರೆ ಮತ್ತೆ ಮನಸ್ಸು ಹಸಿಯಾಗಿ ಭೋರ್ಗರೆದೀತು!!ಏನೆ ಆಗಲಿ ಬದುಕಿಗೆ ಪ್ರತಿಯೊಂದು ಪಾಠವೇ.. ಅನುಭವಗಳೇ ನನ್ನ ಇದುವರೆಗೆ ಬೆಳೆಸಿದ್ದು. ಬಿದ್ದು ಬಿದ್ದೇ ಕಲಿತದ್ದು ನಾ. ಮೈ ಮನಸಿನ ತುಂಬ ಬೇಕಾದಷ್ಟು ಮಣ್ಣಿನ ಅಚ್ಚಿವೆ. ತೊಳೆದುಕೊಂಡರು ಮಾಸದ ಗಾಯದ ಕಲೆಗಳೂ ಇವೆ. ನೀ ಕೂಡ ಒಂದು ಅನುಭವ.



  ನಲ್ವತ್ತರ ಅಂಚಿನಲ್ಲಿ ನಾನು ಕಲಿಯಬೇಕೆಂದಿತ್ತು ಇದನ್ನೆಲ್ಲ ಅನ್ನಿಸತ್ತೆ. ಅಲ್ಲಿಗೆ ನನ್ನ ಮುಗ್ಧತೆ ಹುಡುಗಾಟ, ಮನಸಿನ ಆದ್ರ್ರತೆ ಇನ್ನೂ ಮಾಯವಾಗಿಲ್ಲ ಅನ್ನಬಹುದು. ಅಷ್ಟರ ಮಟ್ಟಿಗೆ ನಾನಿನ್ನು ಜೀವಂತ ಎಲ್ಲರ ಎದುರಿಗೆ ಎನ್ನುವುದು ನನಗೆ ಒಂದಿಷ್ಟು ಕೋಡು ಮೂಡಿಸಬಹುದು. ನಿಜ ಅಂದರೆ  ಪೆದ್ದಿ. ನೀ ಮನಸ್ಸಲ್ಲೆ ಅಂದುಕೊಳ್ತಿದ್ದೆ ಈ ಪೆದ್ದಿಗೆ
ಏನೂ ಗೊತ್ತಾಗಲ್ಲ ಅಂತ. ಹೌದಲ್ಲ. ಒಂದಷ್ಟು ಪೆದ್ದುತನ ಮುದ್ದು ಮುಗ್ಧತೆ ಇವನ್ನೆಲ್ಲ ಇಟ್ಟುಕೊಳ್ಳದಿದ್ದರೆ ಬದುಕು ಘನಘೋರ ಗಂಭೀರ ಆಗ್ಬಿಡತ್ತೆ. ನಿನ್ನಂತವರ ಎಲ್ಲ ಮಾತುಗಳು ಸೀದಾ ಅಹಂಗೆ ನಾಟತ್ತೆ. ಅದಕ್ಕೆಲ್ಲ ಅರ್ಥ ಹುಡುಕುತ್ತಾ ಅನಿಸಿಕೆ ಬರೆಯುತ್ತಾ ಕುಳಿತರೆ ಬದುಕಲೆಲ್ಲಿ ಸಮಯ!! ಬದುಕೇ ಮುಗಿದುಹೋಗಿರುತ್ತಲ್ಲ!ಅದಕ್ಕೆಂದೇ
ಬದುಕುವ ಬದುಕಿನ ಹುಚ್ಚಿಗೆ ಬಿದ್ದಿದ್ದೆ ಜೀವ. ಅದಕ್ಕೆ ಯಾರೂ ಅನಿವಾರ್ಯವಲ್ಲ. ಆದರೂ ಎಲ್ಲರೂ ಅನಿವಾರ್ಯ.



ಮತ್ತೆ ಮಾನಸ ಸರೋವರದಲ್ಲಿ ಅಲೆಗಳಿವೆ. . ನನ್ನೆದೆಯ ಹಾಡು.. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ  ಹರಿವಿಗೆ ಎಳೆಎಳೆಯ ಸಂಭ್ರಮದೊಂದಿಗೆ..





Saturday, October 3, 2015

ಕ್ಷಮೆಯಿರಲಿ ಸ್ನೇಹದಲಿ...





        ಭಾವನೆಗಳ ಮಹಾಪೂರದಲ್ಲಿ ಮಿಂದೆದ್ದು ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳುವಾಗ ಗೆಳೆಯಾ ನಿನಗೆ ಈ ಮಾತುಗಳ ಹೇಳಬೇಕೆಂದುಕೊಳ್ಳುತ್ತೇನೆ. ಇವತ್ತು ಅಲ್ಲೆಲ್ಲೋ ಮತ್ತೊಂದು ಸ್ನೇಹದ ಸಾವಾಗಿದೆ. ಇನ್ನೊಂದು ಪ್ರೀತಿ ಮಣ್ಣುಕಚ್ಚಿದೆ. ನೋವು ಜಲಪಾತವಾಗಿ ಕಂಬನಿ ಜಿನುಗುತ್ತಿದೆ.. ಎಲ್ಲದರ ನಡುವೆ ನಾನಿಂತು ಮೌನವಾಗಿ ನೋಡುತ್ತಿದ್ದೇನೆ. ಮನುಷ್ಯ ಸಾವುಗಳು ಸಂಕಟದ್ದು. ಅದನ್ನು ಭಗವಂತನೂ ತಡೆಯಲಾರ.. ಆದರೆ ಪ್ರೀತಿ ಹೀಗೆ ಸೋಲುವುದು ಆತ್ಮಹತ್ಯೆಯಂತೆ ನೋವಾಗುತ್ತದೆ. ಅದೆಷ್ಟು ಒಳ್ಳೆಯ ಸ್ನೇಹ  ಪ್ರೀತಿಗಳು ತನ್ನ ಅಹಂನ ಬೆಂಕಿಯಲ್ಲಿ ಬೆಂದುಹೋಗುತ್ತಿವೆ! ಮನುಷ್ಯ ಮನುಷ್ಯನ ನಂಬುವ ಕಾಲವಲ್ಲ ಅಂತಾರೆ. ನಾವೇ ಪ್ರೀತಿಸಿದ ಸ್ನೇಹವನ್ನ ಪ್ರೀತಿಯನ್ನ ನಂಬದಿರುವಷ್ಟು ಕಾಲ ಕೆಟ್ಟಿತೇ?


             ಒಂದಿನ ನನ್ನಲ್ಲೂ ಭಾವನೆಗಳಿರಲಿಲ್ಲ.ನಂಬಿಕೆಗಳಿರಲಿಲ್ಲ. ಪ್ರೀತಿಯಿರಲಿಲ್ಲ. ನೋವಿನ ಎಳೆಯೊಂದ ತಂತಿಯೊಂದು ಬಿಗಿದು ಬಂಧಿಸಿದಂತೆ ಭಾವಗಳ ಗಂಟುಮೂಟೆ ಕಟ್ಟಿ ಬದಿಗೆ ಬಿಸಾಕಿದ್ದೆ. ನೀ ಬಂದು ನನ್ನ ಅದೇ ಮೂಟೆಯಿಂದ ಬಿಚ್ಚಿ ಎಷ್ಟೊಂದು ಮುತ್ತು ಹೆಕ್ಕಿ ಕೊಟ್ಟೆ! ಬದುಕು ಬರೀ ಮುತ್ತಿನ ಹಾರದ ಶೃಂಗಾರವೇನಲ್ಲ. ಅಲ್ಲಲ್ಲಿ ಪೋಣಿಸಿದ ಒಂದೊಂದೇ ಮುತ್ತುಗಳಿವೆ. ಆಯ್ದಿಟ್ಟುಕೋ ಅಂದೆ. ಹುಂ. ಪ್ರೀತಿಗೆ ಇದೆಲ್ಲ ಕರಗಿಸುವ ಶಕ್ತಿ ಇದೆ ನೋಡು. ಎಷ್ಟೆಲ್ಲ ಜಗಳ ಕದನ ಕೋಪ ತಾಪದ ನಡುವೆ ಇಂದಿಗೂ ಅದೇ ಪ್ರೀತಿ ನನ್ನ ಮೊದಲ ಆಯ್ಕೆ. ಸ್ನೇಹ ನನ್ನ ಕೊಂಡುಕೊಳ್ಳಬಲ್ಲಂತದ್ದು.ಹಾಗಾಗೇ ಒಳ್ಳೆಯ ಸ್ನೇಹ ಪ್ರೀತಿಗಳು ಕಡಿದುಕೊಂಡಾಗೆಲ್ಲ ನನಗೂ ನೋವಾಗುತ್ತದೆ. ಪ್ರೀತಿಯಲ್ಲಿ ಯಾರನ್ನೂ ನಂಬೋಕಾಗಲ್ಲ ಅನ್ನುವ ಜನ ಕೂಡ ನಮ್ಮವರನ್ನು ನಂಬಲೇಬೇಕಲ್ಲ. ಮನುಷ್ಯ ಎಂದಿಗೂ ಪರಿಪೂರ್ಣ ಅಲ್ಲ ಅನ್ನುವ ಮಾತು ಇವರಿಗ್ಯಾಕೆ ಗೊತ್ತಾಗೋದಿಲ್ಲ! ಒಂದು ಸಾರೀ, ಒಂದು ಥ್ಯಾಂಕ್ಯೂ ಪದಗಳು  ಎಂಥೆಂಥ ದೊಡ್ಡ ತಪ್ಪುಗಳನ್ನು ಕ್ಷಮಿಸುವಂತೆ ಮಾಡುತ್ತವೆ! ಹೃದಯಗಳನ್ನ ಜೋಡಿಸಿಡುತ್ತವೆ! ಸ್ನೇಹದಲ್ಲಂತೂ ಈ ಸಾರೀ ಮತ್ತು ಥ್ಯಾಂಕ್ಯೂ ಪದಗಳಿಗೆ ಅರ್ಥವಿಲ್ಲ ಎಂದವನಿಗೆ ನನ್ನ ಆಕ್ಷೇಪವಿದೆ. ಪ್ರೀತಿ ಪಾತ್ರರ ತಪ್ಪು ಒಪ್ಪುಗಳನ್ನ ಒಪ್ಪಿಕೊಂಡು ಕ್ಷಮಿಸುವುದರಲ್ಲಿ, ಸಹಕಾರಗಳನ್ನು ಅಭಿನಂದಿಸುವದರಲ್ಲಿ ಬಾಂಧವ್ಯದ ಗಟ್ಟಿತನವಿದೆ. ಯಾಕೋ ಅರ್ಥವಾಗಲ್ಲ ಬಹಳ ಜನರಿಗೆ..


     ಹುಡುಗರ ಗೆಳೆತನ ಹಾಳಾಗುವುದು ಹುಡುಗಿಯರ ವಿಷಯದಿಂದ ಎಂಬ ಮಾತೊಂದಿದೆ. ಸ್ವಲ್ಪ ನಿಜವೇನೋ. ಆದರೆ ಒಂದಿಷ್ಟು ಜಗಳವಾಡಿಯಾದರೂ ಸರಿ ಮನಸು ಬಿಚ್ಚಿ ಮಾತಾಡ್ಕೊಂಡು ಹಗುರಾಗಿ ಅಮೇಲೊಂದು ಸಾರೀ ಹೇಳ್ಕೊಂಡು ಹೆಗಲಮೇಲೆ ಕೈಯಿಟ್ಕೊಂಡು ಹೋಗಬಲ್ಲವರು ಹುಡುಗರು ಮಾತ್ರ. ನಿಜವಾದ ಸ್ನೇಹಿತರ ಭಿನ್ನಾಭಿಪ್ರಾಯಗಳು ಕೂಡ ಸ್ನೇಹವನ್ನು ಮುರಿಯೋದಿಲ್ಲ. ಹಾಗಿದ್ದಾಗ ವಷರ್ಾನುಗಳ ಬಂಧ ಕಡಿದುಕೊಳ್ಳುವ ಮೊದಲೊಂದು ಅವಕಾಶ ಅಥವಾ ಒಂದು ಬಿಚ್ಚು ಮನಸ್ಸಿನ ಮಾತು ಮತ್ತೆ ಕಾರಣಗಳ ಹೇಳಿ ತಪ್ಪಾಗಿದ್ದರೆ ತಿದ್ದಿಕೊಳ್ಳುವ ಮನಸ್ಸು ಯಾವತ್ತೂ ಉಳಿಸ್ಕೊಬೇಕಲ್ವಾ? ಸ್ನೇಹ ಮತ್ತು ಪ್ರೀತಿಯನ್ನು ಅಹಂ ಗಿಂತ ಸ್ವಲ್ಪ ಮೇಲಿಟ್ಟು ನೋಡಬೇಕಲ್ವಾ? ಒಳ್ಳೆಯ ಸ್ನೇಹಿತ ಯಾವತ್ತೂ ಇಂತಹ ಅವಕಾಶಗಳನ್ನು ಮುಚ್ಚಿಹಾಕಬಾರದು. ಬದುಕಿನ ಪ್ರತೀ ಹಂತದಲ್ಲೂ ಮನುಷ್ಯ ಬೇರೆ ಬೇರೆಯೇ ಇರಬಹುದು. ಎಲ್ಲಿಯೋ ತಪ್ಪುಗಳು ನಡೆದಿರಬಹುದು. ಅಥವಾ ಏನೋ ಒಂದು ಮಾತು ಬಂದು ಹೋಗಿರಬಹುದು. ಅವನ್ನೆಲ್ಲ ಗಂಟುಕಟ್ಟಿ ಎಷ್ಟುಕಾಲ ಇಟ್ಟುಕೊಳ್ಳಲು ಸಾಧ್ಯ? ಅವನ ಕಡೆಗೂ ನಮ್ಮ ಬಗ್ಗೆ ನೂರೆಂಟು ಪೂರ್ವಾಗ್ರಹಗಳು ತುಂಬಿಕೊಂಡಿರಬಹುದು. ಅಂತದ್ದೆಲ್ಲ ಮರೆಯುವಷ್ಟು ದೊಡ್ಡವರಾಗಬೇಕು. ಬದುಕು ನಮ್ಮನ್ನ ಬೆಳೆಸಲು ಇಂತವೆಲ್ಲ ಪೂರಕ.


      ಇನ್ನು ಪ್ರೀತಿ ಪ್ರೇಮದಲ್ಲಂತೂ ಇಂತದ್ದು ನೂರು. ವಾಸ್ತವದ ವಿಶ್ಲೇಷಣೆ ಮಾಡುವುದೇ ಇಲ್ಲ. ಹುಡುಗ ಕೈಕೊಟ್ಟ ಹುಡುಗಿ ಕೈಕೊಟ್ಲು ಅನ್ನುವುದಕ್ಕಿಂತ ಹೆಚ್ಚಿನ ವಾಸ್ತವ ಏನಿರಬಹುದು ಪರಿಸ್ತಿತಿ ಇಲ್ಲಿಯವರೆಗೆ ಯಾಕೆ ಹೋಗಿರಬಹುದು ಹಿನ್ನಲೆ ಕಾರಣಗಳ ಕುರಿತು ಯಾವ ಚಿಂತನೆಯೂ ಇಲ್ಲ. ಆಮೇಲೆ ಸ್ವಲ್ಪದಿನ ಸ್ಮಶಾನ ವೈರಾಗ್ಯ, ಮತ್ತೆ ಇದ್ದ ಬದ್ದವರ ಮೇಲೆಲ್ಲ ಆರೋಪ ತಾನೊಬ್ಬನೇ ಪ್ರಪಂಚದಲ್ಲಿ ಬೇರೆ ಅನ್ನುವಂತ ನಡವಳಿಕೆ ಮನಸ್ಸಿನ ಮೂಲೆಯಲ್ಲಿ ಕಹಿಯೊಂದಿಷ್ಟು ಗಂಟುಕಟ್ಟಿಕೊಂಡು ತನ್ನ ಮೂಗಿನ ನೇರಕ್ಕೆ ಕಂಡದ್ದಷ್ಟೇ ನಿಜವೆಂದು ಭ್ರಮಿಸಿಕೊಂಡು ಎಲ್ಲ ಬಾಗಿಲು ಮುಚ್ಚಿಕೊಂಡು ಬದುಕನ್ನು ಮತ್ತೇನೋ ದಾರಿಹಿಡಿಸುವಿಕೆಯಿದೆಯಲ್ಲ ಇದು ಕೂಡ ನೋವಲ್ಲದೇ ಇನ್ನೇನನ್ನೂ ಉಳಿಸದು. ಬದಲು ಸಕಾರಣ ವಿವರಗಳ ಅರಿತುಕೊಂಡು ಸಾಧ್ಯವಾದರೆ ಜೊತೆಯಲ್ಲಿ ಆಗಿದಿದ್ದರೆ ಬಲವಂತದ ಪ್ರೀತಿ ಬದುಕು ಸಾಧ್ಯವಿಲ್ಲವೆಂಬುದ ಅರ್ಥೈಸಿಕೊಂಡು ತಮ್ಮ ತಮ್ಮ ಬದುಕನ್ನು ಚಂದಕ್ಕೆ ಕಟ್ಟಿಕೊಳ್ಳುವುದು ಯಾಕೆ ಸಾಧ್ಯವಾಗದು? ಒಂದಷ್ಟು ದಿನ ಪೊಸೆಸಿವ್ ನ ಉಸಿರುಗಟ್ಟಿಸುವಿಕೆ, ಇನ್ನಷ್ಟು ದಿನ ಸತ್ತರೆ ಸಾಯಿ ಇದ್ದರೆ ಇರು ಅನ್ನುವ ನಿರ್ಲಕ್ಷ್ಯ ಇವೆಲ್ಲ ಪ್ರೀತಿಯಲ್ಲಿ ವಿಶ್ವಾಸದ ಕೊರತೆಯಲ್ಲದೇ ಇನ್ನೇನಲ್ಲ. ಬದುಕು ಇವತ್ತಿಗೆ ಹೆಣ್ಣಿಗಾಗಲೀ ಗಂಡಿಗಾಗಲೀ ಸ್ವತಂತ್ರ್ಯ. ಪ್ರೀತಿ ವಿಶ್ವಾಸಗಳೇ ಇಲ್ಲಿ ಬಂಧನ. ಬಾಂಧವ್ಯದ ಉಸಿರು. 


 ಯಾಕೋ  ಯಾವಬಂಧವೇ ಆಗಲಿ ಶಾಶ್ವತ ಎಂಬ ನಂಬಿಕೆಗಳು ನನಗಿಲ್ಲ. ಒಂದೊಂದು ಹಂತದಲ್ಲಿ ಒಂದೊಂದು ತನ್ನಂತಾನೇ ಕಳಚಿಕೊಳ್ಳುವುದುರಬಹುದು. ಎಲ್ಲವೂ ಒಳ್ಳೆಯ ಸ್ನೇಹಗಳಾಗಿ ಉಳಿಯುವುದೂ ಇಲ್ಲ. ಆದರೆ ಒಳ್ಳೆಯ ಸ್ನೇಹ, ಪ್ರೀತಿ ಅಂತ ನಾವೆಲ್ಲೋ ಹೃದಯದಿಂದ ಆಯ್ಕೆ ಮಾಡಿಕೊಂಡವುಗಳನ್ನು ಸಾಯಿಸಬಾರದು. ಅಂತಹ ಪ್ರೀತಿ ಮತ್ತೆಲ್ಲೂ ಯಾವತ್ತೂ ಇನ್ನೊಂದು ದೊರೆಯುವುದಿಲ್ಲ. ಒಲವು ಸಹ ಇಂತದ್ದೊಂದು ಅವಕಾಶಕ್ಕೆ ಮುಕ್ತವಾಗಿರಲಿ. ನಮ್ಮ ನಮ್ಮ ಅಹಂಗಳಿಂದಾಗಿ ನಮ್ಮದೇ ಮನಸುಗಳು ನಲುಗದಿರಲಿ. ಇಷ್ಟೆಲ್ಲ ಹೇಳಿದ್ದು ಸ್ನೇಹದಿಂದ ಸ್ನೇಹಕ್ಕಾಗಿ..   ಸರೋವರದಲ್ಲಿಂದು ಜಿನುಗು ಮಳೆ... ತಂಪಾಗಿಸಲಿ ಎಲ್ಲ ಮನಸುಗಳ..