Tuesday, July 21, 2015

ಮನಸಾರೆ ವಂದಿಸುತ್ತ......



         ಬರೆಯೋದೇ ಬೇಡ ಅನ್ನಿಸಿ ಪೆನ್ನು ಬದಿಗಿಟ್ಟಾಗೆಲ್ಲ ಮತ್ತೆ ಬರೆಯುವ ಒತ್ತಡ ಹುಟ್ಟುವಂತೆ ಮಾಡುವುದು ಎಲ್ಲರಿಗೂ ಸಾಧ್ಯವಿರೋದಲ್ಲ. ತೀರಾ ನಮ್ಮವರು, ಆತ್ಮೀಯರು ಅಥವಾ ನಮ್ಮನ್ನು ಅಭಿಮಾನಿಸುವವರು ಎಲ್ಲೋ ಒಂದು ಒತ್ತಾಸೆಯ ನುಡಿಯಾಡಿದರೆ ಮಾತ್ರ ಬರೆಯಬೇಕನ್ನಿಸುತ್ತದೆ. ಓದುವುದು ನಮಗೆ ನಾವೇ ಮಾಡಿಕೊಳ್ಳುವ ಅಭ್ಯಾಸಬಲ. ಆದರೆ ಬರವಣಿಗೆ ಒಳಗಿನಿಂದ ಬರಬೇಕು. ಬರೆಯಬೇಕೆನ್ನಿಸುವ ಹಂಬಲ ಒತ್ತಡವಾಗಿಯೇ ಬರುವವರೆಗೆ ಅದು  ತನ್ನ ಸಹಜತೆಯನ್ನು ಪಡೆದುಕೊಳ್ಳುವುದಿಲ್ಲ. ಆದರೆ ಎಲ್ಲೋ ನನ್ನಂತೆ ಆಗಾಗ ಪೆನ್ನು ಬದಿಗಿಟ್ಟು ಕಣಿ ಕೇಳುವ ಮೂಡಿನವರಿಗೆ ಯಾಕೆ ಬರೆಯುವುದು ಬರೆದೇನಾಗಬೇಕಿದೆ ಎಂಬ ಭಾವ ತುಂಬಿಕೊಳ್ಳುವವರೆಗೆ ಯಾವತ್ತೋ ನಾವೇ ಬರೆದ ನುಡಿಯೊಂದು ಎತ್ತಿ ತಂದು ಅಕ್ಕಾ ನಿನ್ನೀ ಮಾತು ನನ್ನ ಖುಶಿಗೊಳಿಸಿತು ಎಂಬ ಪುಟ್ಟದೊಂದು ಅನಿಸಿಕೆ ಮತ್ತೆ ಬರೆಯುವುದಕ್ಕೆ ಸ್ಪೂರ್ತಿಯಾಗಬಹುದು. ಅದಲ್ಲದೇ  ಯಾರು ಓದಲಿ ಬಿಡಲಿ ನಿನಗನ್ನಿಸಿದ ಭಾವಗಳನ್ನು ಬರೆದು ಬಿಡು ಗೆಳತೀ ಅಂತ ಸಣ್ಣದೊಂದು ಬುದ್ದಿಮಾತು ಬರೆಯಬೇಕೆನ್ನುವ ಒತ್ತಡವ ಹುಟ್ಟುಹಾಕಬಹುದು.  ನನ್ನದಾಗಿದ್ದೂ ನನ್ನದಲ್ಲದ ನಿನ್ನೆಗಳ ನಡುವೆ ಕಳೆದುಹೋಗುವ ಕನಸುಗಳಿಗೆಲ್ಲ ಮತ್ತೊಂದು ಮನಸು  ಹೆಗಲುತಟ್ಟಿ ಬರೆಸಬಹುದು.
               ಹಾಗೆಲ್ಲ ನಡೆಯಬೇಕೆಂದರೆ ನುಡಿಸುವ ಯಾವುದೋ ಮನಸುಗಳ ಒಲುಮೆ ಬೇಕು. ಪ್ರೀತಿ ಬೇಕು. ಇಂದಿಗೆ ನನ್ನ ಮತ್ತೊಮ್ಮೆ ಓದಿಸುವ ಬರೆಸುವ ಕೈಗಳಿಗೆಲ್ಲ ನನ್ನದೊಂದು ಪುಟ್ಟ ನಮನವಿದೆ.  ಮೊನ್ನೆ ಮೊನ್ನೆಯವರೆಗೂ ಬ್ಲಾಗ್  ಅಪ್ಡೇಟ್ ಮಾಡದೇ ಸುಮ್ಮನಿದ್ದ ಮನಸ್ಸಿಗೆ ಬದರಿ ಸರ್ ಕಳೆದುಹೋದವರ ಲೀಸ್ಟ್ ಲ್ಲಿ ನನ್ನ ಹೆಸರು ನೋಡಿದ್ದೇ ಯಾಕೋ ಸಣ್ಣದೊಂದು ಅಳುಕು ಹುಟ್ಟಿತ್ತು. ಮತ್ತೆ ಬರೆಯಬಲ್ಲೆನಾ ಅಂತ. ಯಾಕೆಂದರೆ ಬರೆಯಲು ನನ್ನಲ್ಲಿ ಏನೂ ಇರಲಿಲ್ಲ. ಅಥವಾ ನನ್ನ ಬರೆಯುವ ಹವ್ಯಾಸವೇ ನನಗೊಂದು ಹುಚ್ಚು ಅನ್ನಿಸಿಬಿಟ್ಟಿತ್ತು. ಅಕ್ಷರಶಃ  ಅಕ್ಷರಗಳು ಮೂಡದ ಮನಸ್ಸಾಗಿಬಿಟ್ಟಿತ್ತು. ಈ ನಡುವೆ ಬತ್ತಿಸಿಕೊಳ್ಳೋದಕ್ಕೆ ಭಾವಗಳು ಇರಲಿಲ್ಲ. ಹುಟ್ಟಿಸಿಕೊಳ್ಳೊದಕ್ಕೆ ಕನಸುಗಳು ಇರಲಿಲ್ಲ. ಕಾವ್ಯ ಪ್ರೀತಿಯ ಬಯಕೆ ಬತ್ತಿದಮೇಲೆ ಬರೆಯುವ ಮೂಢ ಕೆಲಸ ಮಾಡಿರಲಿಲ್ಲ. ಸುಮ್ಮನಿರಬೇಕೆನ್ನಿಸಿದರೆ ಸುಮ್ಮನಿದ್ದುಬಿಡಬೇಕೆ ವಿನಃ ಈ ಜೀವವಿರದ ಬರಹಗಳು ನನಗೇ ರುಚಿಸುತ್ತಿರಲಿಲ್ಲ.


        ಈ ಮಳೆಗಾಲದಲ್ಲಿ ಸರೋವರದಲ್ಲಿ ಮತ್ತೆ ನೀರುಕ್ಕಲಿ. ಯಾರೋ ನೋಡಬೇಕೆಂದು ಓದಬೇಕೆಂದು ಬರೆಯುವುದಲ್ಲ. ನಮ್ಮದೇ ಮನಸು ಹಸುರಾಗಿಸಲು, ಹಗುರಾಗಿಸಲು ಬರೆದುಬಿಡು ಅಂದ ಗೆಳೆಯ ಶ್ರೀವತ್ಸನ ಮಾತು, ಪುಟ್ಟಿ ಸಂಧ್ಯಾಳ ಪ್ರೀತಿ, ಆತ್ಮೀಯ ಗೆಳತಿ ರಜನಿಯ ನಿರಂತರ ಪ್ರೋತ್ಸಾಹ ಮತ್ತೊಮ್ಮೆ ಲೇಖನಿ ಹಿಡಿಸುವಂತೆ ಮಾಡಿತ್ತು! ಈ ಹಿಂದಿನ ಲೇಖನದ ಗಂಭೀರತೆಯೊ ಅಥವಾ ಅದರ ವಿಷಯವೋ ಬಹಳ ಜನರನ್ನು ತಲುಪಿದ್ದು ಸುಳ್ಳು. ಅಥವಾ ರುಚಿಸದಿರಬಹುದು. ಆದರೆ  ಮತ್ತೆ ಮತ್ತೆ ಬಣ್ಣ ಬದಲಿಸುವ ಪೃಕೃತಿಯಂತೆ ಬರಹದ ಶೈಲಿ ವಿಷಯಗಳು ಕೂಡ ಬದಲಾಗಿದೆ ಸರೋವರದಲ್ಲಿ. ಮನಸುಗಳ ಮಾತೀಗ ಭಾವದಂಗಳ ದಾಟಿ ಒಳಜಗುಲಿಯ ವಿಚಾರತೋರಣಕ್ಕೆ ಕಾಲಿಟ್ಟಿದೆ. ನಿಮ್ಮ ಅನಿಸಿಕೆಗಳು ಮೊದಲಿನಂತೆ ಇರಲಿ ಎಂಬ ವಿನಂತಿ. ಇಷ್ಟವಾಗದಿದ್ದದ್ದನ್ನೂ ಹೇಳಬಹುದು. ಮತ್ತೆ ಮನಸುಗಳು ಮಾತಾಡಲಿ...


      ಪ್ರೀತಿ ಒಲವು ಸ್ನೇಹ, ಬಯಕೆ, ಭಾವ, ಬಂಧ, ಸಂಬಂಧಗಳಿಗೆ ಹೊರತಾದ ಪ್ರಪಂಚ ಯಾವುದಿದೆ? ಎಲ್ಲವೂ ಇಲ್ಲಿಯೇ ಹುಟ್ಟಿ ಇಲ್ಲಿಯೇ  ಮುಗಿಯುತ್ತದೆ. ಮತ್ತಷ್ಟುಯ ವಿಜ್ಞಾನ, ತಾಂತ್ರಿಕತೆ, ನಾಗರಿಕತೆ,ಇತಿಹಾಸಗಳ ಬೇರೆ ಬೇರೆ ವಿಷಯಗಳಿರಬಹುದು. ಅಲ್ಲೂ ಕೂಡ ಮಾನವರ ಮನಸುಗಳೇ ಕೆಲಸ ಮಾಡುತ್ತಿವೆ. ಬುದ್ಧಿ ಅಭಿವೃದ್ಧಿಗೆ ಕಾರಣವಾಗಿದೆ. ಜಗತ್ತಿನ ಎಲ್ಲ ಅಭಿವೃದ್ಧಿಗೂ ಮೂಲ ಮನುಷ್ಯ  ಬುದ್ಧಿಗಳೇ.. ಮನುಷ್ಯನೆಂದಮೇಲೆ ಅದೊಂದು ವಯಕ್ತಿಕ ಪ್ರಪಂಚವಿದ್ದೇಇದೆ.  ಅಂತಹ ಮಾನಸಿಕ ಹಾಗೂ ತಾತ್ವಿಕ ಪ್ರಪಂಚದ ಒಳಹೊರಗುಗಳನ್ನು  ಸೂಕ್ಷ್ಮವಾಗಿ ಅವಲೋಕಿಸುವದೇ ನಮ್ಮಂತವರ ಬರಹಕ್ಕೆ ವಿಷಯ. ಹೀಗೆಲ್ಲ ಹೇಳಿದರೆ ಮತ್ತಷ್ಟು ಗೊಂದಲವಾಗಬಹುದೇನೋ. ರೈತನೊಬ್ಬನ ಬದುಕು, ಕಮ್ಮಾರನೊಬ್ಬನ ಮನಸು, ಶಿಲ್ಪಿಯೊಬ್ಬನ ಒಳಗು ಇಂತದ್ದನ್ನೇ ನಾವಿಂದು ಸಾಹಿತ್ಯಪ್ರಪಂಚದ ಉತ್ತಮ ಕಥೆಗಳಲ್ಲಿ ವಸ್ತುಗಳಾಗಿ ನೋಡುತ್ತಿರುವುದು. ಮುಂದಿನ ದಿನಗಳಲ್ಲಿ ಈ ಕಥಾಪ್ರಪಂಚದ ಇನ್ನಷ್ಟು ಪುಟಗಳೊಂದಿಗೆ ನಿಮ್ಮೆದುರು ಬರುತ್ತೇನೆ. ಅಲ್ಲಿಯವರೆಗೆ ಬದರಿ ಸರ್, ಸಂಧ್ಯಾ ಪುಟ್ಟಿ, ಶ್ರೀವತ್ಸ, ರಜನೀ ನಿಮಗೂ ನಿಮ್ಮಂತ ಪ್ರೀತಿ ತೋರಿದ ಎಲ್ಲರಿಗೂ ಮನಸಾರೆ ವಂದಿಸುತ್ತ.


ಸಣ್ಣದೊಂದು ವಿರಾಮ.  

1 comment: